ಕೊಡಗು ತೊರೆದು ದೀರ್ಘ ರಜೆಗೆ ಡಿಸಿ ಅನ್ನಿಸ್ ಕಣ್ಮಣಿ ಜಾಯ್
ಕೊಡವರ ಪಾಲಿನ ಕಣ್ಮಣಿ ಎನಿಸಿಕೊಂಡಿದ್ದ ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ಅವರು ದೀರ್ಘ ಕಾಲದ ರಜೆ ಪಡೆದುಕೊಂಡು ಕೊಡಗು ತೊರೆಯುತ್ತಿದ್ದಾರೆ.
2009ರಲ್ಲಿ ತಿರುವನಂತಪುರಂನ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿದ ಅನ್ನಿಸ್ ಅವರು 2012ರಲ್ಲಿ ಐಎಎಸ್ ಪರೀಕ್ಷೆ ಬರೆದು ನಾಗರಿಕ ಸೇವೆಗೆ ಸಜ್ಜಾದರು. ಕೊಡಗು ಡಿಸಿಯಾಗುವುದಕ್ಕೂ ಮುನ್ನ ಬೀದರ್ ಜಿಲ್ಲೆಯಲ್ಲಿ ಸಹಾಯಕ ಆಯುಕ್ತೆ ಹಾಗೂ ತುಮಕೂರಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಭಾರತೀಯ ವಿದೇಶಿ ಸೇವೆ(ಐಎಫ್ಎಫ್) ಅಧಿಕಾರಿಯಾಗಿರುವ ಸ್ಟೀಫನ್ ಮಣಿ ಅವರು ಅಮೆರಿಕದಲ್ಲಿನ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ. ಪತಿ ಹಾಗೂ ಕುಟುಂಬದ ಜೊತೆ ಕಾಲ ಕಳೆಯಲು ಅನ್ನಿಸ್ ಕಣ್ಮಣಿ ಬಯಸಿದ್ದಾರೆ.

2019ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅನ್ನಿಸ್
2019ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅನ್ನಿಸ್ ಅವರು ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ, ಭೂ ಕುಸಿತದ ವಿಕೋಪಗಳನ್ನು ಕಂಡವರು, ನೊಂದವರ ಪಾಲಿಗೆ ನೆರವಾಗಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡವರು. ಈಗ ತಮ್ಮ ಪತಿ ಐಎಫ್ಎಸ್ ಅಧಿಕಾರಿ ಸ್ಟೀಫನ್ ಜೊತೆಗೆ ಅಮೆರಿಕಕ್ಕೆ ತೆರಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ನಾನು ದೀರ್ಘಕಾಲದ ರಜೆ
ಈ ಬಗ್ಗೆ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಕಣ್ಮಣಿ, ಇದೇ ಮೊದಲ ಬಾರಿಗೆ ನಾನು ದೀರ್ಘಕಾಲದ ರಜೆಗೆ ಮನವಿ ಮಾಡಿಕೊಂಡಿದ್ದೇನೆ, ನನ್ನ ಕುಟುಂಬ, ಪುತ್ರಿ ಅಪೂರ್ವ ಜೊತೆ ಕಾಲ ಕಳೆಯಲು ಇಚ್ಛಿಸಿದ್ದೇನೆ. ಯುಎಸ್ ನಿಂದ ಹಿಂತಿರುಗಿದ ಬಳಿಕ ಜನ ಸೇವೆಗೆ ಮರಳುವೆ ಎಂದಿದ್ದಾರೆ.
ಕೊಡಗಿನ ವಿಪತ್ತು ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ, ಸಂತ್ರಸ್ತರಿಗೆ ಸಹಾಯವಾಣಿ ಮೂಲಕ ಅಗತ್ಯ ನೆರವು ಒದಗಿಸುವಲ್ಲಿ ಅನ್ನಿಸ್ ಯಶ ಕಂಡಿದ್ದರು.

ತೋರಾ ಗ್ರಾಮದಲ್ಲಿ ಪ್ರವಾಹದಿಂದ ಉಂಟಾಗಿದ್ದ ಪರಿಸ್ಥಿತಿ
ತೋರಾ ಗ್ರಾಮದಲ್ಲಿ ಪ್ರವಾಹದಿಂದ ಉಂಟಾಗಿದ್ದ ಪರಿಸ್ಥಿತಿಯನ್ನು ನಿಭಾಯಿಸಿದ ಅನ್ನಿಸ್ ಕಣ್ಮಣಿ, ಎಸ್ಪಿ ಸುಮನ್ ಡಿ ಪೆನ್ನೆಕರ್, ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮಿ ಪ್ರಿಯ ಅವರ ಕಾರ್ಯ ಜನ ಮೆಚ್ಚುಗೆಗೆ ಕಾರಣವಾಯಿತು. ಭೂಕುಸಿತ ಉಂಟಾದ ಪ್ರದೇಶಗಳಿಗೆ ತೆರಳಿ ಜನರ ಕಷ್ಟ ಸುಖ ಆಲಿಸಿದರು. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣಾಚಾರ್ ಹಾಗೂ ಕುಟುಂಬಸ್ಥರು ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟಾಗ ಪರಿಸ್ಥಿತಿ ನಿಭಾಯಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರ ಜೊತೆ ಮಾತನಾಡಿ ಚೆಕ್ ಪರಿಹಾರ ಗೊಂದಲ ನಿವಾರಿಸಿದ್ದು, ಪರಿಹಾರ ಕಾರ್ಯ ಕೈಗೊಂಡಿದ್ದನ್ನು ಕೊಡವರು ಮರೆತಿಲ್ಲ.

ಅನ್ನಿಸ್ ಅವರು ಅಪವಾದದಿಂದ ಹೊರತಾಗಿರಲಿಲ್ಲ
ಆದರೆ, ಅನ್ನಿಸ್ ಅವರು ಅಪವಾದದಿಂದ ಹೊರತಾಗಿರಲಿಲ್ಲ, ಜಿಲ್ಲಾಧಿಕಾರಿಗಳನ್ನು ಟೀಕಿಸಿ ಲೇಖನ ಬರೆದಿದ್ದ ಕಾವೇರಿ ಟೈಮ್ಸ್ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಅನ್ನಿಸ್ ಅವರ ನಡೆ ವಿರುದ್ಧ ಹಲವರು ದನಿಯೆತ್ತಿದ್ದರು.ವಿಪತ್ತು ನಿರ್ವಹಣಾ ನಿಧಿ ಮೊತ್ತ ಸರಿಯಾಗಿ ವಿತರಣೆಯಾಗಿಲ್ಲ ಎಂದು ಟೀಕಿಸಿ ಅನಾಧಮೇಯ ಪತ್ರಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಎಸ್ಪಿ ಕಚೇರಿ ತಲುಪಿದ್ದವು. ಇದೆಲ್ಲದರ ಹೊರತಾಗಿ ಅನ್ನಿಸ್ ಜಿಲ್ಲಾಧಿಕಾರಿಯಾಗಿ ಕೊವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತು ಪೂರೈಕೆ, ಆರೋಗ್ಯ ನಿಗಾ ವಹಿಸುವುದರಲ್ಲಿ ಕೊಡಗು ಜಿಲ್ಲೆ ಉತ್ತಮ ನಿರ್ವಹಣೆ ತೋರಿ ಹೆಚ್ಚು ಸ್ಕೋರ್ ಮಾಡಿದ್ದಾರೆ.












Click it and Unblock the Notifications