ಮಳೆಗಾಲದಲ್ಲೇ ನೀರಿನ ಕೊರತೆ, ಆತಂಕದಲ್ಲಿ ಮಡಿಕೇರಿ ಜನತೆ!

ಮಡಿಕೇರಿ, ಜುಲೈ 17: ಕೊಡಗಿನಲ್ಲಿ ಇಂದಿನಿಂದ(ಜು.17) ಕಕ್ಕಡ ಮಾಸ ಆರಂಭವಾಗಿದೆ. ಈ ಹೊತ್ತಿಗೆಲ್ಲ ಮಳೆ ಅಬ್ಬರಿಸಿ ಸುರಿಯಬೇಕಿತ್ತು. ಆದರೆ ಅದ್ಯಾಕೋ ವರುಣ ಕೃಪೆ ತೋರಿದಂತೆ ಕಾಣುತ್ತಿಲ್ಲ. ಪರಿಣಾಮ ಜಿಲ್ಲೆಯ ಹಲವೆಡೆ ಮಳೆಗಾಲದಲ್ಲೇ ನೀರಿನ ಸಮಸ್ಯೆ ಕಾಣಿಸಿದೆ. ಈ ವೇಳೆಗೆಲ್ಲ ನದಿ, ತೊರೆ, ಕೆರೆ ಕಟ್ಟೆ, ಬಾವಿಗಳು ತುಂಬಿ ಹರಿಯಬೇಕಿತ್ತಾದರೂ ಯಾವುದರಲ್ಲೂ ನೀರು ಕಾಣಿಸುತ್ತಿಲ್ಲ.

ಹಲವೆಡೆ ಪಾತಾಳಕ್ಕಿಳಿದ ಬಾವಿಯಲ್ಲಿ ಇನ್ನೂ ಕೂಡ ನೀರು ತುಂಬಿಲ್ಲ. ಇದೆಲ್ಲವನ್ನು ನೋಡುತ್ತಿರುವ ಇಲ್ಲಿನ ಜನ ಭಯಭೀತರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆ ಅಂತರ್ಜಲವನ್ನು ಬರಿದು ಮಾಡುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಒಂದಿಷ್ಟು ನೀರು ಕಾಣಿಸಿದರೂ ಬೇಸಿಗೆಯ ಆರಂಭದಲ್ಲೇ ಬಾವಿಗಳು ಬತ್ತಿ ಹೋಗುತ್ತಿವೆ. ಇದರಿಂದ ನೀರಿನ ಸಮಸ್ಯೆ ಉಲ್ಭಣಿಸುತ್ತಿದೆ. ಪ್ರತಿ ವರ್ಷವೂ ಈ ಬಾರಿಯಾದರೂ ಮಳೆ ಚೆನ್ನಾಗಿ ಬರಬಹುದೆಂದು ಕಾಯುವುದೇ ಆಗಿ ಹೋಗಿದೆ.

ಕೊಡಗಿನಲ್ಲಿ ಮಳೆ ಸುರಿಯದೆ ಹೋದರೆ ಜಿಲ್ಲೆಯ ಜನರು ಸೇರಿದಂತೆ ಕಾವೇರಿ ಕಣಿವೆಯ ಎಲ್ಲರೂ ಪರದಾಡಬೇಕಾಗುತ್ತದೆ. 2013ರಲ್ಲಿ ದಾಖಲೆಯ ಮಳೆಯಾಗಿತ್ತಾದರೂ ಆ ನಂತರ ಉತ್ತಮ ಮಳೆಯಾಗಿಲ್ಲ. ಅದರಲ್ಲೂ 2015 ಮತ್ತು 16ರಲ್ಲಿ ಸಮರ್ಪಕವಾಗಿ ಮಳೆಯೇ ಆಗಿಲ್ಲ.

ಇದರಿಂದ ಕೆಆರ್ ಎಸ್ ಜಲಾಶಯ ಭರ್ತಿಯಾಗದೆ ಅನುಭವಿಸಿದ ಕಷ್ಟಗಳು ನಮ್ಮ ಕಣ್ಣ ಮುಂದೆಯೇ ಇದೆ. ಕೃಷಿ ಮಾಡಲಾಗದೆ ಸಾಲದ ಸುಳಿಗೆ ಸಿಕ್ಕಿ ಹಳೆ ಮೈಸೂರು ವಿಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ಇನ್ನು ಕಾವೇರಿ ವಿವಾದದಿಂದ ಉಂಟಾದ ಗಲಭೆಯಲ್ಲಾದ ನಷ್ಟಕ್ಕೂ ಮಿತಿಯೇ ಇಲ್ಲದಾಗಿದೆ.

ಮಳೆಯ ಆರ್ಭಟ ಗತವೈಭವವಷ್ಟೆ!

ಮಳೆಯ ಆರ್ಭಟ ಗತವೈಭವವಷ್ಟೆ!

