ಮಡಿಕೇರಿ; ಮೋಜಿನ ಪ್ರವಾಸಕ್ಕೆ ಬಂದವರು ಪೊಲೀಸರ ವಶಕ್ಕೆ
ಮಡಿಕೇರಿ, ಜುಲೈ 04; ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿಯ ಕೆ. ಕೆ. ಆರ್ ಟಿ. ಎಸ್ಟೇಟ್ ವೀಕ್ಷಿಸಲು ಮೈಸೂರಿನಿಂದ ಬಂದಿದ್ದ ಪ್ರವಾಸಿಗರನ್ನು ಶನಿವಾರ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಡಗಿನ ಗಡಿ ಆನೆ ಚೌಕೂರು ಚೆಕ್ಪೋಸ್ಟ್ನಲ್ಲಿ ಕೈಗಳಿಗೆ ಸೀಲ್ ಹಾಕಿದ್ದರೂ, ಸೀಲ್ ಅನ್ನೂ ಲೆಕ್ಕಿಸದೆ ಗೃಹ ಬಂಧನದಲ್ಲಿ ಇರದೇ ದಕ್ಷಿಣ ಕೊಡಗಿನ ಪ್ರವಾಸಿ ತಾಣಗಳಿಗೆ ಓಡಾಡುತ್ತಾ ಮೋಜು ಮಾಡುತ್ತಿದ್ದ ಯುವಕರು ಕಾರಿನ ಹಿಂಭಾಗದಲ್ಲಿ ಎರಡು ಸೈಕಲ್ಗಳನ್ನು ನೇತು ಹಾಕಿಕೊಂಡು ಅಡ್ದಾಡುತ್ತಿದ್ದರು.
ಟೀ ಎಸ್ಟೇಟ್ ಬಳಿ ಸೆಲ್ಫೀ ತೆಗೆದು ಕೊಳ್ಳುತ್ತಿದ್ದಾಗ ಇವರನ್ನು ವೀಕ್ಷಿಸಿದ ಸ್ಥಳೀಯರು, ಇವರ ಕೈಗಳಿಗೆ ಹಾಕಿದ್ದ ಸೀಲನ್ನು ಗಮನಿಸಿದರು. ತರಾಟೆಗೆ ತೆಗೆದುಕೊಂಡರು, ನಂತರ ಶ್ರೀಮಂಗಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇನ್ನೂ ಕೂಡ ಕೊಡಗಿನಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗಿಲ್ಲ. ಆದರೂ ಕೂಡ ಯಾವುದೇ ನಿರ್ಬಂಧವಿಲ್ಲದೆ ಪ್ರವಾಸಿಗರು ಕೊಡಗಿಗೆ ಬರುತ್ತಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊಡಗಿನ ಗಡಿ ಭಾಗದಲ್ಲಿ ಕೊಡಗಿಗೆ ಬರುವ ಹೊರ ಜಿಲ್ಲೆಯವರನ್ನು ತಪಾಸಣೆ ಮಾಡುತ್ತಿಲ್ಲವೇ? ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ.
ಸ್ಥಳೀಯರು ಸಂತೆಗೆ ಹೋಗುವಾಗ ತಡೆದು ವಿಚಾರಣೆ ನಡೆಸುವ ಅಧಿಕಾರಿಗಳು ಪ್ರವಾಸಿಗರನ್ನು ಮಾತ್ರ ಯಾಕೆ ವಿಚಾರಿಸುತ್ತಿಲ್ಲ ಎಂಬುದು ಯಕ್ಷಪ್ರಶ್ನೆ ಯಾಗಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಥಳೀಯರಾದ ಮಿದೇರೀರ ಸಂತೋಷ್, ಮಿದೇರೀರ ಜೀತು, ಕಟ್ಟೇರ ಚೋಟು, ಚಟ್ಟಂಗಡ ಮಂದಣ್ಣ, ಮಲ್ಲೇಂಗಡ ಶಮಿ ಪ್ರವಾಸಕ್ಕೆ ಬಂದಿದ್ದ ಯುವಕರನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವಾಸಿಗರ ತಡೆಗೆ ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆನೆ ಚೌಕೂರ್ ಗೇಟ್ ಸಂಪೂರ್ಣ ಬಿಗಿ ಮಾಡಲಾಗಿದೆ ಹಾಗೂ ಇನ್ನೂ ಬಿಗಿ ಮಾಡುವ ಭರವಸೆಯನ್ನು ನೀಡಿದ್ದಾರೆ. ಹಾಗೇ ಕೇರಳದ ಕೆಲವೊಂದು ವಾಹನಗಳಿಗೆ ನೇರವಾಗಿ ಹೋಗಲು ಅನುಮತಿ ಇದ್ದು ಅದನ್ನು ಚೆಕ್ ಮಾಡಿ ಬಿಡುವುದಾಗಿ ತಿಳಿಸಿದ್ದರು. ಕೇರಳ ವಾಹನ ನೇರವಾಗಿ ಕೇರಳಕ್ಕೆ ಹೋಗದೆ ಅಡ್ಡಾಡುತ್ತಿದ್ದರೆ ಅವರ ಮೇಲೆ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.












Click it and Unblock the Notifications