ಗತಕಾಲದ ಮಳೆಯ ದಿನವನ್ನು ಮೆಲುಕು ಹಾಕಿಸಿದ ಮಡಿಕೇರಿ ಮಳೆ
ಮಡಿಕೇರಿ, ಆಗಸ್ಟ್ 6: ಒಂದು ಕಾಲದಲ್ಲಿ ವರ್ಷದ ಆರು ತಿಂಗಳು ಕೊಡಗಿನಲ್ಲಿ ಮಳೆ ಸುರಿಯುತ್ತಿತ್ತು. ಆಗ ಬೇರೆ ಜಿಲ್ಲೆಯಿಂದ ಅನಿವಾರ್ಯವಾಗಿ ಕೆಲಸಕ್ಕೆ ಬರುವ ಸರ್ಕಾರಿ ನೌಕರರು ಭಯಭೀತರಾಗುತ್ತಿದ್ದರು. ಬೇಕಾದರೆ ಬೇರೆಲ್ಲಿಗಾದರೂ ವರ್ಗ ಮಾಡಿ ಮಡಿಕೇರಿ ಮಾತ್ರ ಬೇಡವೇ ಬೇಡ ಎಂದು ಗೋಗರೆಯುತ್ತಿದ್ದರು.
ಹೌದು! ಅವತ್ತಿನ ಮಳೆ ಹಾಗಿತ್ತು. ಮಳೆ ಬಂದು ಅನಾಹುತಗಳಾಗುತ್ತಿರಲಿಲ್ಲ. ಬದಲಿಗೆ ರಭಸವಿಲ್ಲದೆ ಒಂದೇ ಸಮನೆ ಸುರಿಯುತ್ತಿತ್ತು. ಮೇ ತಿಂಗಳಿಂದಲೇ ಆರಂಭವಾಗುತ್ತಿದ್ದ ಮಳೆ ಅಕ್ಟೋಬರ್ ತನಕ ಒಂದೇ ಸಮನೆ ಸುರಿಯುತ್ತಿತ್ತು. ಮಕ್ಕಳು ಕೂಡ ಮಳೆಗೆ ಹೆದರಿ ಮನೆಯೊಳಗೆ ಕೂರುವ ಜಾಯಮಾನದವರಾಗಿರಲಿಲ್ಲ.
ಸುರಿಯುವ ಮಳೆಗೆ ಗೋಲಿ, ಬುಗುರಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲ ಬಿದಿರು ಮೆಳೆಗಳ ನಡುವೆ ಮೂಡಿ ಬರುವ ಕಣಿಲೆ ಕತ್ತರಿಸುವುದು ಅಣಬೆ ಹುಡುಕುವುದು, ಹೊಳೆ, ತೋಡುಗಳ ಬದಿಯಲ್ಲಿ ಏಡಿ, ಮೀನು ಹಿಡಿಯುವುದನ್ನು ಮಾಡುತ್ತಿದ್ದರು. ಗದ್ದೆ ಪಕ್ಕದಲ್ಲಿ ವಿಶಾಲವಾದ ಮೈದಾನ ಇದನ್ನು ಇಲ್ಲಿ ಬಾಣೆ ಎನ್ನಲಾಗುತ್ತದೆ. ಇದನ್ನು ಉಳುಮೇ ಮಾಡುವ ದನಗಳನ್ನು ಮೇಯಿಸಲು ಬಳಸಲಾಗುತ್ತಿತ್ತು.
ಇದೆಲ್ಲದರ ನಡುವೆ ಮಳೆಯಿಂದ ರಕ್ಷಿಸಿಕೊಳ್ಳಲು ಗೊರ್ಗ(ಕೊರಂಬು)ವನ್ನು ಬಿದಿರಿನ ರೀತಿಯ ವಾಟೆ ಎಂದು ಕರೆಯುವ ಸಸ್ಯದಿಂದ ಮಾಡುತ್ತಿದ್ದು, ಅದರೊಳಗೆ ಕೂವಲೆ ಎಂಬ ಸಸ್ಯದ ಎಲೆಯನ್ನು ಹೊದಿಕೆಯಾಗಿಡುತ್ತಿದ್ದರು. ಇದು ಗಾಳಿ ಮಳೆಯಿಂದ ಮೈಯನ್ನು ರಕ್ಷಿಸುತ್ತಿತ್ತು.
ಬಟ್ಟೆಯನ್ನು ಒಣಗಿಸಲು ಬಿದಿರಿನಿಂದ ಮಾಡಿದ ಬಳಂಜಿಯನ್ನು ಉಪಯೋಗಿಸುತ್ತಿದ್ದರು. ಅದರೊಳಗೆ ಕೆಂಡವನ್ನಿಟ್ಟು ಮೇಲೆ ಬಟ್ಟೆಯೊಂದನ್ನು ಮುಚ್ಚಿ ಅದರ ಮೇಲೆ ಬಟ್ಟೆಯನ್ನು ಹಾಕಿ ಒಣಗಿಸುತ್ತಿದ್ದರು. ಕೆಲವೊಮ್ಮೆ ವಾರ ಕಳೆದರೂ ಬಟ್ಟೆಗಳೇ ಒಣಗದೆ ವಾಸನೆ ಬರುತ್ತಿದ್ದವು.
ಗ್ರಾಮೀಣ ಪ್ರದೇಶಗಳಲ್ಲಂತೂ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಜಿಗಣೆಗಳು ದಾಳಿ ಮಾಡಿಬಿಡುತ್ತಿದ್ದವು. ಅವುಗಳಿಂದ ರಕ್ಷಿಸಿಕೊಳ್ಳಲು ಕಾಲಿಗೆ ನಿಂಬೆಹಣ್ಣಿನ ರಸ, ತಂಬಾಕಿನ ರಸವನ್ನು ಲೇಪಿಸಿಕೊಂಡು ಹೋಗಬೇಕಾಗುತ್ತಿತ್ತು. ಆದರೂ ವರ್ಷಕ್ಕೆ ಒಂದಿಷ್ಟು ರಕ್ತವನ್ನು ಜಿಗಣೆಗಳಿಗೆ ನೀಡಬೇಕಾಗಿತ್ತು.
ಮೂರ್ನಾಲ್ಕು ದಶಕಗಳಿಂದ ಎಲ್ಲವೂ ಬದಲಾಗುತ್ತಿದೆ. ಮಳೆಯೂ ಅಷ್ಟೆ ಮೊದಲಿನಂತೆ ಸುರಿಯುತ್ತಿಲ್ಲ. ಆದರೆ ಈ ವರ್ಷ ಮಾತ್ರ ಹಳೆಯ ನೆನಪುಗಳನ್ನು ತರುವಂತೆ ಮಳೆ ಸುರಿದಿದೆ. ಮಳೆಯನ್ನೇ ಮರೆತಿದ್ದ ಮಂದಿಗೆ ಹಿಂದಿನ ಮಳೆಗಾಲದ ಕಷ್ಟ-ನಷ್ಟಗಳನ್ನು ಮೆಲುಕು ಹಾಕುವಂತೆ ಮಾಡಿದೆ.

ಮಳೆಗಾಲ ಕಳೆಯುವುದೆಂದರೆ ಯುದ್ಧ ಜಯಿಸಿದಂತೆ!
ಒಂದೇ ಒಂದು ಹನಿ ತುಂಡಾಗದೆ ವಾರಗಟ್ಟಲೆ ಮಳೆ ಬರುತ್ತಿದ್ದರೆ ಆ ಮಳೆಗೆ ಅಂಜದೆ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಆಗ ಮಳೆಗಾಲವೆಂದರೆ ಅದೊಂದು ಯುದ್ಧದಂತೆ ಭಾಸವಾಗುತ್ತಿತ್ತು. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಬೇಸಿಗೆಯಲ್ಲಿಯೇ ಮಳೆಗಾಲ ಕಳೆಯುವಷ್ಟು ಸೌದೆ, ಅಕ್ಕಿ, ದಿನಸಿ ಪದಾರ್ಥಗಳು, ಕಾಳು ಕಡ್ಡಿಗಳು, ಸೌತೆಕಾಯಿ, ಗೆಣಸು, ಹಲಸಿ ಹಪ್ಪಳ, ಬೀಜ ಹೀಗೆ ತಮ್ಮ ಸುತ್ತಮುತ್ತ ದೊರೆಯುವ ಹಾಗೂ ತಾವೇ ಬೆಳೆಸಿದ ತರಕಾರಿ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿಡುತ್ತಿದ್ದರು. ಇದರಿಂದಾಗಿ ಮಳೆ ತಿಂಗಳಾನುಗಟ್ಟಲೆ ಸುರಿದರೂ ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಶಾಲೆಗೆ ನಾಲ್ಕೈದು ಕಿ.ಮೀ. ನಡೆಯುತ್ತಿದ್ದ ಮಕ್ಕಳು
ಜೂನ್ನಿಂದಲೇ ಮಳೆ ಆರಂಭವಾಗುತ್ತಿತ್ತು. ಆಗಲೇ ಗದ್ದೆಯಲ್ಲಿ ಭತ್ತದ ಕೃಷಿ ಕಾರ್ಯವೂ ಆರಂಭ. ಮಕ್ಕಳು ಶಾಲೆಗೆ ತೆರಳುವ ಮುನ್ನ ತಮ್ಮ ಗದ್ದೆಯಲ್ಲಿ ಕೆಲಸ ಮಾಡಿ ಹೊರಡುತ್ತಿದ್ದರು. ಒಂದನೇ ತರಗತಿಗೆ ಸುಮಾರು ನಾಲ್ಕೈದು ಕಿ.ಮೀ. ದೂರದ ಡಾಂಬರು ಇಲ್ಲದ, ಕೆಸರು ತುಂಬಿದ ಮಣ್ಣು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಶಾಲೆಗೆ ಬಂದು ತಲುಪುವ ವೇಳೆ ಛತ್ರಿ ಇದ್ದರೂ ಬಟ್ಟೆಗಳೆಲ್ಲ ಒದ್ದೆಯಾಗಿ ಬಿಡುತ್ತಿತ್ತು. ಪುಸ್ತಕದ ಚೀಲವನ್ನು ಮಾತ್ರ ತಬ್ಬಿಕೊಂಡು ಜೋಪಾನ ಮಾಡುತ್ತಿದ್ದರು. ಕೆಲವೊಮ್ಮೆ ಮಳೆಗೆ ಪುಸ್ತಕಗಳು ಒದ್ದೆಯಾಗಿ ಬಿಡುತ್ತಿದ್ದವು.

ದನ ಮೇಯಿಸೋದು.. ಕಾಡು ಹಣ್ಣು ಕೀಳೋದು..
ಆಗಿನ್ನೂ ವಾಣಿಜ್ಯ ಬೆಳೆಗಳ ವಹಿವಾಟು ಹೆಚ್ಚಾಗಿ ಇಲ್ಲದ ಕಾರಣ ಎಲ್ಲೆಡೆ ಖಾಲಿ ಜಾಗಗಳು ಉಳಿದಿದ್ದವು. ಅಲ್ಲಿ ದನಗಳನ್ನು ಮೇಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಕಾಡುಗಳಲ್ಲಿ ಹಲವು ವಿಧದ ಹಣ್ಣುಗಳು ಮಳೆಗಾಲದಲ್ಲಿ ತಿನ್ನಲು ಸಿಗುತ್ತಿದ್ದವು. ಮಕ್ಕಳಿಗೆ ಪ್ರತಿವರ್ಷವೂ ಜುಲೈ 22ರಿಂದ ಸುಮಾರು 15 ದಿನಗಳ ಕಾಲ ಮಳೆಗಾಲದ ರಜೆಯನ್ನು ನೀಡಲಾಗುತ್ತಿತ್ತು. ಈ ವೇಳೆ ಭತ್ತದ ಕೃಷಿಯ ಕಾಲವಾದ್ದರಿಂದ ಮಕ್ಕಳು ತಮ್ಮ ಪೋಷಕರಿಗೆ ಕೃಷಿ ಕಾರ್ಯಗಳಿಗೆ ಸಹಕರಿಸುತ್ತಿದ್ದರು.

ಹಲಸಿನ ಬೀಜವೇ ಟೈಂಪಾಸ್ ಕಡ್ಲೆಕಾಯಿ
ಮಳೆಗಾಲದಲ್ಲಿ ತಮ್ಮ ಕೆಲಸವಾಯಿತು ತಾವಾಯಿತು ಎನ್ನುವಂತಿದ್ದ ಮಂದಿ ಪಟ್ಟಣದತ್ತ ಮುಖಮಾಡುತ್ತಿರಲಿಲ್ಲ. ಈ ವೇಳೆ ಸಂಜೆ ವೇಳೆ ತಿನ್ನಲು ಬೇಸಿಗೆಯಲ್ಲಿ ಸಂಗ್ರಹಿಸಿಟ್ಟ ಹಲಸಿನ ಬೀಜ, ಹಪ್ಪಳವನ್ನು ಉಪಯೋಗಿಸುತ್ತಿದ್ದರು.
ಆಗಿನ ಆಧುನೀಕತೆಗೆ ಜನ ತೆರೆದು ಕೊಂಡಿರಲಿಲ್ಲ. ಜತೆಗೆ ಬಡತನ ಹೆಚ್ಚಾಗಿದ್ದರಿಂದ ಇರೋದ್ರಲ್ಲಿ ಬದುಕನ್ನು ಕಟ್ಟಿಕೊಂಡಿದ್ದರು. ಕೃಷಿ ಅಂದರೆ ಭತ್ತ ಬೆಳೆಯುವುದೊಂದೇ ಆಗಿತ್ತು. ಅದು ಬಿಟ್ಟರೆ ಕೆಲವರಿಗೆ ಕಾಫಿ ತೋಟವಿದ್ದರೂ ಅದು ಅಷ್ಟೊಂದು ಲಾಭ ತಂದುಕೊಡುತ್ತಿರಲಿಲ್ಲ, ಹೆಚ್ಚಿನ ಜನರನ್ನು ಕಾಪಾಡುತ್ತಿದ್ದದ್ದು ಏಲಕ್ಕಿ ಕೃಷಿ. ಆ ಕಾಲದಲ್ಲಿ ಉತ್ತಮ ಫಸಲು ಬರುತ್ತಿತ್ತು. ಜತೆಗೆ ದರವೂ ಇತ್ತು. ಹೀಗಾಗಿ ಹೆಚ್ಚಿನವರು ಏಲಕ್ಕಿ ಕೃಷಿಯನ್ನು ಮಾಡುತ್ತಿದ್ದರು. ದಟ್ಟ ಕಾಡುಗಳ ನಡುವೆ ಬೀಸುವ ಗಾಳಿ, ಸುರಿಯುವ ಮಳೆಯ ನಡುವೆಯೇ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದರು. ಅದು ಅನಿವಾರ್ಯವೂ ಆಗಿತ್ತು.

ಮತ್ತೆ ಹಳೆಯ ನೆನಪು ತಂದ ಮಳೆ
ಇನ್ನು ಮಳೆ ಬರಲ್ಲ ಎಂದು ಗದ್ದೆಗಳನ್ನು ನಿವೇಶನಗಳನ್ನಾಗಿ ಮಾಡಿ ಮನೆಕಟ್ಟಿದವರು ನೀರು ಉಕ್ಕಿ ಬಂದಿದ್ದರಿಂದ ಬೆಚ್ಚಿ ಬಿದ್ದಿದ್ದಾರೆ. ಒಂದು ಕಾಲದಲ್ಲಿ ಗದ್ದೆಯಾಗಿದ್ದು ಈಗ ತೋಟವಾಗಿ ಪರಿವರ್ತನೆಯಾದ ಕಾಫಿ ತೋಟಗಳು ಜಲಾವೃತವಾಗಿವೆ. ಅಲ್ಲಲ್ಲಿ ಭೂಮಿ, ರಸ್ತೆಗಳು ಬಿರುಕುಬಿಡುತ್ತಿದ್ದು ಭಯ ಸೃಷ್ಠಿಯಾಗಿದೆ. ಅದು ಏನೇ ಇರಲಿ ಹಿಂದಿನ ಕಾಲದ ಮಳೆಯ ರೌದ್ರತೆಯನ್ನು ಮತ್ತೊಮ್ಮೆ ನೋಡುವಂತಾಗಿದೆ. ಅದಕ್ಕಿಂತ ಸಂತೋಷ ಮತ್ತೇನಿದೆ?












Click it and Unblock the Notifications