ಶ್ರಮದಾನ ಮಾಡುವ ಮೂಲಕ ಗಮನಸೆಳೆದ ಮಡಿಕೇರಿ ಪೊಲೀಸರು
ಮಡಿಕೇರಿ, ಅಕ್ಟೋಬರ್.01: ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ಕೇಂದ್ರ ಸ್ಥಾನವಾಗಿದ್ದ ಮಡಿಕೇರಿ ಕೋಟೆಯಲ್ಲಿ ಶನಿವಾರ ಮಡಿಕೇರಿ ಡಿವೈಎಸ್ಪಿ ಕೆ.ಎಸ್. ಸುಂದರ್ರಾಜ್ ನೇತೃತ್ವದಲ್ಲಿ ಪೊಲೀಸರು ಶ್ರಮದಾನ ಮಾಡುವ ಮೂಲಕ ಗಮನಸೆಳೆದರು.
ಲಾಠಿ, ಬಂದೂಕು ಹಿಡಿದು ಓಡಾಡುತ್ತಿದ್ದವರು ಕತ್ತಿ, ದೊಣ್ಣೆ ಹಿಡಿದು ಗಿಡಗಂಟಿಗಳನ್ನು ಕಡಿದು, ಕಸವನ್ನು ತೆಗೆದು ಕೆಲಸ ಮಾಡಿದರು. ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್, ಇಬ್ಬರು ಸಬ್ ಇನ್ಸ್ ಪೆಕ್ಟರ್, ಮಹಿಳಾ ಪೇದೆಗಳು ಸೇರಿದ್ದಂತೆ 45 ಕ್ಕೂ ಹೆಚ್ಚು ಪೊಲೀಸರು ಬೆಳಗ್ಗೆ 7 ಗಂಟೆಯಿಂದಲೇ ಕೆಲಸ ಆರಂಭಿಸಿದರು.
ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್ಗೆ ನೀವೂ ಹೆಜ್ಜೆ ಹಾಕಿ
ಜಿಲ್ಲಾ ಸಶಸ್ತ್ರ ಮೀಸಲು ತುಕಡಿಯ ಒಂದು ವ್ಯಾನ್, ಏಳೆಂಟು ಜೀಪು, ಐದಾರು ಬೈಕ್ ನಲ್ಲಿ ಆಗಮಿಸಿದ ಪೊಲೀಸರು, ನ್ಯಾಯಾಲಯ ಕಟ್ಟಡ ಹಿಂಭಾಗದಲ್ಲಿ ಕಾರ್ಯೋನ್ಮುಖರಾದರು. ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಅಂಗವಾಗಿ ಗ್ರೀನ್ ಸಿಟಿ ಫೋರಂ ಹಮ್ಮಿಕೊಂಡಿರುವ ಮಡಿಕೇರಿ ಕೋಟೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರಮದಾನ ಮಾಡಿದ್ದು ವಿಶೇಷವಾಗಿತ್ತು.
ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಭಾಗವಹಿಸಿದ್ದು ಆ ವೇಳೆ ಘೋಷಿಸಿದ್ದಂತೆ 45 ಪೊಲೀಸರನ್ನು ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ನ್ಯಾಯಾಲಯ ಕಟ್ಟಡದ ಹಿಂಭಾಗದಲ್ಲಿ ಬೆಳೆದಿದ್ದ ಕಾಡನ್ನು ಪೊಲೀಸರು ಶರವೇಗದಲ್ಲಿ ಕಡಿದು ಮುಗಿಸಿದ್ದು ಇವರಲ್ಲಿ ಮಹಿಳಾ ಸಿಬ್ಬಂದಿ ಇದ್ದದ್ದು ವಿಶೇಷವಾಗಿತ್ತು.
ಮಡಿಕೇರಿ ಕೋಟೆಯ ಸ್ವಚ್ಛತೆಗಾಗಿ ಅಭಿಯಾನ ಶುರು
ಶ್ರಮದಾನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಐ.ಪಿ. ಮೇದಪ್ಪ (ಮಡಿಕೇರಿ ನಗರ), ಪ್ರದೀಪ್ಕುಮಾರ್ (ಮಡಿಕೇರಿ ಗ್ರಾಮಾಂತರ), ಸಬ್ ಇನ್ಸ್ ಪೆಕ್ಟರ್ ಗಳಾದ ಚೇತನ್ (ಮಡಿಕೇರಿ ಗ್ರಾಮಾಂತರ), ಅಚ್ಚಮ್ಮ (ಮಡಿಕೇರಿ ಮಹಿಳಾ ಠಾಣೆ) ಪಾಲ್ಗೊಂಡಿದ್ದರು.
ಮಡಿಕೇರಿ ನಗರ, ಮಡಿಕೇರಿ ಗ್ರಾಮಾಂತರ, ಮಡಿಕೇರಿ ಸಂಚಾರ, ಮಡಿಕೇರಿ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್ಐ, ಮುಖ್ಯಪೇದೆ, ಪೇದೆಗಳು ಅತೀ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ಗರ್ವಾಲೆ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಯೋಧ ತಂಬುಕುತ್ತೀರ ಸೋಮಯ್ಯ ಅತ್ಯಂತ ರಭಸದಲ್ಲಿ ಕಾಡು ಕಡಿಯುವುದರ ಮೂಲಕ ಗಮನ ಸೆಳೆದರು.
ಇನ್ಮುಂದೆ ಅಬ್ಬಿಫಾಲ್ಸ್ ಗೆ ಲಘು ವಾಹನಗಳಲ್ಲಿ ತೆರಳಬಹುದು
ಇನ್ನು ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ವ್ಯಾಂಡಮ್ ದಾಮೋದರ್ ನೇತೃತ್ವದಲ್ಲಿ ಲಯನ್ಸ್ ಸಂಸ್ಥೆ ಸದಸ್ಯರಾದ ಸೋಮಣ್ಣ, ಅನಿತಾ ಸೋಮಣ್ಣ, ನಂಜಪ್ಪ, ಜೆ.ವಿ. ಕೋಠಿ, ಮಧುಕರ್ ಶ್ರಮದಾನದಲ್ಲಿದ್ದರು.
ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ
ಇವರಲ್ಲದೆ, ಉಪನ್ಯಾಸಕ ಸಿದ್ದರಾಜು ಎಂಬುವರ ಕತ್ತಿ ಸಹಿತ ಆಗಮಿಸಿ ಶ್ರಮದಾನ ಮಾಡಿದರೆ, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಮೂರ್ತಿ, ನಿರ್ದೇಶಕರಾದ ಮೋಂತಿ ಗಣೇಶ್, ಕುಕ್ಕೇರ ಜಯ ಚಿಣ್ಣಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಪೂಳಕಂಡ ರಾಜೇಶ್ ಮೊದಲಾದವರಿದ್ದರು.