ಮಡಿಕೇರಿಯಲ್ಲಿ ಜಂಟಿ ಕಾರ್ಯಾಚರಣೆ: ಪ್ರವಾಸಿಗರಿದ್ದ ಹೋಂ ಸ್ಟೇ ಗೆ ಬೀಗ
ಮಡಿಕೇರಿ, ಜುಲೈ 12: ಹೋಂ ಸ್ಟೇ ಮೇಲೆ ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮೀಣ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ, ಪ್ರವಾಸಿಗರ ಸಹಿತ ಮನೆ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಮಡಿಕೇರಿಯ ಮರಗೋಡಿನಲ್ಲಿ ಭಾರತಿ ಎಂಬುವವರ ಮನೆಯಲ್ಲಿ ಮೂರು ದಿನದಿಂದ ಅನಧಿಕೃತವಾಗಿ ಅತಿಥಿಗಳನ್ನು ಇರಿಸಿಕೊಳ್ಳಲಾಗಿತ್ತು. ಪ್ರವಾಸಿಗರು ಡ್ರೋನ್ ಕ್ಯಾಮರಾ ಇತ್ಯಾದಿ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ್ದರು. ಈ ಕುರಿತು ಗ್ರಾಮಸ್ಥರು ಹೋಂ ಸ್ಟೇ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ, ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದರು. ಸೂಕ್ತ ಕ್ರಮಕ್ಕೆ ಹೋಂ ಸ್ಟೇ ಅಸೋಸಿಯೇಷನ್ ಸಂಬಂಧಿಸಿದವರಿಗೆ ಸೂಕ್ತ ಕ್ರಮಕ್ಕೆ ಮನವಿ ಮಾಡಿತು.
ಈ ದೂರಿನ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ಅಶ್ವಥ್, ಠಾಣಾಧಿಕಾರಿ ಚಂದ್ರಶೇಖರ್ ನಿರ್ದೇಶನದಲ್ಲಿ ಗ್ರಾಮೀಣ ಪೊಲೀಸರ ತಂಡ ರಾತ್ರಿ ೧೦.೩೦ ಕ್ಕೆ ದಾಳಿ ನಡೆಸಿತು. ಮನೆಯಲ್ಲಿ ಮೈಸೂರಿನ ಮೂವರು ತರುಣರು ಇದ್ದು, ಅವರು ನಮ್ಮ ನೆಂಟರು ಎಂದು ಮನೆಯವರು ಸುಳ್ಳು ಹೇಳಿದರು. ಆದರೆ ಅವರ ಗುರುತು ಚೀಟಿಗಳನ್ನು ಪರಿಶೀಲಿಸಿದಾಗ ಮೈಸೂರಿನ ಪ್ರವಾಸಿಗರು ಎಂಬುದು ಬಹಿರಂಗವಾಯಿತು.

ಮನೆಯ ಮಾಲೀಕರಾದ ಭಾರತಿ, ಪ್ರವಾಸಿಗರಾದ ವಿವೇಕ್, ಅನಿಲ್, ಅವಿನಾಶ್ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು. ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆದು, ಇಂದು ಅನಧಿಕೃತ ಹೋಂ ಸ್ಟೇ ಗೆ ಬೀಗ ಜಡಿಯಲಾಗಿದೆ.
ಕಳೆದ ತಿಂಗಳು ರಾಜಾ ಸೀಟ್ ಹಿಂಭಾಗ ಹರೀಶ್ ಎಂಬುವವರ ಮನೆಗೆ ಬೀಗ ಜಡಿದ ಪ್ರಕರಣವನ್ನು ಸ್ಮರಿಸಬಹುದು. ಕೊಡಗಿನಲ್ಲಿ ಅಧಿಕೃತ ಹೋಂ ಸ್ಟೇ ಗಳು ಫೆಬ್ರವರಿ ತಿಂಗಳಿನಿಂದಲೇ ಪ್ರವಾಸಿಗರನ್ನು ಪಡೆಯದೆ ಮುಚ್ಚಿದ್ದು, ಪ್ರವಾಸಿಗರನ್ನು ಸ್ವೀಕರಿಸುವ ಅನಧಿಕೃತ ಹೋಂ ಸ್ಟೇ ಜಾಲವನ್ನು ಕಂಡುಹಿಡಿಯಲು ಸಹಕರಿಸುವಂತೆ ಹೋಂ ಸ್ಟೇ ಅಸೋಸಿಯೇಷನ್ ಮನವಿ ಮಾಡಿದೆ.
ಪ್ರವಾಸಿಗರನ್ನು ಪಡೆಯದಂತೆ ಮಾಡಿದ ಮನವಿ ಧಿಕ್ಕರಿಸಿ ದೊಡ್ಡ ರೆಸಾರ್ಟ್ ಗಳು ವ್ಯವಹಾರ ಆರಂಭಿಸಿದ್ದು, ಇದನ್ನು ಅಸೋಸಿಯೇಷನ್ ಖಂಡಿಸಿದೆ. ಅವರ ತಪ್ಪನ್ನು ಹೋಂ ಸ್ಟೇ ಗಳ ಮೇಲೆ ಕೂರಿಸುವ ಯತ್ನವೂ ನಡೆದಿದೆ ಎಂದಿದೆ. ಕಾನೂನು ಮುರಿಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.












Click it and Unblock the Notifications