ಕೊಡಗಿನಲ್ಲಿ ಪ್ರವಾಹವೇನೋ ಹೋಯ್ತು, ರೋಗ-ರುಜಿನ ಚಿಂತೆ ಬಂತು
ಬೆಂಗಳೂರು, ಆಗಸ್ಟ್ 22: ಕೊಡಗಿನಲ್ಲಿ ಪ್ರವಾಹ ಬಂದು ಜನರು ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ತುತ್ತಾಗಿದ್ದು, ಸಂತ್ರಸ್ತರಿಗೆ ಸರ್ಕಾರ ನೆರವು ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹತ್ತಿರದ ಜಿಲ್ಲೆಯ ವೈದ್ಯರು ಹಾಗೂ ಶ್ರೂಶ್ರೂಷಕರನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಸಚಿವರು ಸುಮಾರು 170 ವೈದ್ಯರು, 50 ಶ್ರೂಶ್ರೂಶಕರು 41 ಪರಿಹಾರ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸುಮಾರು 2 ಕೋಟಿ ರೂ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯ ಸಂತ್ರಸ್ಥರಿಗೆ ಹೆಚ್ಚಿನ ಸಹಾಯ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಸಾಕಷ್ಟು ವೈದ್ಯರ ಹುದ್ದೆಗಳು ಖಾಲಿ ಇದ್ದು, ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈಗಾಗಲೇ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಹಾರ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಅವರು ಸಂತ್ರಸ್ಥರ ನೆರವಿಗಾಗಿ ಇಲಾಖೆ ವತಿಯಿಂದ ಅಡುಗೆ ಅನಿಲ ಇತರೆ ಸಾಮಾಗ್ರಿ ಪೂರೈಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ತಂಡದ ಸದಸ್ಯರು ಮತ್ತು ಮಾನಸಿಕ ತಜ್ಞರಿಂದ ಎಲ್ಲಾ ನಿರಾಶ್ರಿತರ ಕೇಂದ್ರಗಳಲ್ಲಿ ಗುಂಪು ಸಭೆ ನಡೆಸುವ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬಲಾಗುತ್ತಿದೆ. ನಿರಾಶ್ರಿತರಿಗೆ ಆಪ್ತ ಸಮಲೋಚನೆಯನ್ನು ಮಾಡಲಾಗುತ್ತಿದೆ.
ಸಾಂಕ್ರಾಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರೇಡಿಯೋ ಸಂದರ್ಶನ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ, ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರ ಮನರಂಜನೆಗಾಗಿ ಮನಪರಿವರ್ತನ ಚಲನ ಚಿತ್ರಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಉನ್ನತ ಅಧಿಕಾರಿಗಳಾದ ರತನ್ ಖೇಲ್ಕರ್ ಅವರು ಪರಿಹಾರ ಕೇಂದ್ರಗಳಲ್ಲಿ ವೈದ್ಯಕೀಯ ಸಂಬಂಧಿಸಿದಂತೆ 104 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ಪ್ರಶಾಂತ್ ಕುಮಾರ್ ಮಿಶ್ರ ಇತರರು ಇದ್ದರು.

ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯ
ಕಳೆದ ಒಂದು ವಾರದಿಂದ ಸುರಿದ ದಾರಾಕಾರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದರು, ಆ ನಿಟ್ಟಿನಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲು ಪ್ರಾರಂಭಿಸಲಾಗಿದೆ. ಆ ನಿಟ್ಟಿನಲ್ಲಿ ಪರಿಹಾರ ಕೇಂದ್ರಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಈಗಾಗಲೇ ರಾಜ್ಯ ವಲಯದಲ್ಲಿ 104 ಆರೋಗ್ಯ ಸಹಾಯವಾಣಿ ಇದ್ದು, ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸಹಾಯವಾಣಿ ಸ್ಥಾಪಿಸಿಲಾಗಿದ್ದು, ಇದು ನಿರಂತರವಾಗಿ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಟೆಲಿ ಮೆಡಿಸನ್ ಕೇಂದ್ರಗಳನ್ನು ಮೂರು ಸ್ಥಳಗಳಲ್ಲಿ ಸ್ಥಾಪಿಸಲು ಕ್ರಮವಹಿಸಲಾಗಿದೆ. ಇದಕ್ಕಾಗಿ ನೆರೆಯ ಜಿಲ್ಲೆಯಲ್ಲಿರುವ ಕೆ.ಆರ್. ಆಸ್ಪತ್ರೆ, ಕೆ.ಸಿ ಜನರಲ್ ಆಸ್ಪತ್ರೆ ಹಾಗೂ ಜಯದೇವಾ ಆಸ್ಪತ್ರೆಗೆ ನೇರವಾಗಿ ಅಂತರ್ಜಾಲ ಮುಖೇನ ನೇರ ಸಂಪರ್ಕ ಸಾಧಿಸಿ ಸ್ಥಳದಲ್ಲಿಯೇ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಪರಿಹಾರ ಕೇಂದ್ರಗಳಲ್ಲಿ 102 ವೈದ್ಯರಿಂದ ಸೇವೆ
ಸಮೀಪದ ಜಿಲ್ಲೆಗಳಿಂದ ಹೆಚ್ಚಿನ ವೈದ್ಯರನ್ನು ಕರೆಸಿ ರಾತ್ರಿಯ ವೇಳೆಗೆ ಎಲ್ಲಾ ಪರಿಹಾರ ಕೇಂದ್ರಗಳಿಗೆ ವೈದ್ಯಕೀಯ ಸೇವೆಯನ್ನು ನೀಡಲಾಗಿದೆ.ಈಗಾಗಲೇ 102 ವೈದ್ಯರು ಪರಿಹಾರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಒಪ್ಪಿಗೆ ನೀಡಿದ್ದಾರೆ.
ಪರಿಹಾರ ಕಾರ್ಯಕ್ಕೆ ಅವಶ್ಯಕವಾದ ಎಲ್ಲಾ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ, ತುರ್ತು ಸಂದರ್ಭಕ್ಕೆ ಅನುಗುಣವಾಗಿ ಜಿಲ್ಲೆಯ ಎಲ್ಲಾ ಆಂಬ್ಯುಲೆನ್ಸ್ಗಳ ಜೊತೆಯಲ್ಲಿ ಹೊರ ಜಿಲ್ಲೆಯಿಂದ ಹಾಗೂ ಖಾಸಗಿ ಆಂಬ್ಯುಲೆನ್ಸ್ಗಳನ್ನು ಉಪಯೋಗಿಸಲಾಗುತ್ತಿದೆ.

ಬ್ಲೀಚಿಂಗ್ ಪೌಡರ್, ಫಿನಾಯಿಲ್ ದಾಸ್ತಾನು
ಅಂತರ್ಜಾಲದಲ್ಲಿ ಗೂಗಲ್ಡಾಕ್ ಸಹಾಯದಿಂದ ಪರಿಹಾರ ಕಾರ್ಯದಲ್ಲಿ ನೆರವಾಗಲು ಇಚ್ಚೆ ಇರುವ ವೈದ್ಯರು ನೋದಾಯಿಸಿಕೊಳ್ಳಲು ಅನುವು ಮಾಡಿ ಕೊಡಲಾಗಿದೆ. ಈಗಾಲೇ 170 ಹೆಚ್ಚು ವೈದ್ಯರು 50 ಹೆಚ್ಚು ಶುಶ್ರೂಷಕಿಯರು ನೊಂದಾಯಿಸಿ ಕೊಂಡಿದ್ದಾರೆ.
ನೈರ್ಮಲ್ಯ ಕಾರ್ಯಕ್ಕೆ ಬೇಕಾಗುವ ಬ್ಲೀಚಿಂಗ್ ಪೌಡರ್ ಮತ್ತು ಫಿನಾಯಿಲ್ ದ್ರಾವಣಗಳನ್ನು ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಮುಳುಗಡೆಯಾಗಿರುವ ಪ್ರದೇಶಗಳಾದ ಕುಶಾಲನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಆ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನಿಂದ ಸುಮಾರು 300 ಪೌರಕಾರ್ಮಿಕರು ಆಗಮಿಸಿ ಸ್ವಚ್ಚತಾ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

ಸಾಂಕ್ರಾಮಿಕ ರೋಗಗಳು ಹರಡದಂತೆ ಸರ್ವೇಕ್ಷಣ ಕಾರ್ಯ
ಸಾಂಕ್ರಾಮಿಕ ರೋಗಗಳು, ಹರಡದಂತೆ ಜಿಲ್ಲಾ ಸರ್ವೇಕ್ಷಣ ಘಟಕ, ರಾಜ್ಯ ಸರ್ವೇಕ್ಷಣ ಘಟಕ ಮತ್ತು ನೆರೆಯ ಜಿಲ್ಲೆಯಾದ ಚಿತ್ರದುರ್ಗ, ತುಮಕೂರು, ದಾವಣಗೆರೆಯ ಸರ್ವೇಕ್ಷಣ ಘಟಕದ ಸಿಬ್ಬಂದಿಯ ಸಹಾಯದಿಂದ ಜಿಲ್ಲಾದ್ಯಾಂತ ಸರ್ವೆಕ್ಷಣ ಕಾರ್ಯ ಪ್ರಾರಂಭಿಸಲಾಗಿದೆ.
ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ನೇರೆಯ ಜಿಲ್ಲೆಯ ಆಹಾರ ಸುರಕ್ಷತ ಅಧಿಕಾರಿಗಳನ್ನು ನೇಮಿಸಿ ಕೊಂಡು ಪರಿಹಾರ ಕೇಂದ್ರಗಳಲ್ಲಿ ಶುದ್ದ ಆಹಾರ ಮತ್ತು ಶುದ್ದ ಕುಡಿಯುವ ನೀರನ್ನು ಪೂರೈಸಲು ಕ್ರಮವಹಿಸಲಾಗಿದೆ.












Click it and Unblock the Notifications