ಮಡಿಕೇರಿ; ಕೋವಿಡ್ ವರದಿ ತಂದು ವಿವಾಹವಾದ ಕೇರಳದ ವರ!
ಮೈಸೂರು, ಮಾರ್ಚ್ 01: ಕರ್ನಾಟಕ ಸರ್ಕಾರ ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ತೊಂದರೆ ಆಗಿದೆ. ಅದರಲ್ಲೂ ಕೋವಿಡ್ ವರದಿ ಪಡೆಯಲು ಕೇರಳದಲ್ಲಿ 2,700 ರೂ.ಗಳ ತನಕ ಶುಲ್ಕ ವಿಧಿಸಲಾಗುತ್ತಿದೆ.
ಇದು ಬಡವರಿಗೆ ನಂಗಲಾರದ ತುತ್ತಾಗಿದೆ. ಅದರಲ್ಲೂ ವೈವಾಹಿಕ ಸಂಬಂಧಗಳಿಗೂ ಸರ್ಕಾರದ ಕಡ್ಡಾಯ ನಿಯಮ ಬಹಳ ಅನಾನುಕೂಲಗಳನ್ನು ಉಂಟು ಮಾಡಿದೆ. ಈ ಅಡತಡೆಯನ್ನು ಮೀರಿ ಕೇರಳದ ಯುವಕನೋರ್ವ ಸೋಮವಾರ ಮಡಿಕೇರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ.
ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ರೋಹಿಣಿ ಜಯಪ್ಪನಾಯ್ಕ ದಂಪತಿಯ ಪುತ್ರಿ ಆಶಾ ಮತ್ತು ಕಾಸರಗೋಡು ಜಿಲ್ಲೆ ಮುಳಿಯಾರ್ನ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್ ವಿವಾಹ ಎರಡು ತಿಂಗಳ ಹಿಂದೆ ನಿಶ್ಚಯವಾಗಿತ್ತು.

ಆದರೆ, ಈಗ ಕೇರಳದಿಂದ ಕೊಡಗಿಗೆ ಬರುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಲೇಬೇಕಾಗಿದೆ. ವರನ ಕಡೆಯಿಂದ 35 ಜನರು ಮದುವೆಗೆ ಹೊರಟಿದ್ದರು, ಎಲ್ಲರಿಗೂ ಕೋವಿಡ್ ಪರೀಕ್ಷೆ ಎಂದರೆ ಅದಕ್ಕಾಗಿ ಸುಮಾರು 90 ಸಾವಿರ ರೂ. ವೆಚ್ಚ ಭರಿಸಬೇಕಿತ್ತು. ಸರ್ಕಾರದ ನಿಯಮದಿಂದಾಗಿ ಮದುವೆಯೇ ನಿಲ್ಲುವ ಆತಂಕವೂ ಎದುರಾಗಿತ್ತು. ವಧುವಿನ ಕಡೆಯವರು ಮದುವೆ ಮುಂದೂಡುವ ಬಗ್ಗೆಯೂ ಯೋಚಿಸಿದ್ದರು.
ಸೋಮವಾರ ಎಲ್ಲಾ ಅಡೆ-ತಡೆಗಳನ್ನೂ ದಾಟಿ ಪ್ರಮೋದ್ ಕೆಲವು ಕುಟುಂಬ ಸದಸ್ಯರ ಜೊತೆ ಆಗಮಿಸಿ ಮಡಿಕೇರಿಯಲ್ಲಿ ಆಶಾ ಅವರ ಕೈ ಹಿಡಿದಿದ್ದಾರೆ. ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಡೆದ ಸರಳ ವಿವಾಹದಲ್ಲಿ ಕೆಲವು ಜನರು ಮಾತ್ರ ಪಾಲ್ಗೊಂಡಿದ್ದರು. ಕೇರಳದಿಂದ ವಿವಾಹಕ್ಕೆ ಬಂದವರು ನೂತನ ದಂಪತಿಗಳ ಜೊತೆ ವಾಪಸ್ ಆಗಿದ್ದಾರೆ.












Click it and Unblock the Notifications