Rain Alert: ಈ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲು, ಹವಾಮಾನ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 08: ಪೂರ್ವ ಮುಂಗಾರು ಮಳೆ ಕರ್ನಾಟಕದಾದ್ಯಂತ ಸಕ್ರಿಯಗೊಂಡಿದೆ. ಈ ಪೈಕಿ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನವೇ ಸುರಿದಿದೆ. ಗಂಟೆಗಳ ಕಾಲ ಬಿಸಿಲ ಮಧ್ಯೆ ಗುಡುಗು ಮಿಂಚು ಸಹಿತ ಅಬ್ಬರಿಸಿದೆ. ಬೇಸಿಗೆ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಮಳೆಗಾಲದ ವಾತಾವರಣ ನಿರ್ಮಾಣದಂತೆ ಭಾಸವಾಗಿದೆ. ಅಷ್ಟರ ಮಟ್ಟಿಗಿನ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೊಡಗು ವ್ಯಾಪ್ತಿಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಜೋರು ಮಳೆ ಶುರುವಾಗಿ ಗಂಟೆಗಳ ಕಾಲ ಸುರಿಯಿತು. ಇಲ್ಲಿನ ಮಡಿಕೇರಿ, ವಿರಾಜಪೇಟೆ, ಉದಯಗಿರಿ, ಪಯ್ಯಾವೂರ್, ಇರಿಟ್ಟಿ, ಇರಿಕ್ಕೂರ್ ವ್ಯಾಪ್ತಿಯಲ್ಲಿ ಭಾರೀ ಮಳೆ ದಾಖಲಾಯಿತು. ಉಳಿದಂತೆ ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆಯಿತು.

ಕೊಡಗಿನಲ್ಲಿ ಮುಂದಿನ ಐದು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ. ಆಗಾಗ ಬಿಸಿಲಿನ ದರ್ಶನವಾದರೂ ಸಹಿತ ಮಳೆ ನಿರಂತರವಾಗಿರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಚಿಕ್ಕಮಗಳೂರಿನಲ್ಲೂ ಭಾರೀ ಮಳೆ ದಾಖಲು
ಇನ್ನೂ ಚಿಕ್ಕಮಗಳೂರಿನಲ್ಲೂ ಇಂದೇ ವ್ಯಾಪಕ ಮಳೆ ಕಂಡು ಬಂದಿದೆ. ಹೊರನಾಡು, ಕಳಸ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಇಂದು ಪೂರ್ವ ಮುಂಗಾರು ಮಳೆ ಅಬ್ಬರಿಸಿದೆ. ಜಿಟಿ ಜಿಟಿ ರೂಪದಲ್ಲಿ ಹಿಡಿದ ಮಳೆ, ನಂತರ ನೋಡ ನೋಡುತ್ತಲೇ ಧಾರಾಕಾರವಾಗಿ ಸುರಿಯಲಾರಂಭಿಸಿತು.

ಚಿಕ್ಕಮಗಳೂರು ನಗರ ಹಾಗೂ ಕುದುರೆಮುಖದಲ್ಲಿ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ಸಾಧಾರಣ ಮಳೆ ಆಗಿದೆ. ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಇದೇ ರೀತಿ ಪೂರ್ವ ಮುಂಗಾರು ಮಳೆ ಚುರುಕಿನಿಂದ ಕೂಡಿರಲಿದೆ.
ಉಳಿದಂತೆ ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಕಲಬುರಗಿ, ಬೀದರ್, ವಿಜಯಪುರ, ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಲಿದೆ. ಬಿಸಿಲ ನಾಡು ಅತ್ಯಧಿಕ ತಾಪಮಾನ (40-42 ಡಿಗ್ರಿ ಸೆಲ್ಸಿಯಸ್ ತಾಪಮಾನ) ಕಂಡು ಬಂದಿದ್ದ ಕಲಬುರಗಿಯಲ್ಲಿ ಮಳೆ ತಂಪರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿ ಆಗ್ನೇಯ ಭಾಗದಲ್ಲಿ ಉಂಟಾಗಿರುವ ಚಂಡಮಾರುತ ಪ್ರಭಾವದಿಂದಾಗಿ ಕರ್ನಾಟಕದ ವಿವಿಧೆಡೆ ಮಳೆ ಆಗುತ್ತಿದೆ. ರಾಜ್ಯದಲ್ಲಿ ಮಳೆ ಬೀಳುವ ಪ್ರದೇಶದಲ್ಲಿ ತಾಪಮಾನ ಇಳಿಕೆ ಆಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಂಭವವಿದೆ.












Click it and Unblock the Notifications