ಕೆಸರಲ್ಲಿ ಸಿಕ್ಕ ಪಿಕಪ್ ಎಳೆದೊಯ್ದ ಅಭಿಮನ್ಯು ಸಾಹಸ ಗಾಥೆ
ಮಡಿಕೇರಿ, ಜುಲೈ 25: ಗಿಡ ನೆಡಲು ಅರಣ್ಯಕ್ಕೆ ತೆರಳಿದ ವಿದ್ಯಾರ್ಥಿಗಳು ವಾಪಸ್ ರಸ್ತೆಗೆ ಬರಲು ಸಾಕಾನೆಯ ನೆರವು ಪಡೆದ ಘಟನೆ ದಕ್ಷಿಣ ಕೊಡಗಿನ ತಿತಿಮತಿ ಅರಣ್ಯ ವಲಯದ ಮಜ್ಜಿಗೆಹಳ್ಳ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಐರಾವತಿ ಹಡೆದಿದ್ದಾಳೆ, ತಾಯಿ ಮಗು ಆರೋಗ್ಯವಾಗಿದ್ದಾರೆ
ವಿದ್ಯಾರ್ಥಿಗಳ ನಾಲ್ಕು ಚಕ್ರದ ವಾಹನ ಪಿಕಪ್ ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲು ಹರಸಾಹಸ ಪಟ್ಟರೂ ಸಾಧ್ಯವಾಗದಿದ್ದಾಗ ಕೊನೆಗೆ ಸಾಕಾನೆ ಮೂಲಕ ಸುರಕ್ಷಿತವಾಗಿ ಎಳೆದೊಯ್ದು ರಸ್ತೆಗೆ ತಲುಪಿಸಲಾಯಿತು.
ಅರಣ್ಯ ಇಲಾಖೆ ಮತ್ತು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಮೂಹಿಕವಾಗಿ ವಿವಿಧ ಜಾತಿಯ ಮತ್ತು ಹಣ್ಣಿನ ಗಿಡ ಸೇರಿದಂತೆ ಜಾತಿ ಹುಲ್ಲು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಒಂದೆರಡು ವಾಹನಗಳಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಅರಣ್ಯದೊಳಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನ ಕೆಸರಿನಿಂದ ಕೂಡಿದ ಮಣ್ಣು ರಸ್ತೆಯಲ್ಲಿ ಸಿಕ್ಕಿ ಮುಂದೆಯೂ ಹೋಗದೆ ಹಿಂದೆಗೂ ಬಾರದೆ ಫಜೀತಿ ಎಬ್ಬಿಸಿತು.
ಹಗ್ಗ ಕಟ್ಟಿ ಎಳೆದರೂ ಪ್ರಯೋಜನವಾಗಲಿಲ್ಲ. ಬಳಿಕ ಸಮೀಪದ ಮತ್ತಿಗೋಡು ಆನೆ ಶಿಬಿರದಿಂದ ಸಾಕಾನೆಗಳನ್ನು ಕರೆಯಿಸಿ ಸಿಲುಕಿಕೊಂಡ ವಾಹನವನ್ನು ಮೇಲೆತ್ತುವ ತೀರ್ಮಾನ ಮಾಡಲಾಯಿತು. ಅರಣ್ಯಾಧಿಕಾರಿಗಳ ನೆರವಿನಿಂದ ಮತ್ತಿಗೋಡು ಶಿಬಿರದ ಗೋಪಾಲಸ್ವಾಮಿ ಸಾಕಾನೆ ಬಂತಾದರೂ ಅದು ಪಿಕಪ್ ಅನ್ನು ಕೆಸರಿನಿಂದ ಮೇಲೆತ್ತಲೂ ಮುಂದಾಗಲಿಲ್ಲ.
ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು
ಆ ನಂತರ ಶಿಬಿರದಿಂದ ಅಭಿಮನ್ಯು ಆನೆಯನ್ನು ಕರೆಯಿಸಲಾಯಿತು. ಆದರೆ ಎರಡು ಆನೆಗಳು ಮುಖಾಮುಖಿಯಾಗಿ ಗುರಾಯಿಸಲಾರಂಭಿಸಿದವು.
ಹೀಗಾಗಿ ಗೋಪಾಲಸ್ವಾಮಿಯನ್ನು ಅರಣ್ಯಕ್ಕೆ ಕರೆದೊಯ್ಯಲಾಯಿತು. ಬಳಿಕ ಅಭಿಮನ್ಯುಗೆ ಸರಪಳಿ ಬಿಗಿದು ಮತ್ತೊಂದು ತುದಿಯನ್ನು ಪಿಕಪ್ ಗೆ ಕಟ್ಟಲಾಯಿತು. ಈ ವೇಳೆ ಉತ್ಸಾಹ ತೋರಿದ ಅಭಿಮನ್ಯು ಪಿಕಪ್ ಅನ್ನು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾದ. ಅಷ್ಟರಲ್ಲಿ ಸುಮಾರು ಮೂರು ಗಂಟೆ ಸಮಯ ಹಿಡಿಯಿತು.