ಕೊಡಗು: ಕೆಸರುಗದ್ದೆಯಲ್ಲಿ ಕಳೆಗಟ್ಟಿದ ಪತ್ರಕರ್ತರ ಕ್ರೀಡಾಕೂಟ
ಮಡಿಕೇರಿ, ಸೆಪ್ಟೆಂಬರ್ 11: ಕೊಡಗಿನ ವಿವಿಧೆಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 80 ಕ್ಕೂ ಹೆಚ್ಚು ಪತ್ರಕರ್ತರು ವೃತ್ತಿಯ ಒತ್ತಡ ಬದಿಗಿಟ್ಟು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಡಿಕೇರಿ ಕೆಸರುಗದ್ದೆಯಲ್ಲಿ ಓಡಿ, ಆಡುವ ಮಜವೇ ಬೇರೆ!
ಜಿಲ್ಲಾ ಪತ್ರಕರ್ತರ ಸಂಘವು ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆರ್ಜಿ ಗ್ರಾಮದಲ್ಲಿರುವ ಬಲ್ಲಚಂಡ ರಂಜನ್ ಬಿದ್ದಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಆಟವಾಡಿ ಗಮನಸೆಳೆದರು.
ತಮ್ಮ ಸ್ನೇಹಿತರನ್ನು ಕೆಸರುಗದ್ದೆಯಲ್ಲಿ ಎಳೆದಾಡಿ ಸಂತಸಪಟ್ಟರು. ಬಟ್ಟೆಗೆ ಕೆಸರಾಗುತ್ತದೆ ಎಂದು ದೂರದಲ್ಲಿದ್ದವರನ್ನು ಎಳೆದುಕೊಂಡು ಬಂದು ಕೆಸರುಗದ್ದೆಗೆ ಹಾಕಲಾಯಿತು. ಪತ್ರಕರ್ತರ ತಂಡಗಳ ನಡುವಿನ ಹ್ಯಾಂಡ್ ಬ್ಯಾಲ್, ಹಗ್ಗಜಗ್ಗಾಟ ಸ್ಪರ್ಧೆ ರೋಚಕವಾಗಿತ್ತು. ನಿರೀಕ್ಷಿತ ತಂಡಗಳು ಸೋಲುವುದರ ಮೂಲಕ ಅನಿರೀಕ್ಷಿತ ಫಲಿತಾಂಶ ಹೊರಹೊಮ್ಮಿತ್ತು.
ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲೇನಿದೆ?
40 ವರ್ಷ ಮೇಲ್ಪಟ್ಟವರ ವಿಭಾಗದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪಳೆಯಂಡ ಪಾರ್ಥ ಚಿಣ್ಣಪ್ಪ ವಿಶೇಷ ರೀತಿಯ ಓಟದ ಮೂಲಕ ಗಮನ ಸೆಳೆದರು. ಗದ್ದೆಯಲ್ಲಿ ಕುಪ್ಪಳಿಸುತ್ತಾ, ಕುಪ್ಪಳಿಸುತ್ತಾ ಓಡುವುದರ ಮೂಲಕ ಗುರಿ ಮುಟ್ಟಿದರು. ಕೆಲವು ಪತ್ರಕರ್ತರು ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಓಡುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಎದ್ದು ಓಡಿದರು.
ಕೆಸರು ಮೆತ್ತಿಕೊಂಡ ಪತ್ರಕರ್ತರು!
ಕೆಸರುಗದ್ದೆ ಸ್ಪರ್ಧೆ ಆಯೋಜಿಸಿದ ಗದ್ದೆ ಸಮೀಪದಲ್ಲಿಯೇ ಇದ್ದ ಕೆರೆ ಬದಿಯಲ್ಲಿ ಕೃತಕ ಜಲಪಾತ ಸೃಷ್ಟಿಸಲಾಗಿತ್ತು. ಕೆರೆಯಿಂದ ಮೋಟಾರ್ ಮೂಲಕ ಪೈಪ್ ಮೂಲಕ ನೀರು ಹಾಯಿಸಿ, ಮರದಿಂದ ಬೀಳುವಂತೆ ಮಾಡಲಾಗಿತ್ತು. ಕೆಸರುಗದ್ದೆಯಲ್ಲಿ ಕೆಸರುಮೆತ್ತಿಕೊಂಡಿದ್ದ ಪತ್ರಕರ್ತರು ಮರದ ಮೇಲಿಂದ ಬೀಳುತ್ತಿದ್ದ ನೀರಿನಲ್ಲಿ ಜಳಕ ಮಾಡಿದರು.
ಮಾನಸಿಕ ನೆಮ್ಮದಿಗೆ ಕ್ರೀಡಾಕೂಟ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮಾನಸಿಕ ಹಾಗೂ ದೈಹಿಕವಾಗಿ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡಾಕೂಟ ಮನರಂಜನೆ ನೀಡುತ್ತದೆ ಎಂದರು.
ಒತ್ತಡದಿಂದ ಮುಕ್ತರಾಗಲು ಸಾಧ್ಯ
ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡದಿಂದ ಮುಕ್ತರಾಗಿ ಸ್ಫೂರ್ತಿಯಿಂದ ವೃತ್ತಿಯಲ್ಲಿ ಮುಂದುವರಿಯಬಹುದೆಂದರು. ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಸದಸ್ಯ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಪತ್ರಕರ್ತರು ನಿರಂತರ ಪ್ರತಿಪಕ್ಷದ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕು. ಆಡಳಿತ ವೈಫಲ್ಯಗಳನ್ನು ಕಂಡು ಹಿಡಿಯಲು ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದರು.
ಉಪಸ್ಥಿತಿ
ಕ್ರೀಡಾಕೂಟ ಸಂಚಾಲಕ ಪಳೆಯಂಡ ಪಾರ್ಥ ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಉದ್ಯಮಿ ಬಿ.ಬಿ. ಚುಪ್ಪ ನಾಗರಾಜ್, ನಿವೃತ್ತ ಶಿಕ್ಷಕಿ ಬಲ್ಲಚಂಡ ಕಮಲ, ಕಾಫಿ ಬೆಳೆಗಾರ ಬಲ್ಲಚಂಡ ರಂಜನ್ ಬಿದ್ದಪ್ಪ ಪಾಲ್ಗೊಂಡಿದ್ದರು. ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಸೋಮವಾರ ಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ರಾಜ್ಯ ಪತ್ರಕರ್ತರ ಸಂಘ ನಿರ್ದೇಶಕರಾದ ಎಸ್.ಐ. ಮುರಳೀಧರ್, ಅನು ಕಾರ್ಯಪ್ಪ ಇದ್ದರು.