ಕೊಡಗಿನ ಒಂಟಿಮನೆ ದರೋಡೆ ಪ್ರಕರಣ : ಪ್ರಮುಖ ಆರೋಪಿ ಸೆರೆ
ಹೊಸಪಟ್ನದ ಕಾಫಿ ಬೆಳೆಗಾರರೊಬ್ಬರ ಮನೆಯಲ್ಲಿ ನಡೆದ ದರೋಣೆ ಪ್ರಕರಣವನ್ನು ಮಡಿಕೇರಿ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿ, ಡಿಸೆಂಬರ್, 3: ಕಾಫಿ ಬೆಳೆಗಾರರೊಬ್ಬರ ಒಂಟಿಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನಿಂದ 7 ಲಕ್ಷ ನಗದು ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ರಿವಾಲ್ವರ್ವೊಂದನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿಯ ಆಟೋ ಚಾಲಕ ಕೃಷ್ಣ ಎಂಬಾತನೇ ಬಂಧಿತ ಆರೋಪಿ. ಇತ್ತೀಚೆಗೆ ಸಹಚರರೊಂದಿಗೆ ಸೇರಿ ಈತ ಕುಶಾಲನಗರ ಸಮೀಪದ ಹೊಸಪಟ್ಟಣ ಕಾಫಿ ಬೆಳೆಗಾರ ಶಿವಕುಮಾರ್ ಅವರ ಮನೆಗೆ ನುಗ್ಗಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿದ್ದನು.
ದರೋಡೆ ಸಂದರ್ಭ ಮನೆಗೆ ಪರಿಚಿತರು ಬಂದ ಕಾರಣ ತಪ್ಪಿಸಿಕೊಂಡಿದ್ದರು. ಕಾಫಿ ತೋಟದ ನಡುವೆ ದಾರಿ ಸಿಗದೆ ಘಟನೆ ನಡೆದ ದಿನವೇ 4 ಮಂದಿ ಆರೋಪಿಗಳನ್ನು ನಂತರ ಓರ್ವ ಆರೋಪಿ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಪ್ರಮುಖ ಆರೋಪಿ ಮಾತ್ರ ಸಿಕ್ಕಿರಲಿಲ್ಲ.
ಇದೀಗ ಪ್ರಕರಣದ ರೂವಾರಿ ಕೃಷ್ಣ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ 5 ಮಂದಿ ಮಂಗಳೂರಿನ ಉಲ್ಲಾಳದ ನಿವಾಸಿಗಳಾಗಿದ್ದು, ಕೃಷ್ಣ ಮಡಿಕೇರಿಯ ಮಂಗಳಾದೇವಿನಗರದ ಅಂಗನವಾಡಿ ಬಳಿಯ ನಿವಾಸಿ. ಆಟೋ ಚಾಲಕನಾಗಿರುವ ಈತ ಈ ಹಿಂದೆ ಮಡಿಕೇರಿಯಲ್ಲಿ ದೇವಿ ಗ್ಯಾಸ್ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಪಾಲ್ಗೊಂಡು ಜೈಲು ಸೇರಿದ್ದನು.
ತಾನು ಮಾಡಿದ ಕೈಸಾಲ ತೀರಿಸುವ ಸಲುವಾಗಿ ದರೋಡೆಗೆ ಸ್ಕೆಚ್ ಹಾಕಿದ್ದನು. ಮಡಿಕೇರಿಯ ಶರೀಫ್ ಎಂಬಾತ ನೊಂದಿಗೆ ಸೇರಿ ಈ ದರೋಡೆಗೆ ಸಂಚು ರೂಪಿಸಿದ್ದಾನೆ.
ಭೂಮಾಪನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್ ಎಂಬಾತ ಶಿವಕುಮಾರ್ ಮನೆಯ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ನವೆಂಬರ್ 22 ರಂದು ಮಡಿಕೇರಿಯಿಂದ ನಿಜಾಮ್ ಎಂಬಾತನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಅಬ್ದುಲ್ ರೆಹಮಾನ್, ಉಲ್ಲಾಳದ ಮಹಮ್ಮದ್ ಹನೀಫ್, ಮಹಮ್ಮದ್ ಫಯಾಜ್, ಜಲಾಲ್, ಹಂಪನಕಟ್ಟೆಯ ಜಾಫರ್ ಸಾದಿಕ್ ಮಂಗಳೂರಿನ ಶರೀಫ್ ಎಂಬುವರನ್ನು ಕರೆಯಿಸಿಕೊಂಡು ಅವರೊಂದಿಗೆ ಸೇರಿ ಕೃಷ್ಣ ದರೋಡೆ ನಡೆಸಿದ್ದನು.
ದಕ್ಷಿಣ ಕನ್ನಡ ನೋಂದಣಿಯುಳ್ಳ ಇನ್ನೋವ ಕಾರನ್ನು ಮಹಾರಾಷ್ಟ ನೋಂದಣಿಯ ನಕಲಿ ನಂಬರ್ ಪ್ಲೇಟ್ ಅಳವಡಿಸಿ ನಂತರ ಬೆಳೆಗಾರ ಹೊಸಪಟ್ಟಣದ ಶಿವಕುಮಾರ್ ಮನೆ ಬಳಿ ಹೊಂಚು ಹಾಕಿ ಕುಳಿತು ಈ ಕೃತ್ಯ ಎಸಗಿದ್ದರು.
ಬಳಿಕ ಸಾರ್ವಜನಿಕರ ಸಹಕಾರದಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದರು. ಒಟ್ಟು ಒಂಬತ್ತು ಮಂದಿ ದರೋಡೆ ನಡೆಸಿದ್ದು ಇದೀಗ ಆರು ಮಂದಿಯನ್ನು ಬಂಧಿಸಲಾಗಿದ್ದು ಉಳಿದ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಎಸ್ಪಿ ರಾಜೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ಸಂಪತ್ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಜಿಲ್ಲಾ ಅಪರಾಧ ಪತ್ತೆದಳದ ಮಹೇಶ್, ಠಾಣಾಧಿಕಾರಿ ಗಳಾದ ಜೆ.ಇ. ಮಹೇಶ್, ಅನೂಪ್ ಮಾದಪ್ಪ, ಜಗದೀಶ್, ಸಿಬ್ಬಂದಿ ಸಜಿ, ಲೋಕೇಶ್, ಉದಯ, ಮೋಹನ್, ಸುರೇಶ್, ಜಯಪ್ರಕಾಶ್, ನಾಗರಾಜ್, ಸಂಪತ್ ಅವರು ಕಾರ್ಯಾಚರಣೆಯಲ್ಲಿ ಪಾಲೊಂಡಿದ್ದರು.