ವಿಧಾನ ಪರಿಷತ್ ಸದಸ್ಯೆ ಜತೆ ಕೈ ನಾಯಕನ ಕೈಯಾಟ
ಕೊಡಗು, ಆಗಸ್ಟ್ 18 : ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಕೊಡಗಿನ ಕಾಂಗ್ರೆಸ್ ಮುಖಂಡರೊಬ್ಬ ಮಾಡಿಕೊಂಡ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಡಗು ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಕುಮಾರ್ ಅವರು ತಮ್ಮ ಎಡಬಾಗದಲ್ಲಿ ಕುಳಿತಿದ್ದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರ ಕೈ ಮೇಲೆ ಕೈ ಹಾಕಿ ಸವರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೈ ಮೇಲೆ ಕೈ ಹಾಕುತ್ತಿದ್ದಂತೆಯೇ ತಕ್ಷಣ ರಮೇಶ್ ರತ್ತ ನೋಡಿದ ವೀಣಾ ಅವರು ಬಲವಂತದಿಂದ ಅವರ ಕೈ ಎತ್ತಿ ಪಕ್ಕಕ್ಕಿಟ್ಟಿದ್ದಾರೆ. ಹಾಗೂ ಇಬ್ಬರು ಪರಸ್ಪರ ನಗೆ ಬೀರಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೇದಿಕೆ ಮೇಲೆ ಯೋಜನಾ ಹಾಗೂ ಸಾಂಖ್ಯೆಕ ಸಚಿವ ಸೀತಾರಾಮ್, ಜಿಲ್ಲಾಧಿಕಾರಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದ ಸಾರ್ವಜನಿಕ ವೇದಿಕೆಯಲ್ಲಿ ಕೈ ಮುಖಂಡ ವಿಧಾನಪರಿಷತ್ ಸದಸ್ಯೆಯ ಕೈ ಸವರಿದ್ದು ಇದೀಗ ಜಿಲ್ಲೆಯಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೀಣಾ ಅವರು, 'ಟಿ.ಪಿ ರಮೇಶ್ ವರ್ತನೆಯಿಂದ ಬೇಸರವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತನೆ ಸರಿಯಲ್ಲ, ಯಾವ ಭಾವನೆಯಿಂದ ಹಾಗೆ ಮಾಡಿದರೆಂದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.
ರಾಜಕೀಯವಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದವರು. ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.