ಮಡಿಕೇರಿ ಕೋಟೆ ನವೀಕರಣ; ಕಾಮಗಾರಿ ಶೀಘ್ರವಾಗಿ ಮುಗಿಸಲು ಡಿಸಿ ಸೂಚನೆ
ಮಡಿಕೇರಿ, ಆಗಸ್ಟ್ 11; ಸ್ವಾತಂತ್ರ್ಯ ದಿನಾಚರಣೆ 2023ರ ಹಿನ್ನಲೆಯಲ್ಲಿ ಮಡಿಕೇರಿ ನಗರದ ಕೋಟೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪರಿಶೀಲಿಸಿದರು. ಕರ್ನಾಟಕ ಸರ್ಕಾರ ಕೋಟೆ ಅಭಿವೃದ್ಧಿಗೆ 10.76 ಕೋಟಿ ರೂ ಬಿಡುಗಡೆ ಮಾಡಿದೆ.
ಜಿಲ್ಲಾಧಿಕಾರಿಗಳು ಡಿವೈಎಸ್ಪಿ ಜಗದೀಶ್, ಸಿಪಿಐ ಅನೂಪ್ ಮಾದಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿಯರ್ ವೈ. ಎಸ್. ಸಿದ್ದೇಗೌಡ, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಗಿರೀಶ್ ಮುಂತಾದವರ ಜೊತೆ ಕೋಟೆ ಕಾಮಗಾರಿ ವೀಕ್ಷಣೆ ಮಾಡಿದರು.

ನಗರದ ಕೋಟೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಯಾವ ಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ 2023ರ ವೇದಿಕೆ ನಿರ್ಮಾಣ ಮಾಡುವುದು?, ಧ್ವಜಾರೋಹಣ, ಪೊಲೀಸ್ ಕವಾಯತು ಮುಂತಾದ ಅಂಶಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಂಜಿನಿರ್ಗಳ ಜೊತೆ ಡಿಸಿ ಚರ್ಚಿಸಿದರು.
ಸ್ವಾತಂತ್ರ್ಯ ದಿನಾಚರಣೆ ನಡೆಯುವ ಕೋಟೆ ಆವರಣದಲ್ಲಿ ನಗರಸಭೆ ವತಿಯಿಂದ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿದೆ, ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮಾಚರಣೆಯಿಂದ ಆಚರಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
10.76 ಕೋಟಿ ರೂ. ಅನುದಾನ; ಕರ್ನಾಟಕ ಸರ್ಕಾರ ಮಡಿಕೇರಿ ನಗರದ ಕೋಟೆ ಅಭಿವೃದ್ಧಿಗೆ 10.76 ಕೋಟಿ ರೂ. ಬಿಡುಗಡೆ ಮಾಡಿದೆ. ಕೋಟೆ ನವೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪುರಾತತ್ವ ಇಲಾಖೆಯ ಬಿಪಿನ್ಚಂದ್ರ ನೇಗಿ ಮಾತನಾಡಿ, "ಛಾವಣಿ ಕೆಲಸ ಪೂರ್ಣಗೊಂಡಿದ್ದು, ಪ್ಲಾಸ್ಟಿಂಗ್ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಪಾಲಿಶ್ ಕೆಲಸ ಜೊತೆಗೆ ಸುಣ್ಣ, ಬಣ್ಣ ಕೆಲಸ ಭರದಿಂದ ಸಾಗಿದ್ದು, ಡಿಸೆಂಬರ್ ವೇಳೆಗೆ ಕೋಟೆಯ ನವೀಕರಣ ಕಾಮಗಾರಿ ಕೆಲಸ ಪೂರ್ಣಗೊಳ್ಳಲಿದೆ" ಎಂದು ಮಾಹಿತಿ ಕೊಟ್ಟರು.
ಜಿಲ್ಲಾಧಿಕಾರಿಗಳು ಕೋಟೆಯ ನೆಲ ಮಹಡಿ ಮತ್ತು ಮೊದಲ ಮಹಡಿ ಕಾಮಗಾರಿ ವೀಕ್ಷಿಸಿದರು. ಹಾಗೆಯೇ ಕೋಟೆಯ ಸುತ್ತಮುತ್ತಲಿನ ಎಲ್ಲಾ ಕಡೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಪುರಾತತ್ವ ಇಲಾಖೆಯ ಸೋಮ್ಲ ನಾಯಕ್, ಸುನಿಲ್ ಕುಮಾರ್ ಕೋಟೆ ನವೀಕರಣ ಕಾಮಗಾರಿ ಕುರಿತು ವಿವರಣೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, "ನಗರದ ಕೋಟೆಯು ಹೃದಯ ಭಾಗದಲ್ಲಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು" ಎಂದು ಹೇಳಿದರು.
ಆಗಸ್ಟ್ 15ರ ಮಂಗಳವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಮಡಿಕೇರಿ ನಗರದ ಕೋಟೆ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಜೊತೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಹೈಕೋರ್ಟ್ಗೆ ಸಹ ಅರ್ಜಿ; ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಮಡಿಕೇರಿ ನಗರದ ಕೋಟೆ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮಳೆ ನೀರು ಸೋರಿಕೆಯಾಗಿ ಕುಸಿಯುವ ಹಂತ ತಲುಪಿದ್ದ ಕೋಟೆಯನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ.
ಶತಮಾನಗಳ ಇತಿಹಾಸವಿರುವ ಮಡಿಕೇರಿ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಕುಸಿಯುವ ಹಂತಕ್ಕೆ ತಲುಪಿತ್ತು. ಕೋಟೆಯನ್ನು ದುರಸ್ತಿ ಮಾಡಬೇಕು ಎಂದು ಆಲೂರು ಸಿದ್ದಾಪುರ ನಿವಾಸಿ ಜೆ. ಎಸ್. ವಿರೂಪಾಕ್ಷಯ್ಯ ಕರ್ನಾಟಕ ಹೈಕೋರ್ಟ್ಗೆ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು.
ಮಡಿಕೇರಿ ಕೋಟೆ ಆವರಣ ಸುಮಾರು 16 ಎಕರೆಯನ್ನು ಒಳಗೊಂಡಿದೆ. ಕಟ್ಟಡ ಶಿಥಿಲವಾದ ಬಳಿಕ ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸುಮಾರು 32 ಇಲಾಖೆಗಳು ಬೇರೆ ಕಡೆ ಸ್ಥಳಾಂತರಗೊಂಡಿದ್ದವು. ಬಳಿಕ ಕರ್ನಾಟಕ ಸರ್ಕಾರ ಕೋಟೆಯ ನವೀಕರಣಕ್ಕೆ ಹಣ ಬಿಡುಗಡೆ ಮಾಡಿತ್ತು.












Click it and Unblock the Notifications