'ಅಭಿವೃದ್ಧಿ' ಕಾಣದ ಸಂಪಾಜೆ ನಾಡ ಕಚೇರಿ & ಕರಾವಳಿಯ ಇತರ ಸುದ್ದಿಗಳು
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸಂಪಾಜೆಯ ನಾಡ ಕಚೇರಿ ಬೀಳುವ ಸ್ಥಿತಿಯಲ್ಲಿದೆ. ಇನ್ನೊಂದು ಕಡೆ ಉಡುಪಿ ನಗರಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಮತ್ತೊಂದು ಕಡೆ ಬೆಳ್ತಂಗಡಿಯಲ್ಲಿ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ.
ಮಂಗಳೂರು, ಮಾರ್ಚ್ 31: ನೀವೊಮ್ಮೆ ಸಂಪಾಜೆ ನಾಡ ಕಚೇರಿಗೆ ಭೇಟಿ ನೀಡಬೇಕು. ನಿಮ್ಮನ್ನ ಶಿಥಿಲಾವಸ್ಥೆ ಹೊಂದಿರುವ ಮರದ ಪಕ್ಕಾಸುಗಳು ಮತ್ತು ಹಂಚುಗಳು ಸ್ವಾಗತಿಸುತ್ತವೆ.
ಇಲ್ಲಿನ ನಾಡ ಕಚೇರಿ ಈವಾಗಲೋ, ಆವಾಗಲೋ ಬೀಳುವ ಸ್ಥಿತಿಯಲ್ಲಿದೆ. ನೀವು ನಂಬುತ್ತಿರೋ, ಇಲ್ಲವೋ ಈ ನಾಡ ಕಚೇರಿ ಈಗಲೂ ಟಾರ್ಪಲ್ ಹೊದಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗವಾದ ಮಡಿಕೇರಿ ತಾಲೂಕು ಕೇಂದ್ರದ ಸಂಪಾಜೆ ಹೋಬಳಿಯಲ್ಲಿ ನಾಡಕಚೇರಿ ಇದೆ. ಇದರ ವ್ಯಾಪ್ತಿಗೆ ಪೆರಾಜೆ, ಸಂಪಾಜೆ, ಮದೆ, ಚೆಂಬು, ಕಾಟಿಕೇರಿ, ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೊಡ್ಲು, ಹೆರವನಾಡು, ಅರ್ವತ್ತೊಕ್ಲು ಮೊದಲಾದ ಗ್ರಾಮಗಳು ಬರುತ್ತವೆ.
ಈ ನಾಡಕಚೇರಿ ಕಟ್ಟಡ ಬ್ರಿಟಿಷರ ಕಾಲದ್ದು. ಮಳೆ ಬಂದರೆ ಕಟ್ಟಡ ಸೋರುತ್ತದೆ. ಹೀಗಾಗಿ
ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹಾಸಲಾಗಿದೆ. ಇಲ್ಲಿ ಸಾವಿರಾರು ಜನರ ಮೂಲ ದಾಖಲಾತಿ ಇದ್ದರೂ ಇವೆಲ್ಲಾ ಮಳೆ ನೀರಿಗೆ ಒದ್ದೆಯಾಗುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಸಮಸ್ಯೆಗಳ ಆಗರ
ನಾಡ ಕಚೇರಿ ಸಂಪೂರ್ಣ ಬೀಳುವ ಸ್ಥಿತಿ ಒಂದು ಕಡೆಯಾದರೆ ಇನ್ನೊಂದು ಕಡೆ ಇಂಟರ್ನೆಟ್ ಸಮಸ್ಯೆ ಇದೆ. ಇದರಿಂದ ಅಂತರ್ಜಾಲದ ಮೂಲಕ ಆಗುವ ಕೆಲಸಗಳು, ಸಾಮಾನ್ಯರಿಗೆ ಬೇಕಾಗುವ ಆರ್ಟಿಸಿ ಇತರ ಎಲ್ಲ ಕೆಲಸಗಳು ಕಡಿತಗೊಂಡು ನಾಡಕಚೇರಿ ವ್ಯಾಪ್ತಿಯ ಜನರು ಪರದಾಡುವಂತಾಗಿದೆ.
ಸಂಪಾಜೆ ನಾಡಕಚೇರಿ 10 ಗ್ರಾಮಗಳನ್ನು ಹೊಂದಿದೆ. ಇಲ್ಲಿ ಉಪ ತಹಸೀಲ್ದಾರ್ ಇರಬೇಕಾಗಿದೆ. ಆದರೆ ಆ ಹುದ್ದೆ ಖಾಲಿ ಇದ್ದು, ಕಂದಾಯ ನಿರೀಕ್ಷಕರ ಹುದ್ದೆಗೆ ಪ್ರಭಾರಿಯಾಗಿ ಒಬ್ಬರನ್ನು ನೇಮಿಸಲಾಗಿದೆ. ಅಲ್ಲದೆ ಗ್ರಾಮ ಕರಣಿಕರ ಹುದ್ದೆಯೂ ಖಾಲಿ ಇದೆ. ಇದರ ಜತೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಇಷ್ಟೆಲ್ಲ ಸಮಸ್ಯೆಗಳ ಸರಮಾಲೆಯನ್ನು ಹೊಂದಿರುವ ನಾಡಕಚೇರಿ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.
ಈ ಬಗ್ಗೆ ನಾವು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿಯವರನ್ನ ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ - ' ನಾಡ ಕಚೇರಿಯ ಸಮಸ್ಯೆ ಬಗೆಹರಿಸುವುದು ಸವಾಲಾಗಿಬಿಟ್ಟಿದೆ.
ಈ ಸಮಸ್ಯೆ ಈಡೇರುವವರೆಗೂ ಜನರು ಕಷ್ಟ ಪಡಬೇಕಾಗುತ್ತದೆ ' ಎಂದಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ.
ಉಡುಪಿ: ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ
ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ಬದಲು ಅನಗತ್ಯ ವಿಚಾರಗಳ ಬಗ್ಗೆ ಚರ್ಚಿಸಿ ಕಾಲಹರಣ ಮಾಡಿದ ಘಟನೆ ಉಡುಪಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆಯಿತು.
ಉಡುಪಿ ಸಾಮಾನ್ಯ ಸಭೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಸದಸ್ಯರು ಇನ್ನೊಬ್ಬರ ಮೇಲೆ ಆರೋಪ - ಪ್ರತ್ಯಾರೋಪ ಮಾಡುತ್ತಾ ಪರಸ್ಪರ ಕಚ್ಚಾಡಿದರು. ಅಲ್ಲದೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ಕೈ ಮಿರುವುದನ್ನ ಕಂಡ ಅಧ್ಯಕ್ಷರು ಸದಸ್ಯರನ್ನು ಸಮಾಧಾನಿಸಿ ಸಭೆ ಮುಂದುವರಿಸಿದರು.
ರಸ್ತೆ ಅಪಘಾತ: ಓರ್ವ ಬಲಿ
ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯಲ್ಲಿನಡೆದಿದೆ.
ಮೃತರನ್ನು ಮೇಲಂತಬೆಟ್ಟು ನಿವಾಸಿ ಚಂದ್ರಹಾಸ ಎಂದು ಗುರುತಿಸಲಾಗಿದೆ. ಗೇರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ಚಂದ್ರಹಾಸ , ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ವೇಳೆ ಗುರುವಾಯನಕೆರೆ ಸಮೀಪ ಪಣೆಜಾಲು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡ ಚಂದ್ರಹಾಸ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.