ವೈದ್ಯರ ಪ್ರಕಾರ ಸತ್ತಿದ್ದ ವ್ಯಕ್ತಿ ಪೊಲೀಸರು ಬಂದ ತಕ್ಷಣ ಎದ್ದು ಕೂತರು!
ವಿರಾಜಪೇಟೆ (ಕೊಡಗು ಜಿಲ್ಲೆ), ಫೆಬ್ರವರಿ 16: ವ್ಯಕ್ತಿಯೊಬ್ಬರನ್ನು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿ, ಆ ನಂತರ ಪೊಲೀಸರು ಬಂದು ಪರೀಕ್ಷಿಸಿದಾಗ ಅದೇ ವ್ಯಕ್ತಿ ಎದ್ದು ಕೂತ ಘಟನೆ ಇಲ್ಲಿ ನಡೆದಿದೆ. 52 ವರ್ಷದ ಈರಪ್ಪ ವೈದ್ಯರ ಘೋಷಣೆ ನಂತರ ಬದುಕುಳಿದವರು. ಬಿಟ್ಟಂಗಾಲದ ಮನೆಯಲ್ಲಿ ಗುರುವಾರ ಸಂಜೆ ಆತ ವಿಷ ಸೇವಿಸಿದ್ದರು.
ಆ ನಂತರ ಸಂಬಂಧಿಕರು ವಿರಾಜಪೇಟೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಚಿಕಿತ್ಸೆ ನೀಡಿ, ಆ ನಂತರ ಈರಪ್ಪ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದರು. ಕುಟುಂಬ ಸದಸ್ಯರು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಈರಪ್ಪ ಎದ್ದು ಕುಳಿತಿದ್ದರು.

ಹೆಚ್ಚಿನ ಚಿಕಿತ್ಸೆ ಕೊಡಿಸಲು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ವಿರಾಜಪೇಟೆಸರಕಾರಿಆಸ್ಪತ್ರೆಯ ವೈದ್ಯರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಈರಪ್ಪ ಕುಟುಂಬದವರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದ ಅರ್ಧ ಗಂಟೆ ವೈದ್ಯರು ಚಿಕಿತ್ಸೆ ನೀಡಲಿಲ್ಲ ಎಂದು ಆರೋಪ ಮಾಡಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.












Click it and Unblock the Notifications