ಆನೆ ದಾಳಿಗೆ ವ್ಯಕ್ತಿ ಮೃತ, ಅರಣ್ಯಾಧಿಕಾರಿಗಳ ಮೇಲೆ ಕೇಸು!
ಕೊಡಗು, ಜನವರಿ 25: ಕಾಡಾನೆಯೊಂದು ಕಾಫಿ ಪ್ಲಾಂಟರ್ ಒಬ್ಬನ ಮೇಲೆ ದಾಳಿ ಮಾಡಿ ಕೊಂದಿದ್ದಕ್ಕೆ ಪೊಲೀಸರು ಸ್ಥಳೀಯ ಅರಣ್ಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಪ್ಲಾಂಟರ್ ಕಾಡಾನೆ ದಾಳಿಗೆ ತುತ್ತಾಗಿದ್ದಾನೆ ಎಂಬುದು ಪೊಲೀಸರ ವಾದ ಹಾಗಾಗಿ ಸ್ಥಳೀಯ ಅರಣ್ಯ ಅಧಿಕಾರಿಗಳ ಮೇಲೆ ಐಪಿಸಿ ಸೆಕ್ಷನ್ 304-A ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಈ ರೀತಿ ಪ್ರಕರಣ ದಾಖಲಿಸಿರುವುದು ರಾಜ್ಯದ ಮಟ್ಟಿಗೆ ಇದೇ ಮೊದಲಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಎಂಬುವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಡಾನೆ ದಾಳಿ ಮಾಡಿದ್ದಕ್ಕೆ ಅರಣ್ಯಾಧಿಕಾರಿಯನ್ನು ಹೊಣೆ ಮಾಡಿ ಕೇಸು ದಾಖಲಿಸಿ ಪೊಲೀಸರು ಇತಿಹಾಸ ಸೃಷ್ಠಿಸಿದ್ದಾರೆ. ಹಾಗಾದರೆ ಇನ್ನು ಮುಂದೆ ಎಲ್ಲೇ ಕೊಲೆ, ಅತ್ಯಾಚಾರ, ಕಳ್ಳತನಗಳಾದರೆ ಸ್ಥಳೀಯ ಪೊಲೀಸರ ವಿರುದ್ಧ ಕೇಸು ದಾಖಲಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ದೀಪಿಕಾ ಅವರ ಟ್ವೀಟ್ಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಸಣ್ಣ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಈ ರೀತಿಯ ವನ್ಯಜೀವಿ-ಮಾನವ ಸಂಘರ್ಷಕ್ಕೆ ಮುಖ್ಯ ಕಾರಣ ಕಾಡಿನ ವಿಘಟನೆ, ಮನುಷ್ಯನ ಅತಿಕ್ರಮಣ, ಕೊಡಗಿನ ಆನೆ ದಾಳಿ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳದ್ದು ಮಾತ್ರವೇ ತಪ್ಪಿಲ್ಲ ರಾಜಕೀಯ, ಜಾಗತೀಕರಣ, ಮಾನವನ ಅತಿಯಾಸೆ, ಮನುಷ್ಯನ ವಿಸ್ತರಣಾ ಮನೋಭಾವ, ಜನಸಂಖ್ಯೆ ಹೆಚ್ಚಳ, ಎಲ್ಲದರದ್ದೂ ತಪ್ಪು ಎಂದು ಒಬ್ಬರು ಟ್ವೀಟ್ ಮಾಡಿ ಒಟ್ಟಾರೆ ಕಾಡಿನ ಬದಲಾದ ಪರಿಸ್ಥಿತಿ ಮತ್ತು ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಅರಣ್ಯಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಬೆಂಬಲ ಸೂಚಿಸಿರುವ ಒಬ್ಬರು ಆನೆಗಳ ಹಿಂಡೊಂದು ಕಾಫಿ ತೋಟಕ್ಕೆ ನುಗ್ಗಿರುವ ವಿಡಿಯೋ ಹಾಕಿ, ಇದಕ್ಕೆಲ್ಲಾ ಯಾರು ನಷ್ಟ ತುಂಬಿಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅವರದೇ ಮತ್ತೊಂದು ಟ್ವೀಟ್ನಲ್ಲಿ, ಆನೆ ಕಾರಿಡಾರ್ ಮಾಡಿ ಅದನ್ನು ಸರಿಯಾಗಿ ಜಾರಿ ತರದ ಕಾರಣ ಈ ರೀತಿಯ ಘಟನೆಗಳಾಗುತ್ತಿವೆ, ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಹೇಳಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದಿಂದ ಸಾಯುವರ ಸಂಖ್ಯೆ ಹೆಚ್ಚಾಗುತ್ತಿದೆ, ಅರಣ್ಯ ಇಲಾಖೆ ಅಧಿಕಾರಿಗಳು ಕಂದಗಳ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ, ಹೀಗಾಗಿ ಆನೆಗಳು ಅರಣ್ಯ ಬಿಟ್ಟು ನುಗ್ಗುತ್ತಿವೆ, ತೋಟದಲ್ಲಿ ಕೆಲಸ ಮಾಡಲು ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ ಮತ್ತೊಬ್ಬರು.
ಪೊಲೀಸರ ಕ್ರಮವನ್ನು ಹಾಸ್ಯಾಸ್ಪದ ಎಂದಿರುವ ಒಬ್ಬರು, ಮುಂದೆ ಮಳೆಯಿಂದ ಯಾರಾದರೂ ಸತ್ತರೆ ಹವಾಮಾನ ಇಲಾಖೆಯ ಮೇಲೆ ಕೇಸು ದಾಖಲಿಸುತ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications