ಕೊಡಗು: ಕಾಂಡ ಕೊಳೆ ರೋಗದಿಂದ ಕಂಗಾಲಾದ ಕಾಫಿ ಬೆಳೆಗಾರರು: ನಿಯಂತ್ರಣ ವಿಧಾನ
ಹವಾಮಾನ ಬದಲಾವಣೆ ದೇಶದ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹೊಸ ಬಗೆಯ ರೋಗ ಮತ್ತು ಕೀಟ ಬಾಧೆ ಬೆಳೆಗಳನ್ನು ಕಾಡುತ್ತಿದೆ. ಕರ್ನಾಟಕದ ಕಾಫಿ ಬೆಳೆ ಮೇಲೆ ಕೂಡ ಹವಾಮಾನ ಬದಲಾವಣೆ ಪರಿಣಾಮ ಬೀರಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.
ಕೊಡಗು ಜಿಲ್ಲೆಯಲ್ಲಿ ಹಲವಾರು ಕಾಫಿ ಎಸ್ಟೇಟ್ಗಳು ಈಗಾಗಲೇ ಮುಂಗಾರು ಮತ್ತು ಹವಾಮಾನ ಬದಲಾವಣೆಯಿಂದ ತೊಂದರೆಗೆ ಒಳಗಾಗಿವೆ. ದಕ್ಷಿಣ ಕೊಡಗು ಭಾಗದ ಕಾಫಿ ತೋಟಗಳಲ್ಲಿ ಕಾಂಡ ಕೊಳೆ ರೋಗ ಕಾಣಿಸಿಕೊಂಡಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

"ಕಾಂಡ ಕೊಳೆ ರೋಗವು ಸಾಮಾನ್ಯವಾಗಿ ಮಧ್ಯ ಮಾನ್ಸೂನ್ ಸಮಯದಲ್ಲಿ ಕಾಫಿ ಗಿಡಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಆಗಸ್ಟ್ ತಿಂಗಳಿನಲ್ಲಿ, ಮಳೆಯು ಭಾರೀ ಪ್ರಮಾಣದಲ್ಲಿ ಬೀಳುತ್ತದೆ. ಆದರೆ, ಈ ವರ್ಷ ಮುಂಗಾರು ಆರಂಭದಲ್ಲೇ ಕಾಫಿ ತೆನೆ, ಕಾಫಿ ಬೀಜಗಳು ಕೊಳೆಯುತ್ತಿವೆ" ಎಂದು ದಕ್ಷಿಣ ಕೊಡಗಿನ ಶ್ರೀಮಂಗಲ ಭಾಗದ ಬೆಳೆಗಾರ ದೇವಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಫಿ ಎಸ್ಟೇಟ್ಗಳಲ್ಲಿ ಹಲವು ಬೆಳೆಗಳಿಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಹವಾಮಾನ ಬದಲಾವಣೆಯಿಂದ ರೋಗ ಹರಡುವಿಕೆ ನಿಯಂತ್ರಣ ಮಾಡುವುದು ಕಷ್ಟವಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಇಳುವರಿ ನಷ್ಟವಾಗುವುದು ಒಂದು ಕಡೆಯಾದರೆ, ಕೊಳೆ ರೋಗ ಹರಡುತ್ತಿರುವುದು ಕಾಫಿ ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಹವಾಮಾನ ಬದಲಾವಣೆ ಕಾರಣ
ಕಾಂಡ ಕೊಳೆ ರೋಗ ಏನು ಕಾಫಿ ಗಿಡಗಳಿಗೆ ಹೊಸದಲ್ಲ, ಆದರೆ ಹವಾಮಾನ ಬದಲಾವಣೆಯಿಂದ ಅದರ ನಿಯಂತ್ರಣ ಕಷ್ಟವಾಗಿದೆ. ರೊಬಸ್ಟಾ ಕಾಫಿಯಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರೋಗದ ಪ್ರಮಾಣ ಕೂಡ ಹೆಚ್ಚಾಗಿದೆ.
