ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್ ಎಚ್ಚರಿಕೆ
ಮಡಿಕೇರಿ, ಫೆಬ್ರವರಿ 25: ಕಾಫಿ, ಕರಿಮೆಣಸು ಬೆಲೆ ಇಳಿಕೆ ಮತ್ತು ಕೊರೋನಾದಂತಹ ಮಹಾಮಾರಿಯಿಂದ ನಲುಗಿರುವ ಕೊಡಗಿನ ಜನರಿಗೆ ಹುಲಿ ಹಾವಳಿ ನುಂಗಲಾರದ ತುತ್ತಾಗಿದೆ. ಒಂದೇ ದಿನದಲ್ಲಿ ಎರಡು ಜೀವಗಳು ಹುಲಿಗೆ ಬಲಿಯಾಗಿವೆ. ಇದರಿಂದ ಆಕ್ರೋಶಗೊಂಡಿರುವ ಜನ ಕೊಡಗು ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇಬ್ಬರನ್ನು ಬಲಿ ತೆಗೆದುಕೊಂಡಿರುವ ಹುಲಿ ಆಗಾಗ್ಗೆ ಜಾನುವಾರುಗಳನ್ನು ತಿಂದು ಹಾಕುತ್ತಲೇ ಇದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ವಿವಿಧ ಭಾಗದಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಇದರಿಂದ ದಕ್ಷಿಣ ಕೊಡಗಿನ ಜನತೆ ತತ್ತರಿಸಿ ಹೋಗಿದ್ದಾರೆ.
ಮಡಿಕೇರಿ; ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ 4ನೇ ದಿನಕ್ಕೆ
ಈ ಕುರಿತಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, "ಹುಲಿ ದಾಳಿ ನಿಯಂತ್ರಣಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳು ದಕ್ಷಿಣ ಕೊಡಗಿಗೆ ಆಗಮಿಸಿ ಹುಲಿ ಕಾರ್ಯಾಚರಣೆ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಹುಲಿಯನ್ನು ಗುಂಡಿಕ್ಕುವ ತೀರ್ಮಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ರೈತರ ಮುಂದೆ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ
ಕೊಡಗಿನ ಶ್ರೀಮಂಗಲ, ಟಿ. ಶೆಟ್ಟಿಗೇರಿ ಹಾಗೂ ಇತರೆಡೆಯಲ್ಲಿ ಹುಲಿಯು ತಿರುಗಾಟ ನಡೆಸುತ್ತಲೇ ಇದ್ದು ಕಳೆದ ನಾಲ್ಕು ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹುಲಿಯನ್ನು ಕಂಡು ಪ್ರಜ್ಞೆ ತಪ್ಪಿದ್ದಾಳೆ.
ಅಲ್ಲದೆ ವಿವಿಧ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಹೆಜ್ಜೆ ಗುರುತುಗಳು ಈ ಭಾಗದ ರೈತರು ಕಂಡಿದ್ದಾರೆ. ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಯಾರು ಕೂಡ ಧೈರ್ಯವಾಗಿ ಓಡಾಟ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣ ಭಯದೊಂದಿಗೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ; ನರಭಕ್ಷಕ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ
"ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ 6 ಹೆಚ್ಚು ಹುಲಿಗಳ ಸಂಚಾರವಿದ್ದು, ಇವುಗಳನ್ನು ನಿಯಂತ್ರಣಕ್ಕೆ ತರಲು ತಕ್ಷಣ ಅರಣ್ಯ ಸಚಿವರ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು ಹುಲಿಯ ನಿಯಂತ್ರಣಕ್ಕೆ ಇತಿಶ್ರೀ ಹಾಡಬೇಕು. ಅರಣ್ಯ ಸಚಿವರು ವಾರದೊಳಗೆ ಸಭೆ ಕರೆಯಲು ವಿಫಲರಾದರೆ ಕೊಡಗಿನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡಗು ಬಂದ್ಗೆ ಕರೆ ನೀಡಲಾಗುವುದು" ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಟಿ. ಶೆಟ್ಟಿಗೇರಿಯಲ್ಲಿ ಅಮಾಯಕ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ್ದನ್ನು ಖಂಡಿಸಿ ರೈತ ಸಂಘ ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೂಡಲೇ ರೈತರೊಂದಿಗೆ ತುರ್ತು ಸಭೆ ನಡೆಸಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಬಗ್ಗೆ ಸಭೆ ನಡೆಸುವ ತೀರ್ಮಾನ ಕೈಗೊಂಡಿದ್ದರು. ಈ ಬಗ್ಗೆ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
Recommended Video
ವಿವಿಧ ಭಾಗದಲ್ಲಿ ಹುಲಿಯ ಸಂಚಾರದ ಹಿನ್ನಲೆಯಲ್ಲಿ ಈ ಭಾಗದ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನದ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಲ್ಲದೆ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುವ ವೇಳೆ ಹುಲಿಯು ಎದುರಾಗಿ ಮನುಷ್ಯನ ಮೇಲೆ ಎರಗುವ ಪರಿಸ್ಥಿತಿ ಸಂಭವಿಸಿದಲ್ಲಿ ರೈತರ ಬಳಿ ಇರುವ ಬಂದೂಕನ್ನು ಹುಲಿಯ ಮೇಲೆ ಪ್ರಯೋಗಿಸಲು ವಿಶೇಷ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.