ಕೊಡಗು: ಸಾಲ ಮರುಪಾವತಿಸದ್ದಕ್ಕೆ ನಾಯಿ ಕೈಲಿ ಕಚ್ಚಿಸಿದ ಎಸ್ಟೇಟ್ ಮಾಲಿಕ
ಮಡಿಕೇರಿ, ಸೆಪ್ಟಂಬರ್ 3: ಪಡೆದ ಸಾಲ ಮರುಪಾವತಿಸಿದ್ದಕ್ಕೆ ಎಸ್ಟೇಟ್ ಮಾಲಿಕನೊಬ್ಬ ಕೂಲಿ ಕಾರ್ಮಿಕನನ್ನು ಗೋದಾಮಿನಲ್ಲಿ ಕೂಡಿ ಹಾಕಿ ನಾಯಿಗಳಿಂದ ಕಚ್ಚಿಸಿದ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಾಳೆಲೆ ವ್ಯಾಪ್ತಿಯ ನೆಲ್ಲಿಕುಂಡಿ ಎಂಬಲ್ಲಿ ನಡೆದಿದೆ.
ಬಾಳೆಲೆ ಗ್ರಾಮದ ಕಾಫಿ ತೋಟದ ಮಾಲಿಕ ಹಾಗೂ ಕಾಫಿ ಮೆಣಸು ವ್ಯಾಪಾರಿಯೂ ಆದ ಕಿಶನ್ ಎಂಬುವನು ಈ ಹಿಂದೆ ಕಾರ್ಮಿಕ ಹರೀಶ್ ಎಂಬವರಿಗೆ 20 ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಸಾಲ ವಾಪಾಸ್ ಕೇಳಿದಾಗ ಮರುಪಾವತಿಗೆ ಸ್ವಲ್ಪ ದಿನ ಸಮಯ ಕೊಡುವಂತೆ ಹರೀಶ್ ಕೇಳಿಕೊಂಡಿದ್ದರು.

ಇದಕ್ಕೊಪ್ಪದ ಕಿಶನ್, ಆತನ ಗೆಳೆಯ ಮಧುವನ್ನು ಕರೆಸಿಕೊಂಡು ಆತನ ಜತೆಗೆ ಜೀಪಿನಲ್ಲಿ ಹರೀಶನನ್ನು ಕರೆದೊಯ್ದು ಬಲವಂತವಾಗಿ ತೋಟದ ಕಾಫಿ ಗೋದಾಮಿಗೆ ತಳ್ಳಿದ್ದಾರೆ. ನಂತರ ಮನೆಯ ನಾಯಿಗಳನ್ನು ಬಿಟ್ಟು ಕಚ್ಚಿಸಿ ಅಮಾನವೀಯ, ಕ್ರೂರವಾಗಿ ನಡೆದುಕೊಂಡಿದ್ದಾರೆ.
ನಾಯಿ ದಾಳಿಗೆ ಹರೀಶನ ಕಾಲು, ತಲೆ, ಬೆನ್ನು, ಕೈಗಳಿಗೆ ಗಾಯಗಳಾಗಿದ್ದು, ದುರುಳರು ಹರೀಶನನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಂತರ ಇಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು. ಇದೀಗ ಗೋಣಿಕೊಪ್ಪ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳ ರೋಗಿಯಾಗಿ ಹರೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆದು ಬಂದ ಹರೀಶ್, ನಂತರ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಫಿ ತೋಟದ ಮಾಲಿಕ ಕಿಶನ್ ಹಾಗೂ ಮಧು ಮೇಲೆ ಅಪಹರಣ ಹಾಗೂ ಜಾತಿ ನಿಂದನೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಇದೀಗ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಹಿಂದೆಯೂ ಜಿಲ್ಲೆಯಲ್ಲಿ ಇಂಥಹ ಹಲವು ಘಟನೆಗಳು ನಡೆದಿದ್ದರೂ ಸರಕಾರ ಹಾಗೂ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದೇ ಇಲ್ಲಿನ ತೋಟದ ಮಾಲಿಕರಿಗೆ ಸಲುಗೆಯಾಗಿ ಪರಿಣಮಿಸಿದ್ದು ಆಗಾಗ ಇಂಥಹ ಘಟನೆಗಳು ನಡೆಯುತ್ತಿರುತ್ತವೆ.












Click it and Unblock the Notifications