Madikeri Assembly Constituency: ಕರ್ನಾಟಕದ ಕಾಶ್ಮೀರದಲ್ಲಿ ಕೇಸರಿಯದ್ದೇ ಕಲರವ
ರಾಜಕೀಯವಾಗಿ ಹೆಚ್ಚಾಗಿ ಮುನ್ನಲೆಗೆ ಬರದ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬಿಜೆಪಿಯದ್ದೇ ಕಾರುಬಾರು. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸುತ್ತಾ, ಕಾಂಗ್ರೆಸ್ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ? ವರದಿ, ವಿಶ್ಲೇಷಣೆ.
ಪಶ್ಚಿಮ ಘಟ್ಟಗಳ ಹಸಿರು ವನರಾಶಿಯಿಂದ ಕೂಡಿದ ಪ್ರದೇಶ ಮಡಿಕೇರಿ, ಇದನ್ನು ಮರ್ಕೇರಾ ಎಂದು ಇಂಗ್ಲಿಷ್ ನಲ್ಲೂ ಕರೆಯಲಾಗುತ್ತದೆ. ಕೊಡಗು ಜಿಲ್ಲೆಯನ್ನು ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರವೆಂದು ವಿಕಿಪಿಡೀಯಾದಲ್ಲಿ ಉಲ್ಲೇಖವಾಗಿದೆ.
ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. ಕೊಡವ ತಕ್ಕ್, ಅರೆಭಾಷೆ ಕ್ಷೇತ್ರದಲ್ಲಿ ಹೆಚ್ಚಾಗಿ ಸಂವಹನದಲ್ಲಿರುವ ಭಾಷೆ. ಕನ್ನಡ ಆಡಳಿತ ಭಾಷೆಯಾಗಿದ್ದರೂ ಮಲಯಾಳಂ, ತಮಿಳು, ತುಳು ಭಾಷಿಗರೂ ಇಲ್ಲಿ ನೆಲೆಸಿದ್ದಾರೆ.

ಪಶ್ಚಿಮಕ್ಕೆ ದಕ್ಷಿಣ ಕನ್ನಡ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನು ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ರಾಜಧಾನಿ ಮಡಿಕೇರಿ. ಅಬ್ಬಿ ಜಲಪಾತ, ತಲಕಾವೇರಿ, ಎಮ್ಮೆಮಾಡ್, ಮುಗಿಲುಪೇಟೆ, ಓಂಕಾರೇಶ್ವರ ದೇವಾಲಯ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಮಡಿಕೇರಿಯ ಪ್ರಮುಖ ಬೆಳೆಗಳು ಕಾಫಿ, ಕರಿಮೆಣಸು, ಏಲಕ್ಕಿ ಮುಂತಾದವು. ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ ಕೂಡಾ..
2008ರಲ್ಲಿ ಕ್ಷೇತ್ರ ವಿಂಗಡಣೆಯ ನಂತರ ಸೋಮವಾರಪೇಟೆ ಕ್ಷೇತ್ರ ರದ್ದಾಗಿ ವಿರಾಜಪೇಟೆ ಮತ್ತು ಮಡಿಕೇರಿ ಮಾತ್ರ ಉಳಿದುಕೊಂಡಿದೆ. ಕೇವಲ ಎರಡು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಕಾರಣಕ್ಕಾಗಿ ರಾಜಕೀಯವಾಗಿ ಮುನ್ನಲೆಗೆ ಬಂದ ಉದಾಹರಣೆಗಳು ಕಮ್ಮಿ. ಇಲ್ಲಿನ ರಾಜಕೀಯ ಇತಿಹಾಸದ ಪುಟ ತಿರುವಿದರೆ ಎಂ.ಸಿ. ನಾಣಯ್ಯ 1978ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎ.ಕೆ.ಸುಬ್ಬಯ್ಯರನ್ನು ಸೋಲಿಸಿದ್ದರು.
ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಾ ಬಂದ ಬಿಜೆಪಿ
ಸುಮಾರು ನಾಲ್ಕು ದಶಕಗಳಿಂದೀಚೆಗೆ ಬಿಜೆಪಿ ಇಲ್ಲಿ ಬಲಾಢ್ಯವಾಗುತ್ತಾ ಬರುತ್ತಿದೆ. 1983ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಎಂ.ಎಂ.ನಾಣಯ್ಯ, ಬಿಜೆಪಿಯ ಎಂ.ಎಂ.ಚಂಗಪ್ಪ ವಿರುದ್ದ ಕೇವಲ ಐದು ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಹಂತ ಹಂತವಾಗಿ ಬಿಜೆಪಿ ತನ್ನ ಮತಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಾ ಬಂದಿತು.

