ಎಂಥ ಜನ! ಪರಿಹಾರದಾಸೆಗೆ ಬದುಕಿದ ಮಗನ ಸಾಯಿಸಿದ ದಂಪತಿ!
ಮಡಿಕೇರಿ, ಆಗಸ್ಟ್ 28: ಪರಿಹಾರ ಸಿಗುತ್ತೆ ಎಂಬ ದುರಾಸೆಗೆ ಬಿದ್ದ ದಂಪತಿ ತನ್ನ ಮಗ ಮಣ್ಣಿನಡಿಗೆ ಸಿಲುಕಿ ಸತ್ತು ಹೋಗಿದ್ದಾನೆ ಎಂದು ನಾಟಕವಾಡಿದ ಘಟನೆ ಬೆಳಕಿಗೆ ಬಂದಿದ್ದು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೋಮಶೇಖರ್, ಸುಮಾ ದಂಪತಿಯೇ ಮಗ ಮಣ್ಣಿನಡಿಗೆ ಸಿಲುಕಿದ್ದಾನೆ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದವರಾಗಿದ್ದಾರೆ. ಇಷ್ಟಕ್ಕೂ ಅವಳು ಗಂಡ ಮಗುವನ್ನು ಬಿಟ್ಟು ಬಂದಿದ್ದಳು. ಇವನು ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದನು. ಇವರಿಬ್ಬರು ಸೇರಿ ಮತ್ತೆ ಹೊಸ ಬದುಕನ್ನು ಕಾಲೂರು ಗ್ರಾಮದ ಕಾಫಿ ತೋಟದ ಲೈನ್ ಮನೆಯಲ್ಲಿ ಕಟ್ಟಿಕೊಂಡಿದ್ದರು. ಹೀಗೆ ಬದುಕನ್ನು ಸಾಗಿಸುತ್ತಿದ್ದಾಗಲೇ ಜಲಪ್ರಳಯವಾಗಿ ಗುಡ್ಡ ಕುಸಿದು ಸಂತ್ರಸ್ತರಾದ ಇವರು ಮಡಿಕೇರಿಯ ಮೈತ್ರಿ ಹಾಲ್ ನ ನಿರಾಶ್ರಿತರ ಶಿಬಿರ ಸೇರಿಕೊಂಡಿದ್ದರು.
ಇಲ್ಲಿ ದಿನ ಕಳೆಯುತ್ತಿದ್ದಾಗಲೇ ಸತ್ತವರಿಗೆ 5ಲಕ್ಷ ರೂ ಪರಿಹಾರ ಸಿಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರು ನಾಟಕ ಆರಂಭಿಸಿದ್ದಾರೆ. ತನ್ನ 7 ವರ್ಷದ ಮಗ ಗಗನ್ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಅಳಲು ಆರಂಭಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅವರನ್ನು ಕರೆದೊಯ್ದು ಜಾಗ ತೋರಿಸುವಂತೆ ಹೇಳಿ ಸೇನೆ ಮೃತದೇಹ ಹೊರತೆಗೆಯುವ ಕಾರ್ಯಾಚರಣೆಗೆ ಮುಂದಾಗಿದೆ. ಸುಮಾರು ನಾಲ್ಕು ದಿನ ಕಳೆದರೂ ಬಾಲಕನ ಮೃತದೇಹ ಮಾತ್ರ ಸಿಗಲಿಲ್ಲ. ಜತೆಗೆ ಸ್ಥಳವನ್ನು ತೋರಿಸುವಾಗಲೂ ಅವರಲ್ಲಿ ಗೊಂದಲ ಕಂಡು ಬರುತ್ತಿತ್ತು. ಬಹುಶಃ ದುಃಖದಲ್ಲಿರುವ ಕಾರಣ ಅವರು ಹಾಗೆ ಆಡುತ್ತಿರಬೇಕೆಂದುಕೊಂಡ ಎನ್ಡಿಆರ್ ಎಫ್, ಎಸ್ಡಿಆರ್ ಎಫ್, ಅಗ್ನಿಶಾಮಕ ದಳದೊಂದಿಗೆ ಗ್ರಾಮಾಂತರ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದರು. ಆದರೆ ಕೊನೆಗೂ ಮೃತದೇಹ ಮಣ್ಣಿನಡಿಯಲ್ಲಿರುವ ಯಾವ ಸುಳಿವೂ ಅಲ್ಲಿ ಗೋಚರಿಸಲಿಲ್ಲ.

ಇದು ಪೊಲೀಸರಿಗೆ ಅನುಮಾನವನ್ನುಂಟು ಮಾಡಿತ್ತು. ಜತೆಗೆ ಅವರ ನಡವಳಿಕೆಯೂ ಒಂದಷ್ಟು ಸಂಶಯವನ್ನು ಹುಟ್ಟು ಹಾಕಿದ್ದರಿಂದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿ ಅವರ ಪೂರ್ವಾಪರವನ್ನು ಕೆದಕಿದಾಗ ಈ ಹಿಂದೆ ಅವರಿಬ್ಬರಿಗೂ ಮದುವೆಯಾಗಿತ್ತಲ್ಲದೆ ಅವರಿಬ್ಬರು ತಮ್ಮ ಸಂಸಾರ ತೊರೆದು ಬಂದು ಎರಡನೆ ವಿವಾಹವಾಗಿ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದರು. ಅಲ್ಲದೆ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ ಎಂದು ಹೇಳಿದ್ದ ಸುಮಾಳ ಮಗ ಆಕೆಯ ತವರು ಮನೆ ತಿತಿಮತಿಯಲ್ಲಿದ್ದನು ಎಂಬುದು ಪತ್ತೆಯಾಗಿದೆ.
ಇದೀಗ ಪೊಲೀಸರು ಸುಳ್ಳು ಹೇಳಿದ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಾಸೆಯಿಂದ ಸುಳ್ಳು ಹೇಳಿ ಸುಖಾಸುಮ್ಮನೆ ಕಾರ್ಯಾಚರಣೆ ನಡೆಸುವಂತೆ ಮಾಡಿದ ದಂಪತಿ ತಕ್ಕ ಶಾಸ್ತಿಯಾಗಿದೆ. ಪರಿಸ್ಥಿತಿಯ ಲಾಭ ಪಡೆಯೋಕೆ ಹೀಗೂ ಮಾಡ್ತಾರೆ ಎನ್ನುವುದು ಈಗ ಬಯಲಾಗಿದೆ.












Click it and Unblock the Notifications