ಕೊಡಗು: ಆನಂದತೀರ್ಥ ಪರಿಹಾರ ಚೆಕ್ ಯಾರಿಗೆ ಕೊಡಬೇಕು ಗೊಂದಲ, ನಾರಾಯಣಾಚಾರ್ ಪುತ್ರಿಯರಿಂದ ಆಕ್ಷೇಪ
ಮಡಿಕೇರಿ, ಆಗಸ್ಟ್ 16: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ಅರ್ಚಕ ನಾರಾಯಣಾಚಾರ್ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ಶಾರದಾ ಮತ್ತು ನಮಿತಾ ಅವರಿಗೆ ತಲಾ 2.5 ಲಕ್ಷ ರೂ. ಪರಿಹಾರದ ಚೆಕ್ ನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಶನಿವಾರ ವಿತರಿಸಿದರು.
ಅದೇ ರೀತಿ ನಾರಾಯಣಾಚಾರ್ ಅವರ ಅಣ್ಣ ಆನಂದ ತೀರ್ಥ ಆಚಾರ್ ಅವರು ಬ್ರಹ್ಮಚಾರಿಯಾಗಿದ್ದರಿಂದ ಅವರ ಸಹೋದರಿ ಸುಶೀಲ ಅವರಿಗೆ 5 ಲಕ್ಷ ರುಪಾಯಿಯ ಚೆಕ್ ನ್ನು ಸಚಿವರು ಹಸ್ತಾಂತರಿಸಿದರು. ಆದರೆ ಸುಶೀಲ ಅವರಿಗೆ ಚೆಕ್ ವಿತರಿಸಿದ್ದಕ್ಕೆ ನಾರಾಯಣಾಚಾರ್ ಮಕ್ಕಳಾದ ಶಾರದಾ ಮತ್ತು ನಮಿತ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಚೆಕ್ ವಿತರಣೆ ತಡೆ ಹಿಡಿಯುವಂತೆ ಒತ್ತಾಯಿಸಿದರು.
ಆನಂದ ತೀರ್ಥ ಆಚಾರ್ ಅವರು ಅವಿವಾಹಿತರಾಗಿದ್ದು, ಮೊದಲಿನಿಂದಲೂ ಸಹೋದರ ನಾರಾಯಣ ಆಚಾರ್ ಜತೆಯೇ ವಾಸವಾಗಿದ್ದರು. ಅವರ ಯೋಗ ಕ್ಷೇಮವನ್ನು ನಾರಾಯಣ ಆಚಾರ್ ಕುಟುಂಬದವರೇ ನೋಡಿಕೊಳ್ಳುತಿದ್ದು, ಅವರ ಸಹೋದರಿ ಸುಶೀಲ ಅವರು ಆನಂದ ತೀರ್ಥರಿಗೆ ಏನೂ ಮಾಡಿಲ್ಲ ಎಂಬುದು ಮಕ್ಕಳ ಆಕ್ಷೇಪವಾಗಿದೆ.

ಪರಿಹಾರದ ಚೆಕ್ ನ್ನು ನ್ಯಾಯಯುತವಾಗಿ ತಮಗೆ ನೀಡಬೇಕೆಂದು ಕೋರಿದರು. ಆದರೆ ಸಚಿವರು ನಿಯಮಾನುಸಾರ ಸಮೀಪದ ಸಂಬಂಧಿ ಸುಶೀಲ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಕ್ಕಳಾದ ಶಾರದ ಮತ್ತು ನಮಿತ ಅವರು, ಆನಂದ ತೀರ್ಥರ ಉತ್ತರಾಧಿಕಾರಿಗಳ ಬಗ್ಗೆ ತೀರ್ಮಾನ ಆಗುವವರೆಗೆ ಚೆಕ್ ಪಾವತಿ ತಡೆಹಿಡಿಯುವಂತೆ ಶಾಸಕ ಕೆ.ಜಿ ಬೋಪಯ್ಯ ಅವರನ್ನು ಒತ್ತಾಯಿಸಿದರು. ನಂತರ ಬೋಪಯ್ಯ ಅವರು ಚೆಕ್ ಹಣ ಪಾವತಿ ತಡೆ ಹಿಡಿಯುವಂತೆ ಮಡಿಕೇರಿ ತಹಸೀಲ್ದಾರ್ ಪಿ.ಎಸ್ ಮಹೇಶ ಅವರಿಗೆ ಸೂಚಿಸಿದರು.

ಶಾಸಕರಾದ ಕೆ.ಜಿ ಬೋಪಯ್ಯ ಮತ್ತು ಸಂಸದರಾದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಇತರರು ಹಾಜರಿದ್ದರು.











Click it and Unblock the Notifications