ಮಡಿಕೇರಿ: ಹನಿಟ್ರ್ಯಾಪ್ ಜಾಲ ಪತ್ತೆ, 6 ಮಂದಿ ಬಂಧನ
ಮಡಿಕೇರಿ, ಸೆಪ್ಟೆಂಬರ್ 28: ಮಧ್ಯಪ್ರದೇಶದಲ್ಲಿ ಬೃಹತ್ ಹನಿಟ್ರ್ಯಾಪ್ ಪ್ರಕರಣ ಬಯಲಿಗೆ ಬಿದ್ದ ಬೆನ್ನಲ್ಲೆ ರಾಜ್ಯದಲ್ಲೂ ಹನಿಟ್ರ್ಯಾಪ್ ಜಾಲವೊಂದು ಪತ್ತೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಈ ಹನಿಟ್ರ್ಯಾಪ್ ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸಿದ್ದಾರೆ.
ಪ್ರಕರಣದ ಸೂತ್ರಧಾರ ಎನಿಸಿದ್ದ ಕರೀಂಖಾನ್ ಅನ್ನು ಬಂಧಿಸಲು ಯತ್ನಿಸಿದ್ದಾಗ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಆತನ ಶೋಧ ಕಾರ್ಯವನ್ನು ಕೊಡಗು ಪೊಲೀಸರು ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಮೊಹಮ್ಮದ್ ಅಜರುದ್ದೀನ್ (24), ಕತಾರ್ನಲ್ಲಿ ಕಾರು ಚಾಲಕನಾಗಿದ್ದ ಅಬೂಬಕ್ಕರ್ ಸಿದ್ದಿಕ್ (33), ಹಸೈನಾರ್ (27), ಇರ್ಷಾದ್ ಅಲಿ (27), ಎ.ಎ.ಸಮೀರ್ (28) ಬಂಧಿತರು. ಎಲ್ಲರೂ ಮಡಿಕೇರಿ ತಾಲ್ಲೂಕಿನ ಎಮ್ಮೆ ಮಾಡು ಗ್ರಾಮದವರೇ ಆಗಿದ್ದಾರೆ.
ಕೃತ್ಯದಲ್ಲಿ ಕುಶಾಲನಗರದ ಕೂಡಿಗೆಯ ಭುವನಗಿರಿ ಯ ವಿದ್ಯಾರ್ಥಿನಿಯೊಬ್ಬಳು ಭಾಗಿಯಾಗಿದ್ದು, ಈಕೆ ಮಡಿಕೇರಿಯ ಮಹಿಳಾ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಎಮ್ಮೆಮಾಡು ಗ್ರಾಮದ ಗಫೂರ್ ಎಂಬುವರು ದುಬೈನಿಂದ ವಾಪಸ್ ಆಗಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಕೈಹಾಕಿದ್ದರು. ಅವರಿಗೆ ಮನೆ ನಿರ್ಮಾಣ ವಸ್ತುಗಳನ್ನು ಕೊಡಿಸಲೆಂದು ಮೈಸೂರಿಗೆ ಕರೆದುಕೊಂಡು ಹೋದ ಆರೋಪಿಗಳಾದ ರಿಯಲ್ ಎಸ್ಟೇಟ್ ಉದ್ಯಮಿ ಮೊಹಮ್ಮದ್ ಅಜರುದ್ದೀನ್ ಮತ್ತು ಕರೀಂ ಮಾರ್ಗಮಧ್ಯದಲ್ಲಿಯೇ ಯುವತಿಯನ್ನು ಕಾರಿಗೆ ಹತ್ತಿಸಿಕೊಂಡು, ಗಫೂರ್ ಹಾಗೂ ಯುವತಿಯನ್ನು ಹೋಮ್ ಸ್ಟೇ ಒಂದಕ್ಕೆ ಕಳುಹಿಸಿದ್ದರು.
ಗಫೂರ್ ಮತ್ತು ಯುವತಿ ರೂಂ ನಲ್ಲಿದ್ದಾಗ ರೂಮಿಗೆ ಬಂದ ಇತರ ಆರೋಪಿಗಳು ತಾವು ಪತ್ರಕರ್ತರೆಂದು ಹೇಳಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಐವತ್ತು ಲಕ್ಷ ಹಣ ನೀಡದೇ ಇದ್ದರೆ ವಿಡಿಯೋವನ್ನು ಟಿವಿಗಳಲ್ಲಿ ಪ್ರಸಾರ ಮಾಡುವುದಾಗಿ ಹೆದರಿಸಿದ್ದಾರೆ.
ಗಫೂರ್ ಬಳಿ ಇದ್ದ 60 ಸಾವಿರ ನಗದು, 55 ಸಾವಿರ ವಿದೇಶಿ ಕರೆನ್ಸಿ ಕಿತ್ತುಕೊಂಡಿದ್ದಾರೆ. ಜೊತೆಗೆ 3.80 ಲಕ್ಷ ಹಣವನ್ನು ಗಫೂರ್ನಿಂದ ಪಡೆದುಕೊಂಡು ಹೋಗಿದ್ದರು. ಇದರ ಸಂಬಂಧ ಗಫೂರ್ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.












Click it and Unblock the Notifications