ಚೆಟ್ಟಳ್ಳಿ ಕಾಫಿ ಬೋರ್ಡ್ನ ಡಿಡಿ ಜಾರ್ಜ್ ಡೇನಿಯಲ್ ಈ ಬಗ್ಗೆ ಮಾತನಾಡಿ, ಹವಾಮಾನ ಬದಲಾವಣೆ ರೋಗದ ಹರಡುವಿಕೆಗೆ ಒಂದು ಕಾರಣ ಎಂದು ಹೇಳಿದ್ದಾರೆ, "ಕಾಂಡ ಕೊಳೆ ರೋಗ ಹರಡುವಲ್ಲಿ ಹವಾಮಾನ ಪರಿಸ್ಥಿತಿಗಳು ಪ್ರಮುಖ ಪಾತ್ರವಹಿಸುತ್ತವೆ. ಮಳೆಗಾಲದಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುತ್ತದೆ. ಈ ತೇವಾಂಶವು ಸ್ವಲ್ಪ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಇದು ಆಂಥ್ರಾಕ್ನೋಸ್ ಶಿಲೀಂಧ್ರದ ಅಣಬೆಗಳು ಹಬ್ಬಲು ಸಹಾಯ ಮಾಡುತ್ತದೆ, ಇದು ಕಾಂಡ ಕೊಳೆತ ರೋಗವನ್ನು ಉಂಟುಮಾಡುತ್ತದೆ." ಎಂದು ವಿವರಿಸಿದ್ದಾರೆ.
ದಕ್ಷಿಣ ಕೊಡಗಿನಲ್ಲಿ, ಮಳೆಯು ಕಡಿಮೆಯಾಗಿದೆ ಮತ್ತು ಪ್ರದೇಶವು ಸ್ವಲ್ಪ ಸೂರ್ಯನ ಬೆಳಕು ಬೀಳುತ್ತಿದೆ, ಇದರಿಂದಾಗಿ ಹಲವು ಎಸ್ಟೇಟ್ಗಳಲ್ಲಿ ಕಾಂಡ ಕೊಳೆ ರೋಗ ಹೆಚ್ಚಾಗಿದೆ.
"ಮೊದಲಿಗೆ, ಕೇವಲ ಒಂದು ಅಥವಾ ಎರಡು ಕಾಫಿ ಹಣ್ಣುಗಳು ಕೊಳೆಯಲು ಪ್ರಾರಂಭಿಸುತ್ತವೆ. ಒಂದು ದಿನದಲ್ಲಿ, ಇಡೀ ಸಸ್ಯದ ಮೇಲೆ ಪರಿಣಾಮ ಬೀರುತ್ತದೆ. ಸ್ಥಳೀಯವಾಗಿ ಹರಡುವುದನ್ನು ತಡೆಯಲು ಸಸ್ಯಗಳ ಬಾಧಿತ ಭಾಗಗಳನ್ನು ತಕ್ಷಣವೇ ಕತ್ತರಿಸಿ ಮಣ್ಣಿನ ಅಡಿಯಲ್ಲಿ ಹೂಳಬೇಕು." ಎಂದು ಹೇಳಿದರು.
ರೋಗ ನಿಯಂತ್ರಣ ಹೇಗೆ?
ರೋಗ ಹರಡುವುದನ್ನು ತಡೆಯಲು ಬೆಳೆಗಾರರು ಒಂದು ಲೀಟರ್ ನೀರಿಗೆ, ಒಂದು ಮಿಲಿ ಒಪೆರಾ ಶಿಲೀಂಧ್ರನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಮಳೆ ಇಲ್ಲದ ವೇಳೆಯಲ್ಲಿ ಈ ಮಿಶ್ರಣವನ್ನು ಸಿಂಪಡಿಸಬೇಕು, ಇದಲ್ಲದೆ, 0.5% ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸುವುದರಿಂದ ಮಾನ್ಸೂನ್ನಲ್ಲಿ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯಬಹುದು.
"ರೋಬಸ್ಟಾ ವಿಧದ ಸಸ್ಯಗಳು ರೋಗದಿಂದ ಹೆಚ್ಚು ಪ್ರಭಾವಿತವಾಗಿವೆ. ಆದಾಗ್ಯೂ, ಅರೇಬಿಕಾ ಪ್ರಭೇದಗಳು ಸಹ ರೋಗಕ್ಕೆ ಗುರಿಯಾಗುತ್ತವೆ. ಬೆಳೆಗಳನ್ನು ಕತ್ತರಿಸುವುದು, ನೆರಳು ಕಡಿಮೆ ಮಾಡುವುದು, ಸರಿಯಾದ ಬೆಳಕು ಮತ್ತು ಗಾಳಿಯ ಸಂಚಾರ ಸೇರಿದಂತೆ ತೋಟದಲ್ಲಿ ಸ್ವಚ್ಛತೆ ಕಾಪಾಡುವುದರಿಂದ ಕಾಂಡ ಕೊಳೆತ ರೋಗವನ್ನು ತಡೆಗಟ್ಟಬಹುದು" ಎಂದು ಜಾರ್ಜ್ ಡೇನಿಯಲ್ ಹೇಳಿದ್ದಾರೆ.












Click it and Unblock the Notifications