KSRTC ಬಸ್ಸುಗಳ ಡಿಕ್ಕಿ: ಚಾಲಕರಿಬ್ಬರು ಸ್ಥಳದಲ್ಲೇ ಸಾವು
ಮಡಿಕೇರಿ, ಫೆಬ್ರವರಿ 08 : ವೇಗವಾಗಿ ವಿರುದ್ಧ ದಿಕ್ಕುಗಳಿಂದ ಬಂದ ಕೆಎಸ್ ಆರ್ಟಿಸಿ ಬಸ್ಸುಗಳು ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 275ರ ಸುಂಟಿಕೊಪ್ಪ ಸಮೀಪದ ಶಾಂತಗಿರಿ ಎಸ್ಟೇಟ್ ಬಳಿ ನಡೆದಿದೆ.
ಸಾರಿಗೆ ಬಸ್ ಚಾಲಕರಾದ ಷರೀಪ್ ಮತ್ತು ಪಾಲಾಕ್ಷ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಉಳಿದಂತೆ ಗಾಯಗೊಂಡಿದ್ದ ಪ್ರಯಾಣಿಕರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ವಿಭಾಗದ ಮಡಿಕೇರಿ ಡಿಪೋಗೆ ಸೇರಿದ (ಕೆಎ-19 ಈ-3240) ಬಸ್ ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ಹುಣಸೂರು ಡಿಪೋಗೆ ಸೇರಿದ (ಕೆಎ-09-ಈ-4989) ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು, ಘಟನೆಗೆ ಮಡಿಕೇರಿ ಡಿಪೋದ ಬಸ್ ಚಾಲಕ ಪಾಲಾಕ್ಷನೇ ಕಾರಣ ಎನ್ನಲಾಗುತ್ತಿದೆ.
ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಬಸ್ಸು ಹಾಗೂ ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದ ಬಸ್ಸುಗಳ ನಡುವೆ ಅವಘಡ ಸಂಭವಿಸಿದೆ. ಗುರುವಾರ ಬೆಳಿಗ್ಗೆ 11.30ರ ಸಮಯದಲ್ಲಿ ಸುಂಟಿಕೊಪ್ಪ ಬಳಿಯ ಶಾಂತಗಿರಿ ಎಸ್ಟೇಟ್ ಬಳಿ ಮಡಿಕೇರಿಯಿಂದ ಕುಶಾಲನಗರ ಮೂಲಕ ಹಾಸನಕ್ಕೆ ತೆರಳುತ್ತಿದ್ದ ಬಸ್ನ್ನು ಚಾಲಕ ಪಾಲಾಕ್ಷ ಚಾಲಿಸುತ್ತಿದ್ದ ಎನ್ನಲಾಗಿದ್ದು, ಈತನ ಅಜಾಗರೂಕತೆಯ ಚಾಲನೆಯಿಂದಾಗಿ ಮೈಸೂರು ಕಡೆಯಿಂದ ಬರುತ್ತಿದ್ದ ಮೈಸೂರು ಡಿಪೋಗೆ ಸೇರಿದ ಬಸ್ ಚಾಲಕ ಮೊಹಿದ್ದೀನ್ ಷರೀಫ್ ಚಾಲಿಸುತ್ತಿದ್ದ ಬಸ್ ಗೆ ಮುಖಾಮುಖಿ ಡಿಕ್ಕಿಹೊಡೆದಿದೆ.

ಪರಿಣಾಮ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸುಂಟಿಕೊಪ್ಪ ಪೊಲೀಸರು ಮತ್ತು ಗ್ರಾಮಸ್ಥರು ಗಾಯಾಳುಗಳನ್ನು ಬಸ್ಗಳಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಮಹಿಳೆಯೊಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮಡಿಕೇರಿಯಿಂದ ಕುಶಾಲನಗರದವರೆಗಿನ ರಸ್ತೆ ತಿರುವುಗಳಿಂದ ಕೂಡಿದ್ದಲ್ಲದೆ, ಚಾರ್ಮಾಡಿ ಘಾಟ್ ರಸ್ತೆ ಮುಚ್ಚಿರುವ ಕಾರಣ ಮಂಗಳೂರಿನಿಂದ ಮೈಸೂರು ಬೆಂಗಳೂರು ಕಡೆಗೆ ತೆರಳುವ ಹೆಚ್ಚಿನ ವಾಹನಗಳು ಇದೇ ರಸ್ತೆಯಲ್ಲಿ ತೆರಳುತ್ತಿವೆ. ಹೀಗಾಗಿ ಇಲ್ಲಿ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಸಂಭವಿಸುವುದು ಖಚಿತವಾಗಿದೆ. ಈ ರಸ್ತೆಯಲ್ಲಿ ಮೇಲಿಂದ ಮೇಲೆ ಅವಘಡಗಳು ನಡೆಯುತ್ತಿದ್ದರೂ ಚಾಲಕರು ಎಚ್ಚೆತ್ತುಕೊಳ್ಳದೆ ವೇಗವಾಗಿ ಚಲಿಸುವುದೇ ಅವಘಡಗಳು ನಡೆಯಲು ಕಾರಣವಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications