ಮಡಿಕೇರಿ ಕೋಟೆಯ ಸ್ವಚ್ಛತೆಗಾಗಿ ಅಭಿಯಾನ ಶುರು
ಮಡಿಕೇರಿ, ಸೆಪ್ಟೆಂಬರ್.21: ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ ಪ್ರಯುಕ್ತ ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ಪಾರಂಪರಿಕ ಕಟ್ಟಡ ಮಡಿಕೇರಿ ಕೋಟೆ ಆವರಣ ಸ್ವಚ್ಛಗೊಳಿಸುವ ಅಭಿಯಾನವನ್ನು ಆರಂಭಿಸಲಾಗಿದೆ.
ಇದೀಗ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ನೇತೃತ್ವದಲ್ಲಿ ಫೋರಂ ಸದಸ್ಯರು ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸುವ ಕೆಲಸ ಪ್ರಾರಂಭಿಸಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಸಹಕಾರದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ. ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸಂಘ, ಸಂಸ್ಥೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯತೆ ಇದೆ.

ಆ ಮೂಲಕ ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಮನವಿ ಮಾಡಿದ್ದಾರೆ. ಗ್ರೀನ್ ಸಿಟಿ ಫೋರಂ ಐತಿಹಾಸಿಕ ಮಡಿಕೇರಿ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡಿರುವುದು ಸಮಾಜಕ್ಕೆ ಮಾದರಿ ಕಾರ್ಯ.
ಈ ಕೆಲಸಕ್ಕೆ ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ. ಅಗತ್ಯ ಸಿಬ್ಬಂದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗುವುದು ಮತ್ತು ಅಗತ್ಯವಾದ ಯಂತ್ರೋಪಕರಣ ನೀಡಲಾಗುವುದೆಂದು ಸ್ಥಳಕ್ಕೆ ಆಗಮಿಸಿದ್ದ ಪೌರಾಯುಕ್ತ ರಮೇಶ್ ಭರವಸೆ ನೀಡಿದರು.

ಮಡಿಕೇರಿ ಕೋಟೆ ಸುತ್ತ ಗಿಡಗಂಟಿ ಕಡಿಯುವುದರ ಮೂಲಕ ಕೋಟೆ ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ. ಈ ಕೆಲಸ ಕ್ಕೆ ಗ್ರೀನ್ ಸಿಟಿ ಫೋರಂ ಮುಂದಾಗಿರುವುದು ಸ್ವಾಗತಾರ್ಹ. ಪ್ರವಾಸೋದ್ಯಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಹೇಳಿದ್ದಾರೆ.
ಭಾನುವಾರ (ಸೆ.23) ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನೇತೃತ್ವದಲ್ಲಿ ಅಧಿಕಾರಿಗಳು, ಸರ್ಕಾರಿ ನೌಕರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಶನಿವಾರ (ಸೆ.22) ಮೈಸೂರು, ಬೆಂಗಳೂರಿನಿಂದ ಕೊಡಗು ಮೂಲದ ಉತ್ಸಾಹಿ ತರುಣರು ಪಾಲ್ಗೊಳ್ಳಲಿದ್ದಾರೆಂದು ಫೋರಂ ನಿರ್ದೇಶಕಿ ಕನ್ನಂಡ ಕವಿತಾ ಬೊಳ್ಳಪ್ಪ ಹೇಳಿದ್ದಾರೆ.












Click it and Unblock the Notifications