ಕೊಡಗಿನ ಹಿರಿಯರನ್ನು ಹಿಂದಿನ ಮಳೆಗಾಲದ ಬಗ್ಗೆ ಕೇಳಿದರೆ ಅವತ್ತಿನ ದಿನಗಳಲ್ಲಿ ಸುರಿಯುತ್ತಿದ್ದ ಮಳೆ ಆರ್ಭಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಯುಗಾದಿ ಕಳೆಯುತ್ತಿದ್ದಂತೆ ಆರಂಭವಾಗುತ್ತಿದ್ದ ಮಳೆ ಡಿಸೆಂಬರ್‍ ವರೆಗೂ ಸುರಿಯುತ್ತಿತ್ತು. ಅದರಲ್ಲೂ ಕಕ್ಕಡಮಾಸ(ಆಟಿ ತಿಂಗಳು)ದಲ್ಲಿ ತಿಂಗಳಾನುಗಟ್ಟಲೆ ಎಡೆಬಿಡದೆ ಮಳೆಸುರಿಯುತ್ತಿತ್ತು. ಬಹಳಷ್ಟು ಗ್ರಾಮಗಳು ನೀರಿನಿಂದ ಆವೃತವಾಗಿ ಸಂಪರ್ಕವಿಲ್ಲದೆ ಪರದಾಡಬೇಕಾಗುತ್ತಿತ್ತು ಎನ್ನುತ್ತಾರೆ.

ಶಾಲೆಯ ರಜೆಯೂ ರದ್ದು

ಶಾಲೆಯ ರಜೆಯೂ ರದ್ದು

ಈ ಹಿಂದೆ ಇಲ್ಲಿನ ಶಾಲಾ ಮಕ್ಕಳಿಗೆ ಪ್ರತಿವರ್ಷ ಜುಲೈ 21ರಿಂದ ಸುಮಾರು 15 ದಿನಗಳ ಕಾಲ ಮಳೆಗಾಲದ ರಜೆ ನೀಡಲಾಗುತ್ತಿತ್ತು. ಅದು ಕಳೆದ ಕೆಲವು ವರ್ಷಗಳ ಕಾಲ ಹಾಗೆಯೇ ನಡೆದುಕೊಂಡು ಬಂದಿತ್ತಾದರೂ ಇತ್ತೀಚೆಗೆ ಮಳೆ ಸುರಿಯದ ಕಾರಣ ಸಾಂಪ್ರದಾಯಿಕವಾಗಿ ನೀಡುತ್ತಿದ್ದ ಮಳೆಗಾಲದ ರಜೆಯನ್ನು ರದ್ದು ಮಾಡಲಾಗಿದೆ. ಈಗ ವಿಪರೀತ ಮಳೆ ಸುರಿದಾಗ ಜಿಲ್ಲಾಡಳಿತದ ಸೂಚನೆ ಮೇರೆಗೆ ಡಿಡಿಪಿಐ ಅವರು ಒಂದೆರಡು ದಿನಗಳ ಕಾಲ ರಜೆ ಘೋಷಣೆ ಮಾಡುತ್ತಾರೆ.

ತೊರೆ, ತೋಡುಗಳಲ್ಲಿ ನೀರಿಲ್ಲ!

ತೊರೆ, ತೋಡುಗಳಲ್ಲಿ ನೀರಿಲ್ಲ!

ಕುಂಭದ್ರೋಣ ಮಳೆ ಸುರಿಸುವ ನಕ್ಷತ್ರದ ಮಳೆಗಳು ಈಗಾಗಲೇ ಮುಗಿದಿವೆ. ಮುಂದಿನ ಪುಷ್ಯ, ಆಶ್ಲೇಷ ಮಳೆಗಳು ಯಾವ ರೀತಿಯಲ್ಲಿ ಸುರಿಯುತ್ತವೇಯೋ ಅವುಗಳಿಂದ ಉತ್ತಮ ಮಳೆಯನ್ನು ನಿರೀಕ್ಷಿಸಲು ಸಾಧ್ಯನಾ ಎಂಬ ಆತಂಕವೂ ಎದುರಾಗಿದೆ. ಒಂದು ವೇಳೆ ಮಳೆ ಬಂದರೂ ಅದರಿಂದ ಅಂತರ್ಜಲ ಹೆಚ್ಚಾಗಿ ಜಲ ಹುಟ್ಟಿ ನೀರು ಹರಿಯಬಹುದೆಂಬ ನಂಬಿಕೆ ಇಲ್ಲಿನವರಿಗೆ ಇಲ್ಲವಾಗಿದೆ. ಜಿಲ್ಲೆಗೊಂದು ಸುತ್ತು ಹೊಡೆದರೆ ತೊರೆ, ತೋಡುಗಳಲ್ಲಿ ನೀರು ಬಂದಿಲ್ಲ.

ಕುಡಿಯುವ ನೀರಿಗೂ ಕೊರತೆ

ಕುಡಿಯುವ ನೀರಿಗೂ ಕೊರತೆ

ಹೀಗಾಗಿ ಭತ್ತದ ಕೃಷಿ ನೆನೆಗುದಿಗೆ ಬಿದ್ದಿರುವುದು ಕಂಡು ಬರುತ್ತಿದೆ. ಮತ್ತೊಂದೆಡೆ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಗೋಚರಿಸಿದೆ. ತುಂಬಿ ತುಳುಕಬೇಕಾದ ಬಾವಿಗಳನ್ನು ಇಣುಕಿ ನೋಡಿದರೆ ಇದೀಗ ತಳಕಾಣಿಸುತ್ತಿದೆ. ಹೀಗೆ ಆದರೆ ಹೇಗೆ ಎಂಬ ಭಯ ಎಲ್ಲರನ್ನು ಕಾಡತೊಡಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+