ಉಕ್ಕೇರಿದ ಕಾವೇರಿಗೆ ಶಾಂತಳಾಗುವಂತೆ ಪೊಲಿಂಕಾನ ಪೂಜೆ: ಏನಿದರ ವಿಶೇಷ?
ಮಡಿಕೇರಿ, ಆಗಸ್ಟ್ 02: ಜೂನ್ ನಲ್ಲಿ ಸುರಿಯುವ ಮಳೆ ಎಡೆಬಿಡದೆ ಸುರಿಯುವುದರಿಂದ ಕಾವೇರಿ ಉಕ್ಕಿ ಹರಿಯುವುದು ಮಾಮೂಲಿಯಾಗಿದೆ. ಹೀಗೆ ರೌದ್ರಾವತಾರ ತಾಳಿ ಪ್ರವಾಹೋಪಾದಿಯಲ್ಲಿ ಹರಿಯುವ ಕಾವೇರಿಗೆ ಶಾಂತಳಾಗುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸುವುದು ಪ್ರತಿ ವರ್ಷವೂ ಕಕ್ಕಡ (ಆಟಿ) ಮಾಸದ ಅಮಾವಾಸ್ಯೆಯಂದು ಭಾಗಮಂಡಲದಲ್ಲಿ ನಡೆಯುತ್ತದೆ. ಇದನ್ನು ಪೊಲಿಂಕಾನ ಉತ್ಸವ ಎಂದು ಕರೆಯಲಾಗುತ್ತದೆ. ಹಾಗಾದರೆ ಏನಿದು ಪೊಲಿಂಕಾನ ಉತ್ಸವ?
ಕೊಡಗಿನಲ್ಲಿ ಈ ಬಾರಿ ಮಹಾಮಳೆ ಸುರಿದಿದೆ ಹೀಗಾಗಿ ಕಾವೇರಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದಲ್ಲದೆ, ಆಸ್ತಿಪಾಸ್ತಿ ನಾಶ ಮಾಡಿ ಹಲವು ಅನಾಹುತಗಳಿಗೆ ಎಡೆ ಮಾಡುವುದರೊಂದಿಗೆ ರೌದ್ರಾವತಾರ ತಾಳಿ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದಾಳೆ. ಮುಂದೆಯೂ ಧಾರಾಕಾರವಾಗಿ ಮಳೆ ಸುರಿಯುವ ಎಲ್ಲ ಲಕ್ಷಣಗಳು ಇರುವುದರಿಂದ ಕಾವೇರಿ ಮತ್ತೆ, ಮತ್ತೆ ಪ್ರವಾಹ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಶಾಂತಳಾಗುವಂತೆ ಜಿಲ್ಲೆಯ ಜನ ಪ್ರಾರ್ಥನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಕೊಡಗಿನ ಮಟ್ಟಿಗೆ ಹೆಚ್ಚಿನ ಮಳೆ ಸುರಿಯುವುದೇ ಕಾವೇರಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಎಂದರೆ ತಪ್ಪಾಗಲಾರದು. ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಮಳೆ ಧಾರಾಕಾರವಾಗಿ ಸುರಿಯುವುದು ಮಾಮೂಲಿ ಹೀಗೆ ಸುರಿಯುವ ಮಳೆ ಬೆಟ್ಟಶ್ರೇಣಿಯಿಂದ ಹರಿದು ಬಂದು ಭಾಗಮಂಡಲವನ್ನು ಸೇರುತ್ತದೆ.
ಈ ವೇಳೆ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಒಂದಾಗಿ ಮುಂದೆ ಹರಿಯುತ್ತವೆ. ಆದರೆ ಭಾಗಮಂಡಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಮುಂದೆ ಹರಿಯುವ ವೇಳೆ ತ್ರಿವೇಣಿ ಸಂಗಮ ಜಲಾವೃತಗೊಳ್ಳುತ್ತದೆ. ಈ ವೇಳೆ ಇಲ್ಲಿನ ಸ್ನಾನಘಟ್ಟ ಸೇರಿದಂತೆ ಭಗಂಡೇಶ್ವರ ದೇಗುಲದ ಮೆಟ್ಟಿಲನ್ನು ಕಾವೇರಿ ಸ್ಪರ್ಶಿಸುತ್ತಾಳೆ.
ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ
ಯಾವಾಗ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಯಿತೋ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು ಎಂದರ್ಥ. ಹೀಗೆ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿದರೆ ಹಲವು ಗ್ರಾಮಗಳು ಪ್ರವಾಹಪೀಡಿತವಾಗುತ್ತವೆ. ಜನ ಸಂಕಷ್ಟಕ್ಕೀಡಾಗುತ್ತಾರೆ. ಇತ್ತೀಚೆಗೆ ಭೂಕುಸಿತಗಳು ನಡೆಯುತ್ತಿರುವುದರಿಂದ ಭಯದ ವಾತಾವರಣ ಜಿಲ್ಲೆಯಾದ್ಯಂತ ಇದೆ. ಹೀಗಾಗಿಯೇ ಎಲ್ಲರೂ ಮಳೆ ಕಡಿಮೆಯಾಗಿ ಕಾವೇರಿ ಶಾಂತಳಾಗಲಿ ಎಂದು ಬಯಸುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.

ವಾತಾವರಣ ಬದಲಾದ ಹಿನ್ನಲೆಯಲ್ಲಿ ಇತ್ತೀಚೆಗೆ ಮಳೆಗಾಲದಲ್ಲಿ ಬದಲಾವಣೆ ಕಾಣಿಸಿದೆ. ಮೊದಲು ಹೀಗಿರಲಿಲ್ಲ. ಈ ವೇಳೆಗೆ ಭಾರೀ ಮಳೆ ಸುರಿದು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸುರಿದ ಮಳೆಯನ್ನು ನೋಡಿದ್ದೇ ಆದರೆ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿದು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದೆ. ಈಗಲೂ ಇಲ್ಲಿಯ ಜನ ಭಯದಲ್ಲಿಯೇ ಬದುಕುತ್ತಿದ್ದಾರೆ. ಹೀಗಾಗಿ ಎಲ್ಲ ಭಯ ದೂರವಾಗ ಬೇಕಾದರೆ ಕಾವೇರಿ ಶಾಂತರೂಪತಾಳ ಬೇಕಾಗಿದೆ. ಇದಕ್ಕಾಗಿಯೇ ಕಾವೇರಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಕಕ್ಕಡ ಅಮಾವಾಸ್ಯೆಯಂದು ಪೂಜೆ
ಇದುವೇ ಪೊಲಿಂಕಾನ ಉತ್ಸವ. ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಕಕ್ಕಡ ಅಮಾವಾಸ್ಯೆಯಂದು ಶ್ರದ್ಧಾಭಕ್ತಿಯಿಂದ ಸಂಪ್ರದಾಯದೊಂದಿಗೆ ನಡೆಸಲಾಗುತ್ತದೆ. ಪೊಲಿಂಕಾನ ಉತ್ಸವದಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆಯುತ್ತದೆ ಆ ನಂತರ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಗುತ್ತದೆ.

ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ವೇಳೆ ಹಚ್ಚಿದ ದೀಪ ಹಾಗೆಯೇ ಉರಿಯುತ್ತಾ ಮುಂದೆ ಸಾಗುತ್ತದೆ. ಈ ವೇಳೆ ನಾಡಿಗೆ ಸಮೃದ್ದಿ ತರುವಂತಾಗಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗುತ್ತದೆ. ಇದು ಪ್ರತಿವರ್ಷವೂ ನಡೆಯುತ್ತದೆ.












Click it and Unblock the Notifications