ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!
ಮಡಿಕೇರಿ, ಸೆಪ್ಟೆಂಬರ್.20: ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳು ಎಂದರೆ ಕೊಡಗಿಗೆ ಅತಿಥಿಗಳು ಬರುವ ಕಾಲ ಎಂದೇ ಹೇಳಲಾಗುತ್ತಿತ್ತು. ಕಾರಣ ಆ ವೇಳೆಗೆ ಭೋರ್ಗರೆದು ಸುರಿಯುತ್ತಿದ್ದ ಮಳೆಯೂ ಕಡಿಮೆಯಾಗಿ ಬಿಸಿಲು ಕಾಣಿಸಿಕೊಳ್ಳುತ್ತಿತ್ತು.
ಕೆಸರುಮಯ ರಸ್ತೆಗಳು ಒಣಗಿ, ಎಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಸಣ್ಣಗೆ ನಡುಕ ಹುಟ್ಟಿಸುವ ಚಳಿಗಾಳಿ ಮುದ ನೀಡುತ್ತಿತ್ತು. ಮಳೆ ಎಂದು ಕೊಡಗಿನತ್ತ ಬಾರದೆ ಕುಳಿತ ಪ್ರವಾಸಿಗರು ಈ ಸಮಯದಲ್ಲಿ ಪ್ರವಾಸ ಬರುತ್ತಿದ್ದರು.
ಇದೇ ವೇಳೆ ದಸರಾ, ಕಾವೇರಿ ತೀರ್ಥೋದ್ಬವವೂ ನಡೆಯುತ್ತಿದ್ದರಿಂದ ಒಂದು ರೀತಿಯ ಸುಂದರ ವಾತಾವರಣ ನಿರ್ಮಾಣವಾಗುತ್ತಿತ್ತು. ಇದೆಲ್ಲವೂ ಈಗಿನ ಮಾತಲ್ಲ. ಎರಡು ಮೂರು ದಶಕಗಳ ಹಿಂದಿನ ಮಾತು. ಈಗ ಎಲ್ಲವೂ ಬದಲಾಗಿದೆ.
ಅದರಲ್ಲೂ ಒಂದೆರಡು ದಶಕಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಸಮಯದಲ್ಲೂ ಪ್ರವಾಸಿಗರ ದಂಡು ಇತ್ತ ಕಡೆ ಬರುತ್ತಿತ್ತು. ಆದರೆ ಈ ಬಾರಿಯ ಮಹಾಮಳೆ ಕೊಡಗಿನಲ್ಲಿ ಅದರಲ್ಲೂ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿಗೆ ಸೇರುವ ಕೆಲವು ಗ್ರಾಮಗಳನ್ನು ಅಲ್ಲೋಲ ಕಲ್ಲೋಲ ಮಾಡಿದೆ.
ಇದರಿಂದ ಭಯಗೊಂಡ ಪ್ರವಾಸಿಗರು ಇದೀಗ ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಕುಂಠಿತಗೊಂಡಿದೆ. ಇಲ್ಲಿನ ಬಹಳಷ್ಟು ಜನ ಹೋಂ ಸ್ಟೇ ನಡೆಸುತ್ತಿದ್ದು, ಪ್ರವಾಸಿಗರೇ ಇವರಿಗೆ ಆದಾಯದ ಮೂಲವಾಗಿತ್ತು. ಜತೆಗೆ ಪ್ರವಾಸಿಗರು ಬಾರದ ಕಾರಣ ವ್ಯಾಪಾರವೂ ಇಳಿಮುಖವಾಗಿದೆ. ವಿವರವಾದ ಮಾಹಿತಿಗಾಗಿ ಮುಂದೆ ಓದಿ...

ಚಳಿ ಮಾಯ
ಜಲಪ್ರಳಯವಾದ ಕಾರಣ ರಸ್ತೆ ಕುಸಿತಗೊಂಡಿದ್ದರಿಂದ ಮಡಿಕೇರಿ ಮತ್ತು ಸುಳ್ಯ ನಡುವಿನ ಸಂಚಾರ ಇನ್ನೂ ಕೂಡ ಸರಿಹೋಗಿಲ್ಲ. ಇದರಿಂದಲೂ ವ್ಯಾಪಾರಕ್ಕೆ ತೊಂದರೆಯಾಗಿದೆ. ಇನ್ನು ಮಳೆ ಸುರಿದು ಹೋದ ಬಳಿಕ ಬಿಸಿಲಿನ ಧಗೆಯೂ ಹೆಚ್ಚಾಗಿದೆ. ಚಳಿ ಮಾಯವಾಗಿದೆ.
ಮಳೆಯ ವೇಳೆ ತುಂಬಿ ಹರಿದ ತೊರೆ, ಹೊಳೆಗಳಲ್ಲಿ ನೀರು ಈಗ ಕಡಿಮೆಯಾಗಿದೆ. ಇದು ಕೂಡ ಭಯದ ಪರಿಸ್ಥಿತಿಯನ್ನು ಹುಟ್ಟು ಹಾಕಿದೆ.

ಕಂಗಾಲಾದ ವ್ಯಾಪಾರಸ್ಥರು
ದಸರಾ ಹಬ್ಬ ಮತ್ತು ಕಾವೇರಿ ಜಾತ್ರೆಗಳು ಹತ್ತಿರದಲ್ಲೇ ಇರುವುದರಿಂದ ಮತ್ತು ಪ್ರಳಯದಿಂದ ಕಂಗಾಲಾಗಿರುವ ಕಾರಣ ಈ ಬಾರಿ ದಸರಾವನ್ನು ಸಾಂಪ್ರದಾಯಿಕ ಮತ್ತು ಸರಳವಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ದಸರಾ ವೇಳೆಯಲ್ಲಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು.
ಆದರೆ ಈ ಬಾರಿ ಅದೇ ರೀತಿ ಬರುತ್ತಾರೋ ಗೊತ್ತಿಲ್ಲ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಬರುವವರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಮಳೆಯ ಸಂದರ್ಭ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತಾದರೂ ಜಿಲ್ಲಾಡಳಿತ ಸೆ.10 ರಿಂದ ಮತ್ತೆ ಪ್ರವಾಸಿಗರು ಕೊಡಗ ಜಿಲ್ಲೆಯನ್ನು ಪ್ರವೇಶಿಸಬಹುದೆಂದು ಮುಕ್ತ ಅವಕಾಶ ಕಲ್ಪಿಸಿದೆ.
ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತ ಬರುವ ಮನಸ್ಸು ಮಾಡುತ್ತಿಲ್ಲ. ಇದರಿಂದ ರೆಸಾರ್ಟ್, ಹೊಟೇಲ್, ಹೋಂ ಸ್ಟೇ ಮಾಲೀಕರುಗಳು ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಸಂಪೂರ್ಣ ಹದಗೆಟ್ಟ ರಸ್ತೆಗಳು
ಇದೀಗ ಪ್ರವಾಸಿಗರು ಕೊಡಗಿಗೆ ಬಂದರೂ ಬಹಳಷ್ಟು ಪ್ರವಾಸಿತಾಣಗಳಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ರೆಸಾರ್ಟ್, ಹೋಂಸ್ಟೇಗಳಿಗೆ ತೆರಳಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಪ್ರವಾಸಿಗರನ್ನೇ ನಂಬಿ ಬದುಕುವ ಇಲ್ಲಿನ ಕಾಫಿ ಬೆಳೆಗಾರರು ಪರದಾಡುವಂತಾಗಿದೆ.
ಮೊದಲು ಕೃಷಿಯನ್ನೇ ನಂಬಿ ಬದುಕುತ್ತಿದ್ದ ಬೆಳೆಗಾರರು ಬಳಿಕ ಹೋಂಸ್ಟೇ ಮೂಲಕ ಬದುಕನ್ನು ಕಂಡುಕೊಂಡಿದ್ದರು. ಆದರೆ ಈಗ ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಆತಂಕಕ್ಕೀಡಾಗಿದ್ದಾರೆ.

ಜನಕ್ಕೆ ಇನ್ನಷ್ಟು ತೊಂದರೆ!
ಇನ್ನು ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳಿಗೆ ಪ್ರವಾಸೋದ್ಯಮದ ಒತ್ತಡವೇ ಪ್ರಮುಖ ಕಾರಣವೆಂದು ಪರಿಸರವಾದಿಗಳು ದೂರುತ್ತಿದ್ದಾರೆ. ಆದರೆ ಪ್ರವಾಸೋದ್ಯಮ ಕುಗ್ಗಿದರೆ ಅದರ ಪರಿಣಾಮ ಜಿಲ್ಲೆಯ ಮೇಲೆ ಆಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಬದಲಾದ ವಾತಾವರಣ, ಹವಾಗುಣ ವೈಪರೀತ್ಯ ಎಲ್ಲದರ ನಡುವೆ ಇಲ್ಲಿನ ಜನ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಪ್ರವಾಸೋದ್ಯಮ ಕುಗ್ಗಿದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications