ನಿಧಿ ಆಸೆಗೆ ಮನೆಯನ್ನೆಲ್ಲ ಅಗೆದ; ಕೊನೆಗಾದ ಗತಿ ಯಾರಿಗೂ ಬೇಡ...
ಮಡಿಕೇರಿ, ಜನವರಿ 11; ಮೂಢನಂಬಿಕೆಗೆ ಬಲಿಯಾದ ಕೊಡಗಿನ ವ್ಯಕ್ತಿಯೊಬ್ಬರು ಇಂದು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಮ್ಮ ಈ ಸ್ಥಿತಿಗೆ ತಾವೇ ಕಾರಣ ಎಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಾ ದಿನ ಸವೆಸುತ್ತಿದ್ದಾರೆ. ನಿಧಿ ಆಸೆಗೆ ತಮಗೆ ನೆಲೆಯಾಗಿದ್ದ ಮನೆಯನ್ನೇ ಅಗೆದು ಈಗ ಬೀದಿ ಪಾಲಾಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮಡಿಕೇರಿ ಸಮೀಪದ ಚೇಲಾವರ ಗ್ರಾಮದ ನಿವಾಸಿ ಗಣಪತಿ ಎಂಬುವರು ತಮ್ಮ ಮನೆಯಲ್ಲಿ ನಿಧಿ ಸಿಗುತ್ತದೆ ಎಂದು ನಂಬಿ ಮಾಡಿಕೊಂಡಿರುವ ಅವಾಂತರ ಇದು. ಈ ಕುರಿತ ಸಂಪೂರ್ಣ ಕಥೆ ಇಲ್ಲಿದೆ...

ಮನೆಯಡಿ ನಿಧಿ ಇದೆ ಎಂದ ಕೇರಳದ ಮಂತ್ರವಾದಿ
ಶಾಸ್ತ್ರ, ಮಂತ್ರ, ಜೋತಿಷ್ಯವನ್ನು ಅತಿಯಾಗಿ ನಂಬುತಿದ್ದರು ಗಣಪತಿ. ಹೀಗೆ ಒಮ್ಮೆ ಅವರಿಗೆ ಕೇರಳ ಮೂಲದ ಮಂತ್ರವಾದಿಯೊಬ್ಬ, "ನಿಮ್ಮ ಮನೆಯೊಳಗೆ ನಿಧಿ ಇದೆ. ಅಗೆದರೆ ಅದು ನಿಮಗೆ ಸಿಗುತ್ತದೆ" ಎಂದಿದ್ದಾನೆ. ಆತನ ಮಾತಿಗೆ ಮರುಳಾದ ಗಣಪತಿ ಅವರು, ತಮ್ಮ ಮನೆಯೊಳಗೆ ಹಾಗೂ ಮನೆಯ ಸುತ್ತ ಅಗೆದು ತೆಗೆದಿದ್ದಾರೆ. ಅಗೆದಷ್ಟೂ ಮಣ್ಣು ಸಿಕ್ಕಿತೇ ವಿನಃ ಇನ್ನೇನೂ ಸಿಕ್ಕಲಿಲ್ಲ. ಜತೆಗೇ ಮನೆ ಸುತ್ತ ಗುಂಡಿ ನಿರ್ಮಾಣವಾಯಿತು.

ನೆಮಸಮವಾಯಿತು ಇಡೀ ಮನೆ
ಮನೆ ಅಗೆದು ನಿರ್ಮಾಣಗೊಂಡ ಗುಂಡಿಯನ್ನು ಗಣಪತಿ ಮುಚ್ಚಲೇ ಇಲ್ಲ. ಹೀಗೆ ಅಗೆಸಿದ ಗುಂಡಿಯಲ್ಲೆಲ್ಲಾ ಕಳೆದ ಮಳೆಗಾಲದಲ್ಲಿ ನೀರು ನಿಂತು ಮಣ್ಣಿನ ಗೋಡೆ ಹೊಂದಿದ್ದ ಇಡೀ ಮನೆ ಬಿದ್ದು ನೆಲಸಮವಾಗಿದೆ. ನಿಧಿಯನ್ನು ತೆಗೆಯುವ ನೆಪದಲ್ಲಿ ಕೇರಳದಿಂದ ಮಂತ್ರವಾದಿಗಳು ಗಣಪತಿ ಮನೆಗೆ ಬಂದಿದ್ದರು ಎನ್ನಲಾಗಿದೆ.

ಕೃತ್ಯಕ್ಕೆ ಕುಮ್ಮಕ್ಕು ಯಾರದ್ದು?
ಆದರೆ ಹೀಗೆ ಮಾಡಲು ಕುಮ್ಮಕ್ಕು ನೀಡಿದವನು ಇದೇ ಊರಿನ ಒಬ್ಬ ವ್ಯಕ್ತಿ ಎನ್ನುವ ಆರೋಪ ಕೇಳಿ ಬಂದಿದೆ. ಆ ವ್ಯಕ್ತಿಯ ಮಾತನ್ನು ನಂಬಿ ನಾನು ಹಾಳಾಗಿ ಹೋಗಿದ್ದೇನೆ ಎಂದು ಗಣಪತಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಚೇಲಾವರ ಗ್ರಾಮಕ್ಕೆ ಹೊಂದಿಕೊಂಡಂತೆ ಕಬ್ಬೆ ಬೆಟ್ಟವಿದೆ. ಈ ಬೆಟ್ಟವನ್ನು ದಾಟಿದರೆ ಕೇರಳ ರಾಜ್ಯ ಸಿಗುತ್ತದೆ. ಬೆಟ್ಟದಲ್ಲಿ ಅಪಾರ ನಿಧಿ ಇದೆ ಎನ್ನುವ ನಂಬಿಕೆ ಇಲ್ಲಿಯ ಜನರದ್ದು. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಕೆಲವರು ಗಣಪತಿಯವರ ತಲೆಕೆಡಿಸಿ ಅವರ ಮನೆಯೊಳಗೆ ಮತ್ತು ಮನೆ ಸುತ್ತ ಅಗೆಸಿದ್ದಾರೆ. ಮನೆಯ ಸುತ್ತ ಅಗೆಯುವ ವಿಷಯ ಮಡಿಕೇರಿ ಪೋಲೀಸರಿಗೂ ತಿಳಿದು ಅವರೂ ಬಂದು ಪರಿಶೀಲಿಸುವ ವೇಳೆಗೆ ಮಂತ್ರವಾದಿಗಳು ಕಾಲ್ಕಿತ್ತಿದ್ದರು.

ಜೀವನ್ಮರಣದ ನಡುವೆ ಒದ್ದಾಡುತ್ತಿರುವ ಗಣಪತಿ
ಆಸರೆಗಿದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಗಣಪತಿ, ಚೇಲಾವರದಿಂದ ಮೂರು ಕಿಲೋಮೀಟರ್ ದೂರದ ಕಬ್ಬೆ ಬೆಟ್ಟದ ತಪ್ಪಲಿನ ಐಟಿಡಿಪಿ ಇಲಾಖೆ ನಿರ್ಮಿಸಿರುವ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ನರಿಯಂದಡ ಗ್ರಾಮ ಪಂಚಾಯ್ತಿಯವರು ಸಮುದಾಯ ಭವನವನ್ನು ಖಾಲಿ ಮಾಡುವಂತೆ ಗಣಪತಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ ಕಾಲಿಗೆ ಗ್ಯಾಂಗ್ರಿನ್ ಆಗಿ ಜೀವನ್ಮರಣದಲ್ಲಿ ಒದ್ದಾಡುತ್ತಿರುವ ಗಣಪತಿ ಇರಲು ಸೂರೂ ಇಲ್ಲದೆ, ದುಡಿಮೆಯೂ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.












Click it and Unblock the Notifications