ಜ್ಯೋತಿಷಿಗಳ ಪ್ರಕಾರ, ಕೊಡಗಿನಲ್ಲಿ ಈ ಬಾರಿಯೂ ಮಳೆ ಅಬ್ಬರಿಸಲಿದೆ!
ಮಡಿಕೇರಿ, ಜೂನ್ 10: ಕಳೆದ ವರ್ಷದ ಮುಂಗಾರು ಮಳೆ ಕೊಡಗಿನಲ್ಲಿ ತಂದೊಡ್ಡಿದ ಅನಾಹುತ ಇನ್ನೂ ಎಲ್ಲರ ಮನದಲ್ಲಿ ಹಸಿರಾಗಿದೆ. ಅಷ್ಟೇ ಅಲ್ಲ ದುರಂತ ದೃಶ್ಯಗಳು ಸಾಕ್ಷಿಯಾಗಿ ಕಣ್ಣ ಮುಂದೆಯೇ ನಿಂತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಇಲ್ಲಿ ಸುರಿದ ಮಳೆಯ ಪ್ರಮಾಣ ಕಡಿಮೆಯಿದೆ. ಈಗಷ್ಟೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದ್ದು, ಅಲ್ಲಿಂದ ಕೊಡಗಿನತ್ತ ನಿಧಾನವಾಗಿ ಆಗಮಿಸುವ ಸಾಧ್ಯತೆಯಿದೆ. ಈ ಬಾರಿ ಕೊಡಗಿನಲ್ಲಿ ಮುಂಗಾರು ಮಳೆ ಹೇಗಿರಲಿದೆ? ಏನಾದರೂ ಅನಾಹುತವಾಗಲಿದೆಯೇ? ಮುಂತಾದ ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಕೊಡಗಿನ ಮಳೆಯ ಬಗ್ಗೆ ಪ್ರತಿ ವರ್ಷವೂ ಕೆಲವರು ಜ್ಯೋತಿಷ್ಯ ಹೇಳುತ್ತಾರೆ. ಕೆಲವು ಹಿರಿಯರು ಕೆಲವೊಂದು ಮರ ಹೂ ಬಿಟ್ಟಿರುವುದನ್ನೇ ಆಧಾರವಾಗಿಟ್ಟುಕೊಂಡು ಮುಂಗಾರು ಮಳೆ ಜಾಸ್ತಿಯೋ? ಕಡಿಮೆಯೋ? ಎಂಬುದರ ಬಗ್ಗೆ ಹೇಳುತ್ತಿದ್ದರು. ಅದು ಭವಿಷ್ಯ ಎನ್ನುವುದಕ್ಕಿಂತ ಅನುಭವವಾಗಿರುತ್ತಿತ್ತು.

ಈಗಂತೂ ಚುನಾವಣಾ ಫಲಿತಾಂಶದಿಂದ ಆರಂಭವಾಗಿ ಎಲ್ಲ ವಿಚಾರಗಳಲ್ಲಿಯೂ ಜ್ಯೋತಿಷ್ಯ ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡುಬರುತ್ತಿದೆ. ಅದೇ ರೀತಿ ಕೊಡಗಿನಲ್ಲಿ ಈ ಬಾರಿಯ ಮುಂಗಾರು ಮಳೆ ಹೇಗಿರಲಿದೆ ಎಂಬುದರ ಬಗ್ಗೆ ವಿರಾಜಪೇಟೆಯ ಕರೋಟಿರ ಶಶಿ ಸುಬ್ರಮಣಿ ಅವರು ಒಂದಿಷ್ಟು ವಿಚಾರಗಳನ್ನು ಪ್ರಸ್ತಾಪಿಸಿದರು.
ಅವರ ಪ್ರಕಾರ, ಕೊಡಗಿನಲ್ಲಿ ಇನ್ನು ಕೆಲವು ದಿನಗಳಲ್ಲಿ ಉತ್ತಮ ಮಳೆ ಸುರಿಯಲಿದೆಯಂತೆ. ಮಿಥುನ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದವರೆಗೆ, ಅಂದರೆ ಜೂ15 ರಿಂದ ಜು16ರವರೆಗೆ ಸಾಧಾರಣ ಮಳೆಯಾಗಲಿದೆಯಂತೆ. ಇದರ ನಡುವೆ ಆರಿದ್ರಾ ನಕ್ಷತ್ರ ಪ್ರವೇಶ ಮಾಡುವ ಕಾಲದಲ್ಲಿ ಅಂದರೆ ಜೂ22ರಿಂದ 24ರವರೆಗೆ ಉತ್ತಮ ಮಳೆಯಾಗಲಿದೆಯಂತೆ. ಇದಾದ ಬಳಿಕ ಜುಲೈ 16 ಮತ್ತು 17ರ ಚಂದ್ರಗ್ರಹಣ ಸೇರಿದಂತೆ ಗ್ರಹ ಸಂಚಾರಗಳನ್ನು ಗಮನಿಸಿದರೆ ಜು 17ರ ಬಳಿಕ ಸುಮಾರು ಇಪ್ಪತ್ತರಿಂದ ಇಪ್ಪತೈದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆಯಂತೆ. ಇದರಿಂದ ಜನ ಜಾನುವಾರು, ಕಷ್ಟ ನಷ್ಟಗಳು ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸೆಪ್ಟಂಬರ್ ತಿಂಗಳಲ್ಲೂ ಮಳೆ ಸುರಿಯಲಿದೆ ಎಂದು ತಿಳಿಸಿದ್ದಾರೆ. ಚಂದ್ರ ಗ್ರಹಣದ ಪರಿಣಾಮ ಉತ್ತರ ಭಾರತದಲ್ಲಿ ಭಾರೀ ತೊಂದರೆ ಸಂಭವಿಸುವ ಬಗ್ಗೆಯೂ ಸೂಚನೆ ನೀಡಿದ್ದಾರೆ.
ಇನ್ನು ಕೊಡಗಿನ ಮಳೆಗಾಲದ ಬಗ್ಗೆ ಕೋಡಿಶ್ರೀಗಳು ಕೂಡ ಈ ಹಿಂದೆಯೇ ಭವಿಷ್ಯ ನುಡಿದಿದ್ದು, ಹೆಚ್ಚು ಮಳೆಯಾಗುವುದರಿಂದ ರೋಗ ರುಜಿನಗಳು, ಕಷ್ಟನಷ್ಟಗಳಾಗುವ ಬಗ್ಗೆಯೂ ತಿಳಿಸಿದ್ದಾರೆ.
ಹಾಗೆ ನೋಡಿದರೆ ಕೊಡಗಿನ ಜನರಿಗೆ ಮಳೆಗಾಲದಲ್ಲಿ ಕಷ್ಟ ನಷ್ಟಗಳು ಸಂಭವಿಸುವುದು ಹೊಸತೇನಲ್ಲ. ಅದೆಲ್ಲವನ್ನು ಮೀರಿ ನಿಂತು ಇಲ್ಲಿನ ಜನ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಬಾರಿಯಾದ ದುರಂತ ಈ ಬಾರಿ ಸಂಭವಿಸದಿದ್ದರೆ ಸಾಕು ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.












Click it and Unblock the Notifications