ಅಬ್ಬರಿಸದ ಆರಿದ್ರಾ, ಕೊಡಗಿನಲ್ಲಿ ತಗ್ಗಿದ ಮಳೆ
ಮಡಿಕೇರಿ, ಜುಲೈ 4: ಜೂನ್ ತಿಂಗಳ ಮೊದಲ ವಾರದಲ್ಲಿ ಅಬ್ಬರಿಸಿದ ಮೃಗಶಿರಾ ಮಳೆಗೆ ಕೊಡಗು ಜಲಾವೃತವಾಗಿತ್ತು; ಪ್ರವಾಹದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಆದರೆ ತಿಂಗಳ ಕೊನೆಯಲ್ಲಿ ಆರಂಭವಾದ ಆರಿದ್ರಾ ಮಳೆ ಅಬ್ಬರಿಸದ ಕಾರಣ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ.
ನಾಳೆವರೆಗೂ (ಜುಲೈ 5) ಆರಿದ್ರಾ ಮಳೆಯಿದ್ದು, ಜುಲೈ 6ರಿಂದ ಪುನರ್ವಸು ಮಳೆ ಆರಂಭವಾಗಲಿದೆ. ಈ ಮಳೆ ವೇಗ ಹೆಚ್ಚಿಸಿಕೊಂಡರೆ ಮುಂಗಾರು ಆಶಾದಾಯಕವಾಗುವ ಲಕ್ಷಣಗಳಿವೆ.
ಜುಲೈ 6ರಿಂದ 8ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ ಸಂಭವ
ಸಾಮಾನ್ಯವಾಗಿ ಮಲೆನಾಡಿನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ ಸುರಿಯುವುದು ವಾಡಿಕೆ. ಅದರಂತೆ ಈ ಬಾರಿ ಮುಂಗಾರು ಅಬ್ಬರಿಸಿದರೆ ಈಗಾಗಲೇ 108 ಅಡಿ ತಲುಪಿರುವ ಕೆಆರ್ಎಸ್ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಇದೀಗ ಕೊಡಗಿನಲ್ಲಿ ಅತಿ ಹೆಚ್ಚು ಮಳೆ ಸುರಿದಿರುವುದರಿಂದ, ಮುಂದಿನ ದಿನಗಳಲ್ಲಿಯೂ ಮಳೆ ಸುರಿದಿದ್ದೇ ಆದರೆ ಅಂತರ್ಜಲ ಹೆಚ್ಚಿ ನೀರಿನ ಸೆಲೆ ಒಡೆದು ಬೆಟ್ಟಗುಡ್ಡ, ಕಣಿವೆಗಳಿಂದ ನೀರು ಹರಿದು ಬರಲಿದೆ. ಈ ನೀರು ಅಕ್ಟೋಬರ್ - ನವೆಂಬರ್ ತನಕ ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗುವುದಿಲ್ಲ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಳೆ ಸುರಿದಿದ್ದೇ ಆದರೆ ಕೊಲ್ಲಿ ನೀರಿನಾಶ್ರಯವಿರುವ ಸ್ಥಳಗಳಲ್ಲಿ ಭೂಮಿ ಅಡಿಯಿಂದ ಜಲ ಹುಟ್ಟಿ ಹರಿಯುತ್ತವೆ. ಈ ಜಲಗಳು ಸದ್ಯಕ್ಕೆ ಬತ್ತುವುದಿಲ್ಲ. ಇವುಗಳೇ ಭತ್ತ ಬೆಳೆಯುವ ರೈತರಿಗೆ ನೀರಿನ ಆಸರೆ. ಈ ನೀರನ್ನೇ ಗದ್ದೆಗೆ ಹಾಯಿಸಿ ಭತ್ತ ಬೆಳೆಯುವುದು ಇಲ್ಲಿನ ಕೃಷಿ ಪದ್ಧತಿಯಾಗಿದೆ.
ಕಳೆದ ಕೆಲವು ವರ್ಷಗಳಿಂದ ಮಳೆ ಕೊರತೆ ಕಾರಣದಿಂದಾಗಿ ಇಂತಹ ಜಲಗಳು ಹುಟ್ಟಿರಲಿಲ್ಲ. ಈ ಬಾರಿ ಇದುವರೆಗೆ ಉತ್ತಮ ಮಳೆಯಾಗಿರುವುದರಿಂದ ಮತ್ತು ಮುಂದೆಯೂ ಮಳೆಯಾಗಲಿರುವುದರಿಂದ ಜಲ ಹುಟ್ಟಬಹುದು ಎಂಬುದು ಇಲ್ಲಿಯವರ ನಿರೀಕ್ಷೆಯಾಗಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದೊಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 5.82 ಮಿ.ಮೀ. ಮಳೆ ಸುರಿದಿದ್ದು, ಇದು ಮಳೆ ತಗ್ಗಿರುವುದನ್ನು ಸೂಚಿಸುತ್ತಿದೆ. ಇನ್ನು ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯನ್ನು ನೋಡಿದ್ದೇ ಆದರೆ 1358.43 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 602 ಮಿ.ಮೀ.ನಷ್ಟು ಹೆಚ್ಚು ಮಳೆಯಾಗಿದೆ. ಅಂದರೆ ಬರೋಬ್ಬರಿ ಈ ಬಾರಿ ದುಪ್ಪಟ್ಟು ಮಳೆ ಸುರಿದಿದೆ.
ಇನ್ನು ಕೊಡಗಿನಲ್ಲಿ ಚಿಕ್ಲಿಹೊಳೆ ಹಾಗೂ ಹಾರಂಗಿ ಜಲಾಶಯವಿದ್ದು ಈ ಪೈಕಿ ಪುಟ್ಟದಾದ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ 9ಅಡಿ ಮಾತ್ರ ಬಾಕಿಯಿದೆ.
ಗರಿಷ್ಠ 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಸದ್ಯ 2850.27 ಅಡಿಯಷ್ಟು ನೀರಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 2826.03 ಅಡಿಯಷ್ಟು ನೀರಿತ್ತು. ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿರುವ ಕಾರಣದಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆಯಾಗಿದ್ದು, ಸದ್ಯ 1818ಕ್ಯೂಸೆಕ್ನಷ್ಟು ಮಾತ್ರ ನೀರು ಹರಿದು ಬರುತ್ತಿದೆ.
ಕಳೆದ ಎರಡು ವಾರಗಳಿಂದ ಕೊಡಗಿನಲ್ಲಿ ಸಂಪೂರ್ಣ ಮಳೆ ತಗ್ಗಿದ್ದು, ಇದೇ ರೀತಿ ಮುಂದುವರೆದರೆ ಹೇಗಪ್ಪಾ ಎಂಬ ಭಯವೂ ಇಲ್ಲಿನವರನ್ನು ಕಾಡತೊಡಗಿದೆ.