ಮಡಿಕೇರಿಯ ನೆಹರು ಮಂಟಪಕ್ಕೆ ಮತ್ತೆ ಬಂತು ಜೀವ ಕಳೆ

ಮಡಿಕೇರಿ, ಮೇ.10:ಕಳೆದ ಒಂದೆರಡು ದಶಕಗಳಿಂದ ಮಡಿಕೇರಿಯಲ್ಲಿದ್ದ ಪ್ರವಾಸಿ ತಾಣ ನೆಹರು ಮಂಟಪ ತನ್ನ ವೈಭವ ಕಳೆದುಕೊಂಡು ಮೂಲೆಗುಂಪಾಗಿತ್ತಲ್ಲದೆ, ಇತರೆ ಪ್ರವಾಸಿ ತಾಣಗಳ ನಡುವೆ ಅದೃಶ್ಯವಾಗಿತ್ತು. ದೂರದ ಪ್ರವಾಸಿಗರಿರಲಿ, ಸ್ಥಳೀಯರೇ ಈ ತಾಣವನ್ನು ಮರೆತು ಬಿಟ್ಟಿದ್ದರು.

ಈಗಾಗಲೇ ನೆಹರು ಮಂಟಪಕ್ಕೆ ಕಾಯಕಲ್ಪ ಕಲ್ಪಿಸಲು ಮಡಿಕೇರಿ ನಗರಸಭೆ ಹಾಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಹಳೆಯ ನೆಹರು ಮಂಟಪಕ್ಕೆ ಹೊಸತನ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.

ಹಿಂದೆ ನಿರ್ಮಿಸಲಾಗಿದ್ದ ಮಂಟಪದ ಸ್ವರೂಪವನ್ನು ಬದಲಾಯಿಸಲಾಗಿದ್ದು, ಆಕರ್ಷಕ ಛಾವಣಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಸುತ್ತಮುತ್ತ ಬೆಳೆದಿದ್ದ ಕಾಡನ್ನು ತೆರವುಗೊಳಿಸಿ ಅಲ್ಲಿ ವಿಶ್ರಾಂತಿ ಪಡೆಯಲು ಗ್ರಾನೈಟ್ ಬೆಂಚುಗಳನ್ನು ಅಳವಡಿಸಲಾಗುತ್ತಿದೆ.

ಅಷ್ಟೇ ಅಲ್ಲದೆ, ಮೆಟ್ಟಿಲುಗಳನ್ನು ಆಧುನೀಕರಣಗೊಳಿಸಿ, ಹೂಗಿಡಗಳನ್ನು ನೆಟ್ಟು ಆಕರ್ಷಣೆ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನೆಹರು ಮಂಟಪಕ್ಕೆ ಭೇಟಿ ನೀಡಿ, ನೆಹರು ಮಂಟಪದ ಆಧುನೀಕರಣದ ಕಾಮಗಾರಿಗಳನ್ನು ಪರಿಶೀಲಿಸಿ ಸಲಹೆಗಳನ್ನು ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ನೆಹರು ಮಂಟಪ ಸುಂದರವಾಗಿ ಆಕರ್ಷಕವಾಗಿ ಕಂಗೊಳಿಸುವ ಮೂಲಕ ಪ್ರವಾಸಿಗರ ಮನಸೆಳೆಯಲಿದೆ. ಇನ್ನು ನೆಹರು ಮಂಟಪದ ಕುರಿತಂತೆ ಇತಿಹಾಸದ ಪುಟಗಳನ್ನು ಕೆದಕಿ ನೋಡಿದರೆ ಇದು ಒಂದು ಕಾಲದಲ್ಲಿ ಮಡಿಕೇರಿ ನಗರದಲ್ಲಿ ತನ್ನದೇ ಆದ ಆಕರ್ಷಣೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿತ್ತು ಎಂಬುದು ಗೊತ್ತಾಗುತ್ತದೆ.

ಸುತ್ತಲಿನ ಸೌಂದರ್ಯವನ್ನು ನೋಡುವುದೇ ಖುಷಿ

ಸುತ್ತಲಿನ ಸೌಂದರ್ಯವನ್ನು ನೋಡುವುದೇ ಖುಷಿ

ಆ ದಿನಗಳಲ್ಲಿ ಮಡಿಕೇರಿ ಈಗಿನಷ್ಟು ಬೆಳೆದಿರಲಿಲ್ಲ. ಬೆಟ್ಟಗುಡ್ಡಗಳನ್ನು ಮಾನವ ಆಕ್ರಮಿಸಿರಲಿಲ್ಲ. ಎಲ್ಲವೂ ಹಸಿರ ಹಚ್ಚಡದ ಸುಂದರ ನಿಸರ್ಗದಿಂದ ಕಂಗೊಳಿಸುತ್ತಿತ್ತು. ರಾಜಾಸೀಟಿಗೆ ತೆರಳಿದವರು ಪಕ್ಕದ ಗುಡ್ಡದ ಮೇಲೆ ನಿಂತು ಮಡಿಕೇರಿ ಪಟ್ಟಣ ಹಾಗೂ ಸುತ್ತಲಿನ ಸೌಂದರ್ಯವನ್ನು ನೋಡುವುದೇ ಒಂದು ರೀತಿಯ ಖುಷಿಕೊಡುತ್ತಿತ್ತು. ಆ ಸುಂದರ ದೃಶ್ಯಗಳು ಹೇಗಿದ್ದವು ಎಂದರೆ ದೂರದಲ್ಲಿ ಸಾಲು ಸಾಲಾಗಿ ನಿಂತು ಬಾನಿಗೆ ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಭಾಸವಾಗುವ ಪರ್ವತ ಶ್ರೇಣಿಗಳು...ಅವುಗಳ ಇಳಿಜಾರು ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು... ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು... ಮರ ಕಾಡುಗಳ ಮಧ್ಯೆ ತಲೆ ಎತ್ತಿ ನಿಂತ ಮನೆಗಳು... ಅಂಕುಡೊಂಕಾಗಿ ಹಾದು ಹೋದ ರಸ್ತೆಗಳು ಕಣ್ಣಿಗೆ ಹಬ್ಬ ನೀಡುತ್ತಿತ್ತು. ಹೀಗಾಗಿಯೇ ತಮ್ಮೆಲ್ಲಾ ಜಂಜಾಟಗಳನ್ನು ಬದಿಗೊತ್ತಿ ಸಂಜೆಯ ಕ್ಷಣಗಳನ್ನು ಈ ಗುಡ್ಡದಲ್ಲಿ ಕುಳಿತು ಕಳೆಯಲೆಂದು ನಗರದ ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಧರ್ಮವೀರ ಮಂಟಪ ನಿರ್ಮಿಸಿದ್ದರು

