ಮುಂಗಾರು ಮಳೆ ಅನಾಹುತ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ
ಮಡಿಕೇರಿ, ಜೂನ್ 7: ಕಳೆದ ಮಳೆಗಾಲದಲ್ಲಿ ಪ್ರವಾಹ ಮತ್ತು ಪ್ರಕೃತಿ ವಿಕೋಪ ಸಂಭವಿಸಿ ಕೊಡಗು ತಲ್ಲಣಗೊಂಡಿತ್ತು. ಉತ್ತರ ಕೊಡಗಿನ ಮಡಿಕೇರಿ, ಸೋಮವಾರಪೇಟೆಗಳ ಹಲವು ಗ್ರಾಮಗಳು ಭೂಕುಸಿತದಿಂದ ನಾಶವಾಗಿದ್ದರೆ, ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ಸೇರಿದಂತೆ ಇತರೆ ಹೊಳೆಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜತೆಗೆ ಜೀವ ಹಾನಿ, ಆಸ್ತಿಪಾಸ್ತಿ ಹಾನಿಯೂ ಸಂಭವಿಸಿತ್ತು. ಆದರೆ ಈ ಬಾರಿ ಹಾಗಾಗದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಕೃತಿ ವಿಕೋಪ ಎದುರಿಸಲು ಸರ್ವ ಸನ್ನದ್ಧವಾಗಿದೆ.
ಕಳೆದ ಬಾರಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಶ್ಲಾಘನೀಯ ಸೇವೆ ಸಲ್ಲಿಸಿವೆ. ಈ ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜೊತೆಯಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದು ಜಿಲ್ಲಾಡಳಿತದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜೂನ್ 14ರಂದು ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಒಂದು ದಿನದ ಸವಾಲುಗಳು ಮತ್ತು ಮುಂದಿನ ದಾರಿ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಳೆದ ಬಾರಿ ವಿಕೋಪದ ಸಂದರ್ಭದಲ್ಲಿ ತನು ಮನ ಧನಗಳೊಂದಿಗೆ ತೊಡಗಿಸಿಕೊಂಡ ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯ ತಯಾರಿಯಲ್ಲಿ ಭಾಗಿಯಾಗಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಹೆಸರು ನೋಂದಾಯಿಸಿಲು ಬಯಸುವವರು ಯುನಿಸೆಫ್ ಸಮಾಲೋಚಕರಾದ ಪ್ರಭಾತ್ ಎಂ., ಬೆಂಬಲಿತ ಸಮಗ್ರ ಕೊಡಗು ಸ್ಪಂದನೆ ಯೋಜನೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೊಡಗು ಮೊಬೈಲ್ ಸಂಖ್ಯೆ: 09886733380 ಅನ್ನು ಸಂಪರ್ಕಿಸಿ ಸಂಸ್ಥೆಯ ಹೆಸರು, ವಿಳಾಸ, ನೊಂದಣಿ ಸಂಖ್ಯೆ, ಸಂಪರ್ಕಿಸಬೇಕಾದವರ ಹೆಸರು ಮತ್ತು ವಿಳಾಸವನ್ನು ಜೂನ್ 13ರೊಳಗೆ ನೋಂದಾಯಿಸಬಹುದಾಗಿದೆ. ಒಂದು ಸಂಸ್ಥೆಯಿಂದ ಕೇವಲ 2 ಜನರಿಗೆ ಪ್ರತಿನಿಧಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ನೋಂದಣಿ ಅನುಸರಿಸಿ ಕಾರ್ಯಾಗಾರದ ಹೆಚ್ಚಿನ ರೂಪುರೇಷೆಯನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮೋಡ ಬಿತ್ತನೆ ಕೈಬಿಡಿ ಎಂದ ಅಪ್ಪಚ್ಚುರಂಜನ್: ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಿನಿಂದ ಸುರಿದ ಭಾರಿ ಮಳೆಯಿಂದ ಜಲ ಪ್ರಳಯ ಉಂಟಾಗಿ ಇಲ್ಲಿ ಅತೀ ಹೆಚ್ಚು ಅನಾಹುತ ಆಗಿದೆ. ಆದರೆ ಈಗ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿರುವುದು ತಿಳಿದು ಬಂದಿದೆ. ಒಂದೆಡೆ ಹವಾಮಾನ ಇಲಾಖೆಯು 2019ರ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳಬಹುದೆಂದು ಹಾಗೂ ಈ ಹಿಂದಿನಂತೆಯೇ ಜಲ ಪ್ರಳಯ ಉಂಟಾಗಬಹುದೆಂದು ಮುನ್ಸೂಚನೆ ನೀಡಿದ್ದು, ಈ ಸಮಯದಲ್ಲಿ ಮೋಡ ಬಿತ್ತನೆ ಮಾಡಿದ್ದಲ್ಲಿ ಇನ್ನೂ ಹೆಚ್ಚಾಗಿ ಮಳೆ ಬೀಳುವುದರಿಂದ ಕಳೆದ ಸಾಲಿಗಿಂತ ಈ ಸಾಲಿಗೆ ಅತೀ ಹೆಚ್ಚು ಮಳೆ ಬಿದ್ದು, ಅನಾಹುತ ಹೆಚ್ಚಾಗುತ್ತದೆ. ಅಲ್ಲದೆ ಮೋಡ ಬಿತ್ತನೆಗೆ ಉಪಯೋಗಿಸುವ ರಾಸಾಯನಿಕವು ಸಸ್ಯ ಸಂಕುಲ, ಪ್ರಾಣಿ ಸಂಕುಲ ಮಾನವ ಹಾಗೂ ಮಣ್ಣಿನ ಮೇಲೆ ದುಷ್ಪರಿಣಾಮ ಬೀರುವುದರಿಂದ ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಮೋಡ ಬಿತ್ತನೆ ಕಾರ್ಯವನ್ನು ಕೈ ಬಿಡುವಂತೆ ಮಡಿಕೇರಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.












Click it and Unblock the Notifications