ಕೊಡಗಿನಲ್ಲಿ ಕುಸಿದ ಪ್ರವಾಸೋದ್ಯಮದ ಚೇತರಿಕೆಗೆ ನಾನಾ ಕಸರತ್ತು
ಮಡಿಕೇರಿ, ಡಿಸೆಂಬರ್ 06: ಕೊಡಗಿನಲ್ಲಿ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ ಮತ್ತು ಅದರಿಂದ ಸಂಭವಿಸಿದ ಭೂಕುಸಿತ ಇಡೀ ಜಿಲ್ಲೆಯನ್ನೇ ಕಂಗಾಲು ಮಾಡಿದೆ. ಭೂಕುಸಿತ ಮಡಿಕೇರಿ ಮತ್ತು ಸೋಮವಾರಪೇಟೆಯ ಕೆಲವು ಗ್ರಾಮಗಳಲ್ಲಷ್ಟೆ ಸಂಭವಿಸಿದ್ದರೂ ಅದರ ಹೊಡೆತ ಇಡೀ ಜಿಲ್ಲೆಯ ಮೇಲೆ ತಟ್ಟಿರುವುದು ಈಗ ಗೋಚರಿಸುತ್ತಿದೆ.
ಕಾಫಿ ಮತ್ತು ಕರಿಮೆಣಸು ಆದಾಯದ ಮೂಲಗಳಾಗಿದ್ದರೂ ಇತ್ತೀಚೆಗೆ ಇಲ್ಲಿನ ಜನರಿಗೆ ಆಸರೆಯಾಗಿದ್ದು ಪ್ರವಾಸೋದ್ಯಮ ಎಂದರೆ ತಪ್ಪಾಗಲಾರದು. ಕಳೆದ ಎರಡು ದಶಕಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಕಾರಣ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ವ್ಯಾಪಾರ ಹೀಗೆ ಎಲ್ಲವೂ ಚೇತರಿಸಿಕೊಂಡಿತು. ರಾಜ್ಯ, ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದರು.
ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕವಾಗಿ ಎಲ್ಲದರಲ್ಲಿಯೂ ಸಬಲತೆ ಕಂಡು ಬಂದಿತ್ತು. ಕಾಫಿ ತೋಟ ಮಾಲೀಕರು ಹೋಂಸ್ಟೇ, ಅಂಗಡಿ, ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದರು. ಪ್ರವಾಸಿಗರು ಹೆಚ್ಚಾಗುತ್ತಿದ್ದಂತೆಯೇ ಇಲ್ಲಿ ನಾಯಿಕೊಡೆಗಳಂತೆ ಹೋಂಸ್ಟೇ ಹುಟ್ಟಿಕೊಂಡಿದ್ದವು. ಲಕ್ಷಾಂತರ ರೂ ಬಂಡವಾಳ ಸುರಿದು ರೆಸಾರ್ಟ್ಗಳನ್ನು ನಿರ್ಮಿಸಿದ್ದರು.
ಸಂಪಾಜೆ ಘಾಟ್ ರಸ್ತೆ ಎಲ್ಲಾ ವಾಹನ ಸಂಚಾರಕ್ಕೆ ಸಿದ್ಧ
ಪ್ರವಾಸೋದ್ಯಮ ಜಿಲ್ಲೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಮಾಡಿದ ಸಾಲವನ್ನು ತೀರಿಸಿಕೊಳ್ಳಬಹುದು ಎಂದು ನಂಬಿದ್ದರು. ಆದರೆ ಆಗಸ್ಟ್ ತಿಂಗಳ ಜಲಪ್ರಳಯದ ಬಳಿಕ ಆಗಿದ್ದೇ ಬೇರೆ. ಇತ್ತ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ಹೋಟೆಲ್, ಹೋಂಸ್ಟೇ ಎಲ್ಲವೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ಪ್ರವಾಸಿಗರಲ್ಲಿ ತಪ್ಪು ಭಾವನೆ
ಭೂಕುಸಿತದ ಬಳಿಕ ಪ್ರವಾಸಿಗರಲ್ಲಿ ತಪ್ಪು ಭಾವನೆ ಬಂದಿದೆ. ಇಡೀ ಕೊಡಗಿನಲ್ಲಿ ಭೂಕುಸಿತ ಸಂಭವಿಸಿದೆ ಎಂಬಂತೆ ತಿಳಿಯುತ್ತಿದ್ದಾರೆ. ಆದರೆ ಅಲ್ಲಿ ಆಗಿದ್ದು ಕೆಲವೇ ಕೆಲವು ಭಾಗವಷ್ಟೆ. ಉಳಿದಂತೆ ಎಲ್ಲವೂ ಮೊದಲಿನಂತೆಯೇ ಇದೆ.
'ಕೊಡಗಿಗೆ ನಮ್ಮೆಲ್ಲರ ಋಣ ಇದೆ, ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ'
ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ
ಆದರೂ ಪ್ರವಾಸಿಗರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದು, ಅದರ ಪರಿಣಾಮವನ್ನು ಇಲ್ಲಿನವರು ಎದುರಿಸುವಂತಾಗಿದೆ. ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರಣ ಇದೀಗ ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮುಂದಾಗಿ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳನ್ನು ಸದ್ಯ ಮಾಡಲಾಗುತ್ತಿದೆ.
ಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮ
ಉತ್ಸವ ನಡೆಸಲು ಚಿಂತನೆ
ಮಡಿಕೇರಿಯ ಪ್ರವಾಸೋದ್ಯಮ ಕಚೇರಿಯಲ್ಲಿ ಮಾಹಿತಿ ಕೇಂದ್ರ, ಕೊಡಗು ರೆಸಾರ್ಟ್, ಹೊಟೇಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ವತಿಯಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಕಿರುಚಿತ್ರ ತಯಾರಿಸಿ ಬಿಡುಗಡೆ, ಕೊಡಗು ಉತ್ಸವ, ಆಹಾರ ಉತ್ಸವ, ಸಾಂಸ್ಕೃತಿಕ ಉತ್ಸವಗಳನ್ನು ನಡೆಸಲು ಚಿಂತನೆ ಮಾಡಿದ್ದು, ಈಗಾಗಲೇ ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ಕೋರಿದ್ದಾರೆ.
ಸರ್ವ ರೀತಿಯಲ್ಲಿಯೂ ಚಿಂತನೆ
ಇನ್ನು ಜನವರಿಯಲ್ಲಿ ಮಡಿಕೇರಿಯಲ್ಲಿ 3 ದಿನಗಳ ಕಾಲ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಚಿಂತನೆ ನಡೆದಿದೆ. ಒಟ್ಟಾರೆಯಾಗಿ ಕೊಡಗಿನಲ್ಲಿ ಮತ್ತೆ ಪ್ರವಾಸೋದ್ಯಮ ಚೇತರಿಸಲು, ಪ್ರವಾಸಿಗರನ್ನು ಸೆಳೆಯಲು ಸರ್ವ ರೀತಿಯಲ್ಲಿಯೂ ಚಿಂತನೆ ನಡೆಯುತ್ತಲೇ ಇದೆ.