ಪ್ರಯಾಣಿಕರೇ ಹುಷಾರ್! ಮಡಿಕೇರಿ – ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಮಡಿಕೇರಿ, ಜುಲೈ 5: ಮಡಿಕೇರಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಇತ್ತ ಕೊಚ್ಚೆಮಯವಾದ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಆತಂಕ ಉಂಟುಮಾಡಿದೆ. ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ- ಕಾಟಕೇರಿ ನಡುವೆ ಕೆಲ ದಿನಗಳಿಂದ ಬಿರುಕು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್ ಆಗುವ ಎಲ್ಲಾ ಮುನ್ಸೂಚನೆ ಗೋಚರಿಸುತ್ತಿದೆ.
ಆರಿದ್ರಾ ಮಳೆಯ ಕೊನೆ ಅವಧಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕುಸಿಯುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸರು ಹೆದ್ದಾರಿ ಕುಸಿತವಾದ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಿ, ಆಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೇ ಈ ಕುರಿತು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಮಾಹಿತಿ ನೀಡಿದ್ದಾರೆ.

ಮಳೆಗಾಲದ ಪ್ರಾರಂಭದಲ್ಲೇ ಜಿಲ್ಲಾಡಳಿತ ಮಡಿಕೇರಿ-ಮಂಗಳೂರು 275 ರಾಷ್ಟ್ರೀಯ ಹೆದ್ದಾರಿಯಲ್ಲಿ 16 ಟನ್ ಗಿಂತ ಮೇಲ್ಪಟ್ಟು ಭಾರ ಸಾಗಿಸುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆಯಾದರೂ, ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಿದೆ. ಹೀಗಿದ್ದರೂ ರಸ್ತೆಯಲ್ಲಿ ಬಿರುಕು ಮೂಡಿರುವುದು ವಾಹನ ಸವಾರರನ್ನು ಭೀತಿಗೆ ತಳ್ಳಿದೆ. ಈ ರಸ್ತೆ ಕೊಡಗು ಜಿಲ್ಲೆಯ ಪಾಲಿಗೆ ಅತಿ ಮುಖ್ಯವಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಈ ಮಾರ್ಗ ಕೊಡಗು ಜಿಲ್ಲೆಗೆ ಅನಿವಾರ್ಯವೂ ಆಗಿದೆ. ಈ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications