ಕೊಡಗಿನಲ್ಲಿ ತಗ್ಗಿದ ಮಳೆರಾಯ; ಜಿಲ್ಲೆಯ ಮಳೆ ವಿವರ...
ಮಡಿಕೇರಿ, ಆಗಸ್ಟ್ 25: ಈ ಬಾರಿ ಆರಿದ್ರಾ ಮಳೆಯ ಆರ್ಭಟಕ್ಕೆ ಕೊಡಗಿನಲ್ಲಿ ಪ್ರವಾಹ ಏರ್ಪಟ್ಟು, ಭೂಕುಸಿತದಿಂದ ಐವರು ಪ್ರಾಣ ಕಳೆದುಕೊಂಡರು. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಯಿತು. ಆದರೆ ಇದೀಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ತಗ್ಗಿದ್ದು ಜನ ನೆಮ್ಮದಿಯುಸಿರು ಬಿಡುವಂತಾಗಿದೆ.
Recommended Video
ಮಳೆಯಿಂದಾಗಿರುವ ಅನಾಹುತದಿಂದ ಚೇತರಿಸಿಕೊಳ್ಳಲು ಇಲ್ಲಿನವರು ಪರದಾಡುತ್ತಿದ್ದಾರೆ. ಪರಿಸ್ಥಿತಿ ಯಥಾ ಸ್ಥಿತಿಗೆ ಬರಲು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. ಜಿಲ್ಲಾಡಳಿತ ಕೊಚ್ಚಿ ಹೋಗಿರುವ ಸೇತುವೆ, ರಸ್ತೆ, ಮುರಿದು ಬಿದ್ದಿರುವ ವಿದ್ಯುತ್ ಕಂಬ ಇನ್ನಿತರ ಕಾಮಗಾರಿಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಅಬ್ಬರಿಸದೆ ಸಾಧಾರಣವಾಗಿ ಸುರಿದರೆ ಸಾಕಪ್ಪಾ ಎಂದು ಜನ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಮೂರು ವರ್ಷಗಳಿಂದ ಇದೇ ಪಾಡು
ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಜೀವಹಾನಿಯಾಗುತ್ತಿರುವುದು ಮಾಮೂಲಿಯಾಗಿದೆ. ನಿರೀಕ್ಷೆ ಮಾಡದ ಸ್ಥಳಗಳಲ್ಲೆಲ್ಲ ಭೂಕುಸಿತ ಸಂಭವಿಸುತ್ತಿದೆ. ಜತೆಗೆ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಸಣ್ಣಪುಟ್ಟ ನದಿ, ಹೊಳೆಗಳಲ್ಲಿ ಪ್ರವಾಹ ಏರ್ಪಟ್ಟಿದ್ದರಿಂದ ತೋಟ, ಗದ್ದೆ, ಮನೆಗಳಿಗೆ ಹಾನಿಯಾಗಿವೆ. ಮುಂದಿನ ದಿನಗಳಲ್ಲಿ ಮತ್ತೆ ಮಳೆ ಸುರಿದರೆ ಎಂಬ ಭಯವೂ ಇಲ್ಲದಿಲ್ಲ. ಈಗಿನ ವಾತಾವರಣವನ್ನು ಗಮನಿಸಿದರೆ ಮಳೆ ದೂರ ಹೋದಂತೆ ಕಂಡು ಬರುತ್ತಿದೆ.

ಕಳೆದ ವರ್ಷಕ್ಕಿಂತ ಕಡಿಮೆ ಮಳೆ ದಾಖಲು
ಕಳೆದ ವರ್ಷಕ್ಕೆ ಹೋಲಿಸಿ, ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಸುರಿದ ಸರಾಸರಿ ಮಳೆಯ ಪ್ರಮಾಣವನ್ನು ಗಮನಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದು. ಈ ವರ್ಷ 1858.98 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1945.68 ಮಿ.ಮೀ ಮಳೆ ಸುರಿದಿತ್ತು. ಆದರೆ ಮಡಿಕೇರಿ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 2621.78 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2603.04 ಮಿ.ಮೀ. ಮಳೆಯಾಗಿತ್ತು. ಆದರೆ ವಿರಾಜಪೇಟೆ 1697 ಮಿ.ಮೀ ಮತ್ತು ಸೋಮವಾರ ಪೇಟೆ ತಾಲೂಕಿನಲ್ಲಿ 1257 ಮಿ.ಮೀ. ಮಳೆ ಸುರಿದಿದೆ.

ಜಲಾಶಯದಿಂದ ನೀರು ಬಿಡುಗಡೆ
ಕಳೆದ ವರ್ಷ ಇದೇ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿದಿತ್ತು. ನಾನೂರು ಮಿ.ಮೀ.ಗಿಂತಲೂ ಹೆಚ್ಚು ಸುರಿಯುತ್ತಿದ್ದ ಭಾಗಮಂಡಲದಲ್ಲಿ ಈಗ ಕೇವಲ 8.20 ಮಿ.ಮೀ. ಮಳೆ ಸುರಿಯುತ್ತಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ತಗ್ಗಿರುವ ಕಾರಣದಿಂದಾಗಿ ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಸದ್ಯ ಕೇವಲ 1002 ಕ್ಯುಸೆಕ್ ಒಳಹರಿವಿದೆ. 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಇದೀಗ 2858.23 ಅಡಿಯಷ್ಟು ನೀರಿದೆ. ಹೀಗಾಗಿ ಜಲಾಶಯದಿಂದ ನದಿಗೆ 977, ನಾಲೆಗೆ 200 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

ಕೃಷಿಕರಿಗೆ ಸವಾಲಿನ ಸ್ಥಿತಿ
ಪ್ರತಿವರ್ಷವೂ ಮಳೆಗಾಲ ತರುವ ಅವಾಂತರದಿಂದ ಜನರು ಸಂಕಷ್ಟವನ್ನು ಅನುಭವಿಸುವುದು ತಪ್ಪಿಲ್ಲ. ಮಳೆಗೆ ಬಾಳೆ, ಕಾಫಿ, ಕರಿಮೆಣಸು ಎಲ್ಲವೂ ನಾಶವಾಗಿದ್ದು, ಮುಂದೆ ಮಳೆ ಹೆಚ್ಚಾದರೆ ಕಾಯಿ ಕಟ್ಟಿರುವ ಕಾಫಿಯೂ ಉದುರುವ, ಕರಿಮೆಣಸಿಗೆ ಸೊರಗುರೋಗ ಬಾಧಿಸುವ ಭಯವೂ ಕಾಡತೊಡಗಿದೆ. ಒಟ್ಟಾರೆ ಈ ಬಾರಿಯ ಮಳೆಗಾಲದ ಹೊಡೆತಕ್ಕೆ ಸಿಲುಕಿರುವ ಬೆಳೆಗಾರರು ಚೇತರಿಸಿಕೊಳ್ಳುವುದೇ ಸವಾಲಾಗಿದೆ.












Click it and Unblock the Notifications