ಕೋವಿಡ್ ಕೇರ್ ಸೆಂಟರ್ ಬೇಡ; ಆದಿವಾಸಿಗಳಿಂದ ರಸ್ತೆ ಬಂದ್
ಮಡಿಕೇರಿ, ಏಪ್ರಿಲ್ 28; ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಜಿಲ್ಲಾಡಳಿತ ಮುಂದಾಗಿದ್ದು ಇದಕ್ಕೆ ಸ್ಥಳೀಯ ಆದಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆಗಳನ್ನು ಬಂದ್ ಮಾಡಿ ಕಾವಲು ಕಾಯುತ್ತಿದ್ದಾರೆ.
ಬಸವನಹಳ್ಳಿಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಎಲ್ಲರೂ ಕೂಲಿ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಾದ ಕಾರಣ ಕೆಲಸವಿಲ್ಲದೆ, ಜೀವನ ನಡೆಸುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ.
ಈ ನಡುವೆ ಸನಿಹದ ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದರೆ ಕೊರೊನಾ ಅನತಿ ದೂರದಲ್ಲಿರುವ ನಮಗೂ ಹರಡಬಹುದು ಎಂಬ ಭಯ ಆದಿವಾಸಿಗಳದ್ದಾಗಿದೆ. ಹೀಗಾಗಿ ಅವರು ಜಿಲ್ಲಾಡಳಿತದ ತೀರ್ಮಾನವನ್ನು ಕೈ ಬಿಡುವಂತೆ ಆಗ್ರಹಿದ್ದಾರೆ.

ಈ ಹಿಂದೆ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಸರ್ಕಾರ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅನತಿ ದೂರದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಅವರಿಗೆ ನೆಲೆವೂರಲು ವ್ಯವಸ್ಥೆ ಮಾಡಿಕೊಟ್ಟಿದೆ. ಇಲ್ಲಿ ಈಗ ಸುಮಾರು ಮೂರು ಸಾವಿರಕ್ಕಿಂತಲೂ ಅಧಿಕ ಮಂದಿ ಆದಿವಾಸಿಗಳು ವಾಸಿಸುತ್ತಿದ್ದಾರೆ.
ಕಳೆದ ವರ್ಷವೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದು ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಇಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಬಾರಿ ಕೊರೊನಾ ತೀವ್ರತೆ ಹೆಚ್ಚುತ್ತಿರುವುದರಿಂದ ಆದಿವಾಸಿಗಳಿಗೂ ಭಯ ಆರಂಭವಾಗಿದೆ.
ನಮಗೂ ಮಾರಕ ಕೊರೊನಾ ರೋಗ ಹರಡಬಹುದೆಂಬ ಭೀತಿಯಲ್ಲಿರುವ ಆದಿವಾಸಿಗಳು ಈಗಾಗಲೇ ಕೂಲಿಗೂ ತೆರಳದೆ ಮನೆಯಲ್ಲಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಆದ್ದರಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದರೆ ಪಕ್ಕದಲ್ಲೇ ವಾಸಿಸಬೇಕಾಗಿರುವುದರಿಂದ ನಮಗೆ ಭಯವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹೀಗಾಗಿಯೇ ಅವರು ಯಾವ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಳಗೆ ಪ್ರವೇಶ ಮಾಡದಂತೆ ರಸ್ತೆಗಳನ್ನು ಬಂದ್ ಮಾಡಿ ಕಾವಲು ಕಾಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications