ಪರ-ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆಗೆ ಮಡಿಕೇರಿ ಸಜ್ಜು
ಮಡಿಕೇರಿ, ನವೆಂಬರ್ 07: ನವೆಂಬರ್ 10ರಂದು ಆಚರಿಲ್ಪಡುತ್ತಿರುವ ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಮತ್ತೊಂದೆಡೆ ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ನಲ್ಲಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ.
2015ರಲ್ಲಿ ನಡೆದ ಟಿಪ್ಪು ಜಯಂತಿಯ ಗಲಭೆ, ಸಾವು, ನೋವು ಎಲ್ಲವೂ ಇನ್ನೂ ಹಸಿರಾಗಿದ್ದು, ಮತ್ತೆ ಏನಾಗಿ ಬಿಡುತ್ತದೆಯೋ ಎಂಬ ಭಯ ಜಿಲ್ಲೆಯ ಜನರನ್ನು ಕಾಡತೊಡಗಿದೆ. ಹಿಂದೂಪರ ಮತ್ತು ಕೊಡವ ಸಂಘಟನೆಗಳು ಸೇರಿದಂತೆ ಶಾಸಕರು, ಜನಪ್ರತಿನಿಧಿಗಳು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.
ಟಿಪ್ಪು ಜಯಂತಿ ಆಚರಣೆ ಕುರಿತಂತೆ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದ ಸಂದರ್ಭ ಟಿಪ್ಪು ಜಯಂತಿ ಆಚರಣೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಮುಖ್ಯಮಂತ್ರಿ ಆಗಿರುವ ಅವರಿಗೆ ಟಿಪ್ಪುಜಯಂತಿಯನ್ನು ರದ್ದುಪಡಿಸಲು ಅವಕಾಶವಿದೆ. ಇದೀಗ ಮೌನವಾಗಿರುವ ಅವರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು ಅಧಿಕಾರ ಇಲ್ಲದಿದ್ದಾಗ ಒಂದು ಮಾತು, ಅಧಿಕಾರ ಇರುವಾಗ ಮೌನ ತಾಳಿದ್ದಾರೆ ಎಂದು ದೂರಿದ ಬೋಪಯ್ಯ ಟಿಪ್ಪು ಜಯಂತಿ ಆಚರಣೆಗೂ ಮುನ್ನ ಕೊಡಗಿನಲ್ಲಿ ಯಾವುದೇ ಕೋಮು ಸಂಘರ್ಷ ಇರಲಿಲ್ಲ. ಟಿಪ್ಪು ಜಯಂತಿ ಮೂಲಕ ಅದನ್ನು ಹುಟ್ಟು ಹಾಕಲಾಗಿದೆ. ಇಸ್ಲಾಂ ಧರ್ಮದಲ್ಲಿ ಯಾವುದೇ ಜಯಂತಿ ಆಚರಣೆ ಮಾಡುವಂತಿಲ್ಲ.
ಆದರೆ ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದ ನಂತರ ಇಲ್ಲಿ ಎಲ್ಲ ಧರ್ಮೀಯರ ನಡುವಿನ ಸಹೋದರತ್ವಕ್ಕೆ ಧಕ್ಕೆ ಒದಗಿದೆ. ಕ್ರೈಸ್ತ ಜನಾಂಗಕ್ಕೂ ಟಿಪ್ಪು ಜಯಂತಿ ಅಗತ್ಯವಿಲ್ಲ. ಈ ಹಿಂದೆ ಟಿಪ್ಪು ಸುಲ್ತಾನ್ ಅವಧಿಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯವನ್ನೂ ಭಗ್ನಗೊಳಿಸಲು ಟಿಪ್ಪು ಯತ್ನಿಸಿದ್ದ.
ಮಂಗಳೂರು ಹಾಗೂ ಕೇರಳದಲ್ಲಿಯೂ ಟಿಪ್ಪು ಜಯಂತಿ ಅಚರಣೆಗೆ ಕ್ರೈಸ್ತ ಧರ್ಮೀಯರ ವಿರೋಧವಿದೆ ಎಂದು ಹೇಳಿದ್ದಾರೆ.

ನ.10ರಂದು ಕರಾಳ ದಿನಾಚರಣೆಗೆ ನಿರ್ಧಾರ
ಇನ್ನೊಂದೆಡೆ ಯುನೈಟೆಡ್ ಕೊಡವ ಆರ್ಗನೈಷೆಶನ್ (ಯುಕೊ) ಸಂಘಟನೆಯೂ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕೊಡವರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸಹಸ್ರಾರು ಕೊಡವರ ಮಾರಣಹೋಮಕ್ಕೆ ಕಾರಣಕರ್ತನಾಗಿರುವ ಟಿಪ್ಪುವನ್ನು ವೈಭವಿಕರಿಸಿ ಆತನ ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರವು ಜನರ ಭಾವನೆಯನ್ನು ಅವಮಾನಿಸಿದೆ. ಆದ್ದರಿಂದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನ.10ರಂದು ಕರಾಳ ದಿನ ಆಚರಿಸುವುದಾಗಿ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಹೇಳಿದ್ದಾರೆ.
ಸೂಕ್ತ ಬಂದೋಬಸ್ತ್
ಜಿಲ್ಲಾಡಳಿತ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಜತೆಗೆ ವಿರೋಧದ ನಡುವೆಯೂ ಜಯಂತಿಯನ್ನು ಆಚರಿಸಲು ಸಿದ್ಧತೆ ನಡೆಸಿದೆ. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಒಟ್ಟಿನಲ್ಲಿ ಪರ ವಿರೋಧದ ನಡುವೆ ಟಿಪ್ಪು ಜಯಂತಿ ಜಿಲ್ಲೆಯಲ್ಲಿ ನಡೆಯಲಿದ್ದು ಒಂದು ರೀತಿಯ ಆತಂಕವಂತೂ ಇಲ್ಲಿನ ಜನರಿಗೆ ಇದ್ದೇ ಇದೆ ಎಂದರೆ ತಪ್ಪಾಗಲಾರದು.












Click it and Unblock the Notifications