ಕೊಡಗು; ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಜೈಲು, ದಂಡ
ಮಡಿಕೇರಿ, ಆಗಸ್ಟ್ 18: ಕೊಡಗು ಜಿಲ್ಲಾ ಪೊಲೀಸರು ನಾಯಿಗಳನ್ನು ಸಾಕುವ ಮನೆಯ ಮಾಲೀಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾಕು ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸರು ಎಚ್ಚರಿಸಿದ್ದಾರೆ. ಮನೆಯಲ್ಲಿ ನಾಯಿಗಳನ್ನು ಎಚ್ಚರಿಕೆಯಿಂದ ಸಾಕದೆ ಮನೆಗೆ ಬರುವವರ ಮೇಲೆ ದಾಳಿ ನಡೆಸಿದರೆ ಮಾಲೀಕರ ವಿರುದ್ಧ ಸೆಕ್ಷನ್ 289 ಐಪಿಸಿ ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಾಕು ನಾಯಿಗಳು ಜನರ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮಾಲೀಕರಿಗೆ 6 ತಿಂಗಳು ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ಹೇಳಿದೆ.
ಪ್ರಕಟಣೆಯ ಮಾಹಿತಿ; ಕೊಡಗು ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ದಿನಾಂಕ 16/8/2023 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಣಂಜಗೇರಿ, ಪಾರಾಣೆ ಗ್ರಾಮದ ನಿವಾಸಿಯಾದ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗಾಗಿ ಕೆ. ಕೆ. ಭವ್ಯ, ಸಮುದಾಯ ಆರೋಗ್ಯ ಅಧಿಕಾರಿ ಭೇಟಿ ನೀಡಲು ತೆರಳುವ ಸಂದರ್ಭ ಮನೆಯ ಸಾಕು ನಾಯಿ ದಾಳಿ ಮಾಡಿದೆ ಎಂದು ಹೇಳಿದ್ದಾರೆ.
ನಾಯಿ ದಾಳಿ ಮಾಡಿ ಕೆ. ಕೆ. ಭವ್ಯ ಅವರ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಹಿನ್ನೆಲೆಯಲ್ಲಿ ನಾಯಿ ಮಾಲೀಕರಾದ ಬೆಳತಂಡ ಮಾಚಯ್ಯ ಅವರ ಮೇಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಮನೆಯ ಸಾಕು ನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಸಾಕು ನಾಯಿ ಮಾಲೀಕರ ಮೇಲೆ Section 289 IPC ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ 6 ತಿಂಗಳ ಜೈಲು ವಾಸ ಮತ್ತು ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ತಮ್ಮ ಮನೆಯ ಸಮೀಪ ಸಾಕು ನಾಯಿ ದಾಳಿ ಮಾಡಿರುವ ಘಟನೆಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆಎಸ್ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ನಾಯಿ ದಾಳಿಯ ಬಗ್ಗೆ ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗಾಯಗೊಂಡಿದ್ದ ಕೆ. ಕೆ. ಭವ್ಯ; ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೆ. ಕೆ. ಭವ್ಯಾ ಮೇಲೆ ಸಾಕು ನಾಯಿ ದಾಳಿ ಮಾಡಿತ್ತು. ಇತ್ತೀಚಿಗೆ ಹೆರಿಗೆ ಆಗಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು ಭವ್ಯಾ ಗ್ರಾಮದ ಮಾಚಯ್ಯ ಎಂಬುವವರ ಮನೆಗೆ ತೆರಳಿದ್ದರು.
ವಾಪಸ್ ಆಗುವಾಗ ದೊಡ್ಡದಾದ ಸಾಕು ನಾಯಿ ದಾಳಿ ಮಾಡಿತ್ತು. ನಾಯಿ ದಾಳಿ ಬಳಿಕ ಕೆಳಗೆ ಬಿದ್ದ ಭವ್ಯಾ ಅವರ ದೇಹದ ಹಲವು ಭಾಗಗಳಿಗೆ ಕಚ್ಚಿ ನಾಯಿ ಗಾಯಗೊಳಿಸಿತ್ತು. ಬಳಿಕ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.












Click it and Unblock the Notifications