ಟಿಪ್ಪು ಜಯಂತಿ: ನ.10 ರಂದು ಸ್ವಯಂಘೋಷಿತ ಕೊಡಗು ಬಂದ್ ಗೆ ಕರೆ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯು ನವೆಂಬರ್ 10 ರಂದು ಕೊಡಗು ಬಂದ್ ಗೆ ಕರೆ ನೀಡಿದೆ.ಇದಕ್ಕೆ ಎಲ್ಲ ಸಂಘ-ಸಂಸ್ಥೆಗಳು,ವ್ಯಾಪಾರಿಗಳು,ವಾಹನ ಮಾಲೀಕರು ಹಾಗೂ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಸರ್ವ ಜನರು ಬೆಂಬಲ ನೀಡುವಂತೆ ಮನವಿ ಮಾಡಿದೆ.
ಮಡಿಕೇರಿ, ನವೆಂಬರ್. 09: ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆಯಾದರೂ ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ನಲ್ಲಿ ಆಚರಣೆ ಮಾಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ.ಇದರಿಂದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯು ನವೆಂಬರ್ 10 ರಂದು ಕೊಡಗು ಬಂದ್ ಗೆ ಕರೆ ನೀಡಿದೆ.
ಕೊಡಗಿನ ಜನರ ವಿರೋಧದ ನಡುವೆಯೂ ರಾಜ್ಯ ಸರಕಾರ ನ. 10 ರಂದು ಟಿಪ್ಪು ಜಯಂತಿಯನ್ನು ಆಚರಿಸಲು ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಸ್ವಯಂ ಘೋಷಿತ ಕೊಡಗು ಬಂದ್ ನಡೆಸಬೇಕೆಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದು. [ಕೊಡಗು: ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ]
ಇದಕ್ಕೆ ಎಲ್ಲ ಸಂಘ-ಸಂಸ್ಥೆಗಳು, ವ್ಯಾಪಾರಿಗಳು, ಚೇಂಬರ್ ಆಫ್ ಕಾಮರ್ಸ್, ವಾಹನ ಮಾಲೀಕರು ಮತ್ತು ಚಾಲಕರು ಹಾಗೂ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಸರ್ವ ಜನರು ಜಾತಿ, ಮತ, ಬೇಧ ಮರೆತು ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. [ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವಿರೋಧದ ಅಲೆ]
ಈ ಕುರಿತು ಮಾತನಾಡಿದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಅಭಿಮನ್ಯುಕುಮಾರ್, ಅಂದು ಜೈಲ್ ಭರೋ ಚಳುವಳಿಗೂ ಸಮಿತಿ ನಿರ್ಧರಿಸಿರುವುದಾಗಿಯೂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಯ ವಿರುದ್ಧ 107 ಸೆಕ್ಷನ್ ನಡಿ ದೂರು ದಾಖಲಿಸಿ ಸರಕಾರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಟಿಪ್ಪು ಜಯಂತಿ ಸಂಬಂಧ ಕರೆಯಲಾಗಿದ್ದ ಶಾಂತಿ ಸಭೆಯೊಂದಕ್ಕೆ ಕೇವಲ ಎಂಟು ಮಂದಿ ಮಾತ್ರ ಬಂದಿರುವುದು ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಇರುವ ವಿರೋಧಕ್ಕೆ ಸಾಕ್ಷಿಯಾಗಿದೆ ಎಂದರು.
ಬಂದ್ ಕಾರಣದಿಂದ ನ. 10 ರಂದು ವಿಹೆಚ್ ಪಿ ನಾಯಕ ಕುಟ್ಟಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯಾ ಗ್ರಾಮ ವ್ಯಾಪ್ತಿಯಲ್ಲೇ ಮಾಡುವಂತೆ ಕರೆ ನೀಡಿದ್ದಾರೆ.
ಜಿಲ್ಲೆಯಲ್ಲಿ ನಿಷೇಧಾಜ್ಞೆ: ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್ 144ರಡಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶ ಹೊರಡಿಸಿದ್ದು, ನ.11ರ ಬೆಳಿಗ್ಗೆ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಈ ದಿನಗಳದಂದು ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ನಿಯೋಜಿತ ಮದುವೆ ಸಮಾರಂಭಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸಾರ್ವಜನಿಕ, ರಾಜಕೀಯ ಬಹಿರಂಗ ಸಭೆ-ಸಮಾರಂಭ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತಾ-ರೋಕೋ ಹಾಗೂ ಮುತ್ತಿಗೆ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದ್ದಾರೆ.