ಧರ್ಮವೀರ ಮಂಟಪ ನಿರ್ಮಿಸಿದ್ದರು

ಇದೆಲ್ಲದರ ನಡುವೆ 1957 ರಲ್ಲಿಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರು ಇದೇ ಗುಡ್ಡದ ಮೇಲೆ ನಿಂತು ಕಾಫಿಗೆ ಹೆಸರಾದ ಭೂಮಿ, ಸುಂದರ ಸ್ತ್ರೀಯರ ನೆಲೆವೀಡು ಎಂದು ಬಣ್ಣಿಸಿದ್ದರು. ಅವರ ಆ ಭೇಟಿಯ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿದ್ದರು. ಅದುವೇ ನೆಹರು ಮಂಟಪ.

ವೈಭವಕ್ಕೆ ಸದ್ದಿಲ್ಲದೆ ತುಕ್ಕುಹಿಡಿಯಲಾರಂಭಿಸಿತು

ವೈಭವಕ್ಕೆ ಸದ್ದಿಲ್ಲದೆ ತುಕ್ಕುಹಿಡಿಯಲಾರಂಭಿಸಿತು

ನೆಹರು ಮಂಟಪ ನಿರ್ಮಾಣವಾದ ಮೊದಲ ದಿನಗಳಲ್ಲಿ ರಾಜಾಸೀಟಿನಷ್ಟೇ ವೈಭವವನ್ನು ಸಂಪಾದಿಸಿತ್ತು. ಆದರೆ ನೆಹರು ಮಂಟಪದ ವೈಭವಕ್ಕೆ ಸದ್ದಿಲ್ಲದೆ ತುಕ್ಕುಹಿಡಿಯಲಾರಂಭಿಸಿತು. ನಾಗರಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಹೀಗಾಗಿ ಪ್ರಶಾಂತವಾಗಿದ್ದ ಗುಡ್ಡಗಳ ಮೇಲೆ ಮನೆಗಳು ತಲೆ ಎತ್ತಲಾರಂಭಿಸಿದವು.

ನೆಹರು ಮಂಟಪಕ್ಕೆ ಈಗ ಬಂತು ಜೀವಕಳೆ

ನೆಹರು ಮಂಟಪಕ್ಕೆ ಈಗ ಬಂತು ಜೀವಕಳೆ

ಸಾಲದೆಂಬಂತೆ ಅರಣ್ಯ ಇಲಾಖೆ ಮಂಟಪದ ಸುತ್ತಲೂ ಗಿಡಗಳನ್ನು ನೆಟ್ಟಿತು. ಅವು ಬೆಳೆದು ಹೆಮ್ಮರವಾಗುತ್ತಿದ್ದಂತೆಯೇ ಆಕಾಶವಾಣಿ ಕಟ್ಟಡ ಇಲ್ಲಿ ನಿರ್ಮಾಣವಾಯಿತು. ಪರಿಣಾಮ ನೆಹರು ಮಂಟಪ ಸದ್ದಿಲ್ಲದೆ ಸರಿದು ಹೋಯಿತು. ಸುಂದರ ಮಂಟಪ ಸುಣ್ಣಬಣ್ಣ ಕಾಣದ ಗೋಡೆಗಳು, ಕಿತ್ತು ಹೋದ ಕಲ್ಲಿನ ಮೆಟ್ಟಿಲುಗಳು, ಅಲ್ಲದೆ ಸುತ್ತಲೂ ಕಾಡು ಬೆಳೆದು ಪಾಳು ಮಂಟಪವಾಗುವುದರೊಂದಿಗೆ ಅನೈತಿಕ ಚಟುವಟಿಕೆಗೆ ಆಶ್ರಯ ತಾಣವಾಯಿತು. ಇದೀಗ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಹಾಗೂ ಪ್ರವಾಸೋದ್ಯಮ ಇಲಾಖೆ ನೆಹರು ಮಂಟಪಕ್ಕೆ ಕಾಯಕಲ್ಪ ನೀಡಿದ್ದು, ಇದರಿಂದ ಜೀವಕಳೆ ತುಂಬುವಂತಾಗಿದೆಯಲ್ಲದೆ, ಮುಂದಿನ ದಿನಗಳಲ್ಲಿ ಪ್ರವಾಸಿಗರು ಇತ್ತ ಸುಳಿಯಲು ದಾರಿ ಮಾಡಿಕೊಟ್ಟಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+