1994ರಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
1994ರಲ್ಲಿ ಜಿಲ್ಲೆಯ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. 1999ರಲ್ಲಿ ಕಾಂಗ್ರೆಸ್ ಇಲ್ಲಿಂದ ಗೆಲುವು ಸಾಧಿಸಿತು. 2004ರಲ್ಲಿ ಬಿಜೆಪಿಯ ಕೆ.ಜಿ.ಬೋಪಯ್ಯ ಮತ್ತೆ ಕ್ಷೇತ್ರದಲ್ಲಿ ಕೇಸರಿ ಪತಾಕೆ ಹಾರುವಂತೆ ಮಾಡಿದರು. ಕ್ಷೇತ್ರ ವಿಂಗಡಣೆಯ ನಂತರ ಸೋಮವಾರಪೇಟೆಯ ರಾಜಕೀಯ ಬಹುತೇಕ ಮಡಿಕೇರಿಗೆ ಶಿಫ್ಟ್ ಆಯಿತು. 2008ರಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಕಾಂಗ್ರೆಸ್ ನ ಜೀವಿಜಯರಿಗೆ 7 ಸಾವಿರ ಮತಗಳ ಅಂತರದ ಸೋಲಿನ ರುಚಿ ತೋರಿಸಿದ್ದರು.

ಅಪ್ಪಚ್ಚು ರಂಜನ್ ಹ್ಯಾಟ್ರಿಕ್
2013 ಮತ್ತು 2018ರಲ್ಲಿ ಮತ್ತೆ ಅಪ್ಪಚ್ಚು ರಂಜನ್ ಜಯ ಸಾಧಿಸಿದರು. ಎರಡು ಬಾರಿಯೂ ಜೆಡಿಎಸ್ ಟಿಕೆಟೆನಿಂದ ಸ್ಪರ್ಧಿಸಿದ್ದ ಜೀವಿಜಯ ವಿರುದ್ದ ಅಪ್ಪಚ್ಚು ಗೆಲುವು ಸಾಧಿಸಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗಣನೀಯ ಪ್ರಮಾಣದಲ್ಲಿ ಮತಗಳಿಸುವಲ್ಲಿ ಯಶಸ್ವಿಯಾಗಿದ್ದು ಗಮನಿಸಬೇಕಾದ ವಿಚಾರ. ಮುಂಬರುವ ಚುನಾವಣೆಯಲ್ಲೂ ಬಿಜೆಪಿಯಿಂದ ಅಪ್ಪಚ್ಚು ರಂಜನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ, ಹೊಸಬರಿಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ ಹೆಚ್ಚಾಗಿದೆ. ಕಾಂಗ್ರೆಸ್ಸಿನಿಂದ ಜೀವಿಜಯ, ಚಂದ್ರಮೌಳಿ ಅವರ ಹೆಸರೂ ಕೇಳಿ ಬರುತ್ತಿದೆ.
ಕ್ಷೇತ್ರದ ಮತದಾರರ ಸಂಖ್ಯೆ (2018ರ ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ)
ಪುರುಷರು: 1,07,979
ಮಹಿಳೆಯರು: 1,09,407
ಒಟ್ಟು ಮತದಾರರು: 2,17,386












Click it and Unblock the Notifications