ಕಾವೇರಿ ತವರು ಕೊಡಗಿನಲ್ಲಿಯೇ ಈ ವರ್ಷ ನೀರಿಗೆ ಬರ ಬಂದಿದ್ದು ಹೇಗೆ?
ಮಡಿಕೇರಿ, ಮಾರ್ಚ್ 09: ನಾಡಿಗೆ ನೀರುಣಿಸುವ ಕಾವೇರಿ ನದಿ ತವರಿನಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಈಗಾಗಲೇ ನೀರೊದಗಿಸುವ ಜಲಮೂಲಗಳಾದ ಹಾರಂಗಿ, ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಮಟ್ಟ ತಳಸೇರಿದರೆ, ಕಾವೇರಿ ನದಿಯಲ್ಲಿ ನೀರು ಬತ್ತಲಾರಂಭಿಸಿದೆ. ಉಳಿದಂತೆ ಕೆರೆ ಕಟ್ಟೆಗಳಲ್ಲಿ ನೀರು ಖಾಲಿಯಾಗಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಜನರು ನೀರಿಗಾಗಿ ಬಾವಿಗಳನ್ನು ಅವಲಂಭಿಸಿದ್ದು, ಅವುಗಳಲ್ಲಿ ನೀರು ಆರಲಾರಂಭಿಸಿದೆ. ಹೀಗಾಗಿ ಬೇಸಿಗೆ ಆರಂಭದಲ್ಲಿಯೇ ಹೀಗಾದರೆ ಮುಂದಿನ ದಿನಗಳ ಗತಿ ಏನು ಎಂದು ಚಿಂತೆ ಮಾಡುವ ಪರಿಸ್ಥಿತಿಗೆ ಜನ ಬಂದು ನಿಂತಿದ್ದಾರೆ.

ಪಟ್ಟಣ ಪ್ರದೇಶ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡುವ ಬಹುತೇಕರು ತಮ್ಮದೇ ಮನೆ ಮುಂದೆ ಬಾವಿಗಳನ್ನು ನಿರ್ಮಿಸಿ ಅದರ ನೀರನ್ನು ಉಪಯೋಗಿಸುತ್ತಿದ್ದಾರೆ. ಇನ್ನು ಕೆಲವರು ನೈಸರ್ಗಿಕ ನೀರನ್ನು ಬಳಸುತ್ತಾರೆ. ಇಂತಹ ಸ್ಥಳಗಳಲ್ಲಿ ನೀರು ಬತ್ತಿ ಹೋದರೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ.
ಜಲಾಶಯಗಳಲ್ಲಿ ಹೂಳು ತುಂಬಿದೆ
ಚಿಕ್ಲಿಹೊಳೆಯಲ್ಲಿ ಜನವರಿಯಲ್ಲಿಯೇ ನೀರು ಖಾಲಿಯಾಗಿತ್ತು. ಈಗ ಹಾರಂಗಿ ಸರದಿ ಅಲ್ಲಿಯೂ ನೀರಿನ ಮಟ್ಟ ಪಾತಾಳ ತಲುಪಿದೆ. ಈ ಬಾರಿ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಮಳೆಯ ಕೊರತೆ ಒಂದು ಕಡೆಯಾದರೆ 2859 ಅಡಿಗಳ ಜಲಾಶಯದಲ್ಲಿ ಮೊದಲಿನಷ್ಟು ನೀರು ಸಂಗ್ರಹವಾಗುತ್ತಿಲ್ಲ. ಇದಕ್ಕೆ ಅದರಲ್ಲಿ ತುಂಬಿರುವ ಹೂಳು ಕಾರಣವಾಗಿದೆ.
ಇದುವರೆಗೆ ಜಲಾಶಯದಲ್ಲಿ ಅದೆಷ್ಟು ಅಡಿಯಷ್ಟು ಹೂಳು ತುಂಬಿದೆ ಎನ್ನವುದನ್ನು ಹೇಳುವುದೇ ಕಷ್ಟವಾಗಿದೆ. ಏಕೆಂದರೆ 2018ರಲ್ಲಿ ಭೂಕುಸಿತ ಸಂಭವಿಸಿದಾಗ ನದಿ ನೀರಲ್ಲಿ ಕೊಚ್ಚಿ ಬಂದ ಮಣ್ಣು ಇದರಲ್ಲಿ ಸಂಗ್ರಹವಾಗಿದೆ. ಹೂಳು ತುಂಬಿರುವ ಕಾರಣ ನೀರು ಮೊದಲಿನಷ್ಟು ಶೇಖರಣೆಯಾಗುತ್ತಿಲ್ಲ, ಇದರ ಹೂಳು ತೆಗೆಯದೆ ಹೋದರೆ ನೀರನ್ನು ಶೇಖರಿಸಿಡುವುದು ಕಷ್ಟವೇ...

ಈಗ ಕಾಫಿಗೆ ನೀರು ಅಗತ್ಯವಿದೆ
ಕೊಡಗಿನಲ್ಲಿ 2018ರಿಂದ 2022ರವರೆಗೆ ಐದು ವರ್ಷಗಳ ಕಾಲವೂ ಉತ್ತಮವಾಗಿ ಮಳೆಯಾಗಿತ್ತು. ಹೀಗಾಗಿ ನೀರಿನ ಸಮಸ್ಯೆ ಕೊಡಗು ಸೇರಿದಂತೆ ಕಾವೇರಿ ನದಿಯನ್ನು ಆಶ್ರಯಿಸಿದವರಿಗೆ ಕಾಣಿಸಲಿಲ್ಲ. ಆದರೆ 2023ರಲ್ಲಿ ಬೇಸಿಗೆಯಲ್ಲಿ ಮಳೆ ಬಾರದೆ ತೊಂದರೆಯಾಗಿತ್ತು. ಆದರೆ ಅಷ್ಟೊಂದಾಗಿ ನೀರಿನ ಸಮಸ್ಯೆ ಎದುರಾಗಿರಲಿಲ್ಲ.
ಮುಂದೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಅದರ ಪರಿಣಾಮ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ಕೊಡಗಿನವರಿಗೆ ಕಾವೇರಿ ನದಿಯಿಂದ ಹೆಚ್ಚಿನ ಉಪಯೋಗವಿಲ್ಲ. ಅದರ ಉಪಯೋಗವನ್ನು ಪಡೆದರೆ ಬೇಸಿಗೆಯಲ್ಲಿ ಅದರಲ್ಲೂ ಈ ಸಮಯದಲ್ಲಿ ಕಾರಣವೇನೆಂದರೆ ಕಾಫಿ ಕೊಯ್ಲು ಆದ ಬಳಿಕ ಕಾಫಿ ಗಿಡಗಳಿಗೆ ನೀರು ಹಾಯಿಸಿ ಹೂ ಬರುವಂತೆ ಮಾಡಬೇಕು.
ಕುಡಿಯಲು ನೀರುಳಿಸುವುದೇ ಸವಾಲ್
ಕೆಲವೊಮ್ಮೆ ಸಕಾಲಕ್ಕೆ ಮಳೆ ಸುರಿದರೆ ಅದರ ಉಪಯೋಗವೂ ಬರುವುದಿಲ್ಲ. ಈ ಬಾರಿ ಜಿಲ್ಲಾಡಳಿತ ನದಿ ಮೂಲಗಳಿಗೆ ಪಂಪ್ ಸೆಟ್ ಗಳನ್ನಿಟ್ಟು ನೀರನ್ನು ತೋಟಗಳಿಗೆ ಹಾಯಿಸುವುದಕ್ಕೆ ನಿರ್ಬಂಧ ಹೇರಿದೆ. ಹೀಗಾಗಿ ಮಳೆ ಬಾರದೆ ಹೋದರೆ ಮುಂದಿನ ವರ್ಷ ಕಾಫಿ ಫಸಲಿಲ್ಲದೆ ಬೆಳೆಗಾರರು ಸಂಕಷ್ಟಕ್ಕೀಡಾಗುವುದು ಖಚಿತ.

ಈಗಿನ ಪರಿಸ್ಥಿತಿಯಲ್ಲಿ ಕುಡಿಯಲು ನೀರು ಉಳಿಸಿಕೊಳ್ಳುವುದೇ ಕೊಡಗಿನವರಿಗೆ ಸವಾಲ್ ಆಗಿದೆ. ಹೀಗಾಗಿ ಜಲಮೂಲಗಳು ಬತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ತಡೆಯಲು ಸಾಧ್ಯವಿರುವುದು ಮಳೆಯಿಂದ ಮಾತ್ರ. ಮುಂದಿನ ದಿನಗಳಲ್ಲಿ ಮಳೆ ಸುರಿದರೆ ಮಾತ್ರ ಬದುಕಲು ಸಾಧ್ಯವಾಗಲಿದೆ.
ಇಂತಹ ಪರಿಸ್ಥಿತಿ ಬರಲು ಕಾರಣವೇನು?
ಕೊಡಗಿಗೆ ಇಂತಹದೊಂದು ಪರಿಸ್ಥಿತಿ ಬರಲು ಕಾರಣವೇನು? ಎನ್ನುವುದನ್ನು ನೋಡಿದ್ದೇ ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಎಷ್ಟೇ ಮಳೆ ಸುರಿದರೂ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಅದು ಭೂಮಿಯಲ್ಲಿ ಇಂಗುತ್ತಿಲ್ಲ. ನೇರವಾಗಿ ಹರಿದು ಹೋಗುತ್ತಿದೆ. ಮೊದಲು ಹೆಚ್ಚಿನ ಪ್ರಮಾಣದಲ್ಲಿ ಗದ್ದೆಗಳಿದ್ದವು. ಈ ಗದ್ದೆಗಳಲ್ಲಿ ನೀರು ಮೂರ್ನಾಲ್ಕು ತಿಂಗಳ ಕಾಲ ನೀರು ನಿಲ್ಲುತ್ತಿದ್ದರಿಂದ ಅಂತರ್ಜಲ ಹೆಚ್ಚಾಗುತ್ತಿತ್ತು.
ಆದರೆ ಕೊಡಗಿನಲ್ಲಿ ಭತ್ತ ಬೆಳೆಯುವುದನ್ನು ಬಿಟ್ಟು ಬಿಟ್ಟಿದ್ದಾರೆ. ಕಾರಣ ಭತ್ತದ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದರಿಂದ ಕೃಷಿ ಮಾಡಲು ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದಾರೆ. ಕೆಲವರು ಗದ್ದೆಯನ್ನು ನಿವೇಶನಗಳನ್ನಾಗಿ ಮಾಡಿದರೆ, ಇನ್ನುಳಿದಂತೆ ಅಡಿಕೆ, ಕಾಫಿ ತೋಟವಾಗಿ ಮಾರ್ಪಡಿಸಿದ್ದಾರೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೇಸಿಗೆ ಬರುತ್ತಿದ್ದಂತೆಯೇ ಜಲಮೂಲಗಳು ಬತ್ತುತ್ತಿವೆ.
ಮಳೆಗಾಗಿ ಪ್ರಾರ್ಥನೆ ಅನಿವಾರ್ಯ
ಈ ಬಾರಿಯ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಎದುರಾಗುತ್ತದೆ ಎಂಬುದು ಕಳೆದ ವರ್ಷದ ಮಳೆಗಾಲದಲ್ಲಿಯೇ ಗೊತ್ತಾಗಿತ್ತು. ಏಕೆಂದರೆ ವಾಡಿಕೆಯ ಮಳೆ ಸುರಿದಿರಲಿಲ್ಲ. ಕಾವೇರಿ ನದಿಯಲ್ಲಿ ಪ್ರವಾಹವೂ ಬಂದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಕೆಆರ್ ಎಸ್ ಜಲಾಶಯ ಭರ್ತಿಯಾಗಿರಲಿಲ್ಲ. ಇದೆಲ್ಲವೂ ಬರಗಾಲದ ಸೂಚನೆಯನ್ನು ನೀಡಿತ್ತು.
ಅವತ್ತೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಅವತ್ತು ಎಚ್ಚೆತ್ತುಕೊಳ್ಳದ ಕಾರಣದಿಂದ ಇವತ್ತು ಸಂಕಷ್ಟ ಎದುರಾಗಿದೆ. ಸಕಾಲದಲ್ಲಿ ಮಳೆ ಬಾರದೆ ಹೋದರೆ ಇಡೀ ಕೊಡಗಿನ ಜನ ನೀರಿಗಾಗಿ ಪರಿತಪಿಸ ಬೇಕಾದ ಪರಿಸ್ಥಿತಿ ಎದುರಾದರೂ ಅಚ್ಚರಿಪಡಬೇಕಾಗಿಲ್ಲ. ಈಗ ಎಲ್ಲರ ಮುಂದೆ ಇರುವುದು ಒಂದೇ ಒಂದು ಅದು ಮಳೆಗಾಗಿ ಪ್ರಾರ್ಥನೆ ಮಾಡುವುದಾಗಿದೆ.












Click it and Unblock the Notifications