ಗುಂಡು ಹಾರಿಸಿಕೊಂಡು ಕೊಡಗು ಪ್ರಗತಿಪರ ಸಂಘದ ಅಧ್ಯಕ್ಷ ಆತ್ಮಹತ್ಯೆ
ಕೊತ್ತೋಳಿ ಅಪ್ಪಯ್ಯ ಮೇಲೆ ಜಾಗ ಅತಿಕ್ರಮಣ ಆರೋಪಗಳಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಕ್ರಮ, ಹತಾಶೆಯಿಂದ ಆತ್ಮಹತ್ಯೆಗೆ ಶರಣಾದ ಜನನಾಯಕ.
ಮಡಿಕೇರಿ: ವ್ಯಕ್ತಿಯೊಬ್ಬ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಎದೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯ ಚಾಮುಂಡೇಶ್ವರಿನಗರದಲ್ಲಿ ನಡೆದಿದೆ.
ಕೊಡಗು ಪ್ರಗತಿಪರ ಸಂಘದ ಅಧ್ಯಕ್ಷ ಕೊತ್ತೋಳಿ ಅಪ್ಪಯ್ಯ (47) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮಂಗಳವಾರ ಸಂಜೆ 6.30ರ ಸಮಯದಲ್ಲಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಪ್ಪಯ್ಯ ಅವರು ಮೂಲತಃ ಮಡಿಕೇರಿ ತಾಲೂಕಿನ ಕಾರುಗುಂದ ನಿವಾಸಿಯಾಗಿದ್ದು, ಮಡಿಕೇರಿಯ ಚಾಮುಂಡೇಶ್ವರಿನಗರದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಜಾಗ ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿ ವಾಸ ಮಾಡುತ್ತಿದ್ದರು.
ಇದು ಅತಿಕ್ರಮಣದ ಜಾಗವಾಗಿದ್ದರಿಂದ ಸಾರ್ವಜನಿಕರು ದೂರು ನೀಡಿದ್ದರಿಂದ ಕಂದಾಯ ಇಲಾಖೆಯವರು ಅವರ ಮನೆಯನ್ನು ತೆರವುಗೊಳಿಸಿತ್ತು. ಇದರಿಂದ ಜರ್ಜರಿತರಾದ ಅವರು ಅಲ್ಲಿಯೇ ಶೆಡ್ ಹಾಕಿಕೊಂಡು ವಾಸ್ತವ್ಯ ಮುಂದುವರೆಸಿದ್ದರು. ತಾನೊಬ್ಬ ಕೊಡಗು ಪ್ರಗತಿಪರ ಸಂಘದ ಅಧ್ಯಕ್ಷನಾಗಿದ್ದರಲ್ಲದೆ, ಮಾಜಿ ಸೈನಿಕರಿಗೆ ನಿವೇಶನ ಒದಗಿಸುವ ಸಲುವಾಗಿ ಹೋರಾಟವನ್ನು ನಡೆಸಿದ್ದರು. ಆದರೆ ಕಂದಾಯ ಇಲಾಖೆಯೇ ಮನೆಯನ್ನು ತೆರವುಗೊಳಿಸಿದ ಘಟನೆ ಅವರ ಮೇಲೆ ಪರಿಣಾಮ ಬೀರಿದ್ದು, ಮಾನಸಿಕವಾಗಿ ಜರ್ಜರಿತಗೊಂಡಿದ್ದರು ಎನ್ನಲಾಗಿದೆ.
ಮಂಗಳವಾರ ಪತ್ನಿ ಸ್ವಗ್ರಾಮ ಕಾರುಗುಂದಕ್ಕೆ ತೆರಳಿದ್ದು, ಪುತ್ರ ಮನೆಯಿಂದ ಹೊರ ಹೋಗಿದ್ದನು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅವರು ವಾಸವಿದ್ದ ಶೆಡ್ನಲ್ಲೇ ಸಂಜೆ 6.30ರ ವೇಳೆಗೆ ಕೋವಿಯಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡಿನ ಶಬ್ದ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನಗರಠಾಣೆ ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.