ಇನ್ಮುಂದೆ ತಡಿಯಂಡಮೋಳ್ ಚಾರಣಕ್ಕೆ ಅನುಮತಿ ಕಡ್ಡಾಯ!
ಮಡಿಕೇರಿ, ಡಿಸೆಂಬರ್ 15: ಮಳೆಗಾಲ ಕಳೆಯುತ್ತಿದ್ದಂತೆಯೇ ಚಾರಣಕ್ಕಾಗಿ ಹೊರ ಜಿಲ್ಲೆಗಳಿಂದ ಕೊಡಗಿಗೆ ಚಾರಣಿಗರು ಬರುವುದು ವಾಡಿಕೆ. ಬರುವ ಚಾರಣಿಗರು ತಡಿಯಂಡಮೋಳ್ ಬೆಟ್ಟವೇರಲು ಬಯಸುತ್ತಾರೆ. ಮೊದಲೆಲ್ಲಾ ಚಾರಣಕ್ಕೆ ಉಚಿತ ಅವಕಾಶವಿತ್ತು.ಆದರೆ ಈಗ ಅರಣ್ಯ ಇಲಾಖೆ ಅನುಮತಿ ಕಡ್ಡಾಯವಾಗಿದೆ.
ತಡಿಯಂಡಮೋಳ್ ಬೆಟ್ಟವನ್ನೇರುವುದು ಸುಲಭದ ಕೆಲಸವಲ್ಲ. ಕಲ್ಲು, ಮುಳ್ಳು, ಏರು ಹಾದಿಯಲ್ಲಿ ಸಾಗವುದು ನಮ್ಮ ದೈಹಿಕ ಸಾಮರ್ಥ್ಯಕ್ಕೆ ಸವಾಲ್ ಎಂದರೆ ತಪ್ಪಾಗಲಾರದು. ಆದರೆ ನಿಸರ್ಗದ ಸೌಂದರ್ಯವನ್ನು ಆಸ್ವಾಧಿಸುತ್ತಾ ಬೆಟ್ಟವೇರಿದರೆ ಅದರಿಂದ ಸಿಗುವ ಮಜಾವೇ ಬೇರೆ. ಇನ್ನು ಬೆಟ್ಟದ ತುದಿಯನ್ನೇರಿ ಅಲ್ಲಿಂದ ಕಾಣಸಿಗುವ ನಿಸರ್ಗ ಸೌಂದರ್ಯದತ್ತ ಪಕ್ಷಿನೋಟ ಹರಿಸಿದರೆ ನಿಸರ್ಗದ ಸ್ವರ್ಗವೇ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತದೆ.[ಮಡಿಕೇರಿಯ ಎರಡು ಶತಮಾನದ ನಾಲ್ಕುನಾಡು ಅರಮನೆ]
ಮೊದಲೆಲ್ಲ ಯಾರೂ ಬೇಕಾದರೂ ಇಲ್ಲಿಗೆ ಬಂದು ಬೆಟ್ಟವನ್ನೇರ ಬಹುದಾಗಿತ್ತು. ಈಗ ಹಾಗಿಲ್ಲ. ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜತೆಗೆ ಅರಣ್ಯ ಇಲಾಖೆಯೇ ಚಾರಣಿಗರಿಗೆ ಮಾರ್ಗದರ್ಶನವನ್ನು ನೀಡಲಿದೆ.
ನೆರೆ ರಾಜ್ಯಗಳ ಚಾರಣಿಗರು ಮಾತ್ರವಲ್ಲದೆ, ದೇಶವಿದೇಶಗಳ ಹಲವು ಆಸಕ್ತರು ಚಾರಣಕ್ಕೆ ಬರುತ್ತಾರೆ. ಹೀಗೆ ಬರುವ ಚಾರಣಿಗರು ಅಕ್ರಮ ಚಟುವಟಿಕೆ ನಡೆಸಿದರೂ ಯಾರೂ ಕೇಳುವವರಿರಲಿಲ್ಲ. ಇದೀಗ ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಾರಣಿಗರಿಗೆ ಅಗತ್ಯ ಮಾಹಿತಿ ನೀಡುವುದು ಮತ್ತು ಅಕ್ರಮಗಳಿಗೆ ತಡೆಯೊಡ್ಡಲು ಮುಂದಾಗಿದೆ. ಬೆಟ್ಟ ಪ್ರವೇಶಿಸುವ ದಾರಿಯಲ್ಲಿ ಸ್ವಾಗತ ಕಮಾನು ಹಾಗೂ ಪ್ರವೇಶ ಶುಲ್ಕ ಕೇಂದ್ರವನ್ನು ಆರಂಭಿಸಲಿದೆ.[ಮಳೆಗಾಲದ ದಿನ ಚೇಲಾವರದ ಜಲಧಾರೆ ಅರಸಿ...]
ಬೆಟ್ಟ ಏರುವ ಸಂದರ್ಭದಲ್ಲಿ ಚಾರಣಿಗರಿಗೆ ಅನುಕೂಲವಾಗಲೆಂದು ಅಲ್ಲಲ್ಲಿ ನಾಮಫಲಕಗಳನ್ನು, ಬೆಟ್ಟದ ತುದಿಯಲ್ಲಿ ಚಾರಣಿಗರು ಸುತ್ತಲಿನ ವಿಹಂಗಮ ನೋಟವನ್ನು ಸವಿಯಲು ವೀಕ್ಷಣಾ ಗೋಪುರ ನಿರ್ಮಿಸಲು ಮುಂದಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯೊಳಗೆ ಹಿಂತಿರುಗಬೇಕು ಎಂಬ ಕಠಿಣ ಕ್ರಮವನ್ನು ಜಾರಿಗೆ ತಂದಿದೆ.
ಸಾಗುವ ಹಾದಿಯ ಬಗ್ಗೆ ಹೇಳುವುದಾದರೆ 1717ಮೀ. ಎತ್ತರದ ತಡಿಯಂಡಮೋಳ್ ಬೆಟ್ಟ ಮಡಿಕೇರಿಯಿಂದ 48 ಕಿ.ಮೀ.ದೂರದಲ್ಲಿದೆ. ಮಡಿಕೇರಿಯಿಂದ ನಾಪೋಕ್ಲು ಮೂಲಕ ಕಕ್ಕಬ್ಬೆಗೆ ತೆರಳಿ ಅಲ್ಲಿಂದ ಅಲ್ಲಿಂದ ಯವಕಪಾಡಿ ಗ್ರಾಮದ ಮಾರ್ಗದಲ್ಲಿ ಸಾಗಬೇಕು. ಕಕ್ಕಬ್ಬೆಯಿಂದ ತಡಿಯಂಡಮೋಳ್ ಬೆಟ್ಟದತ್ತ ಸಾಗಲು ಬಸ್ಗಳಿಲ್ಲ ಹೀಗಾಗಿ ಕಕ್ಕಬ್ಬೆಯಿಂದ ಬಾಡಿಗೆ ಜೀಪ್ ನಲ್ಲಿ ಸುಮಾರು ಏಳು ಕಿ.ಮೀ. ಸಾಗಬೇಕು. ತಳದಿಂದ ಸುಮಾರು 10 ಕಿ.ಮೀ.ಸಾಗಿದರೆ ಬೆಟ್ಟದ ಮೇಲ್ಭಾಗ ತಲುಪಬಹುದು. ಇಲ್ಲಿನ ನಿಸರ್ಗ ರಮಣೀಯತೆ ಚಾರಣಿಗರ ಮನಸೆಳೆಯುತ್ತದೆ.[ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ]
ಒಟ್ಟಾರೆ ನಿಸರ್ಗದ ಗಣಿಯಾಗಿರುವ ತಡಿಯಂಡಮೋಳ್ ಬೆಟ್ಟಕ್ಕೆ ಇನ್ನು ಮುಂದೆ ಚಾರಣ ಮಾಡುವವರು ಅರಣ್ಯ ಇಲಾಖೆಯ ಭದ್ರತೆಯಲ್ಲಿ ಮಾಡಬಹುದು ಎಂಬುದೇ ಸಂತಸದ ವಿಚಾರವಾಗಿದೆ.