ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ
ಮಡಿಕೇರಿ, ಸೆಪ್ಟೆಂಬರ್ 19 : ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ಆಪಾರ ನಷ್ಟವಾಗಿತ್ತು. ಈಗ ಕೊಡಗಿನಲ್ಲಿ ಬೇಸಿಗೆ ಕಾಲ. ಪ್ರವಾಹದಿಂದ ಸಂತ್ರಸ್ತರಾದವರು ಈಗ ಭವಿಷ್ಯದ ಚಿಂತೆಯಲ್ಲಿದ್ದಾರೆ.
ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆಗಸ್ಟ್ನಲ್ಲಿ ಉಕ್ಕಿ ಹರಿಯುತ್ತಿದ್ದ ಕಾವೇರಿ ಈಗ ಶಾಂತಳಾಗಿದ್ದಾಳೆ. ಮಳೆಯ ನೀರು ಭೂಮಿಯ ಒಡಲಿಲ್ಲಿ ಇಂಗಿ ಹೋಗಿದೆ. ಆದ್ದರಿಂದ, ರಸ್ತೆ ದುರಸ್ಥಿಯಂತಹ ಕಾರ್ಯಗಳು ವೇಗ ಪಡೆದುಕೊಂಡಿವೆ.
ಮಳೆ, ಭೂ ಕುಸಿತದಿಂದ ಸಂತ್ರಸ್ತರಾದವರಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತ ಪುರ್ನವಸತಿ ಕಲ್ಪಿಸುವ ಕಾರ್ಯವನ್ನು ಕೈಗೊಂಡಿದೆ. 100 ಎಕರೆ ಜಾಗದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಜಿಲ್ಲಾಡಳಿತ ಗುರುತಿಸುವ ಜಾಗದಲ್ಲಿ ಮೂರು ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಇನ್ನೂ ಘೋಷಣೆ ಮಾಡದ ಕಾರಣ ಮನೆ, ಶಾಶ್ವತ ರಸ್ತೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ......

ದುರಸ್ಥಿ ಕಾರ್ಯಕ್ಕೆ ಆದ್ಯತೆ
ಮಳೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯನ್ನು ಸಂಪರ್ಕಿಸುವ ವಿವಿಧ ರಸ್ತೆಗಳ ದುರಸ್ಥಿಗೆ ಆದ್ಯತೆ ನೀಡಿದೆ. ಜೆಸಿಬಿಗಳ ಮೂಲಕ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ಮಡಿಕೇರಿ-ಮಂಗಳೂರು ಸಂಪರ್ಕಿಸುವ ಜೋಡುಪಾಲ-ಸುಳ್ಯ ರಸ್ತೆಯನ್ನು ತ್ವರಿತಗತಿಯಲ್ಲಿ ದುರಸ್ಥಿ ಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ವಾಹನ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಮರಳು ಚೀಲಗಳ ಬಳಕೆ
ಜಿಲ್ಲೆಯಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ಥಿ ಮಾಡಲು ಮರಳಿನ ಚೀಲಗಳನ್ನು ಬಳಕೆ ಮಾಡಲಾಗುತ್ತಿದೆ. ಚೀಲಗಳಿಗೆ ಮರಳು ತುಂಬಿಸಿ, ರಸ್ತೆಯ ಎರಡೂ ಕಡೆ ಮತ್ತೆ ಭೂ ಕುಸಿತ ಉಂಟಾಗದಂತೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯ ರಾಮಕೊಲ್ಲಿ ಸೇತುವೆಯ ದುರಸ್ಥಿ ಕೆಲಸ ಪ್ರಗತಿಯಲ್ಲಿದೆ. ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಸಂಚಾರಕ್ಕೆ ಸಜ್ಜುಗೊಳಿಸಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಕುಡಿಯುವ ನೀರನ ವ್ಯವಸ್ಥೆ
ಮಳೆ ಮತ್ತು ಭೂ ಕುಸಿತದಿಂದಾಗಿ ಜಿಲ್ಲೆಯ ಹಲವು ಕಡೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲೆಯ ಮಕ್ಕಂದೂರು ಗ್ರಾಮ ಪಂಚಾಯಿತಿ ಭೂ ಕುಸಿತದಿಂದ ಹಾಳಾಗಿರುವ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಯನ್ನು ದುರಸ್ಥಿಗೊಳಿಸಿ, ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಯುಜಿಡಿ ಪೈಪ್ ಹಾಕಲು ತೆಗೆದಿದ್ದ ಗುಂಡಿಯಲ್ಲಿ ಮಣ್ಣು ನೀರು ತುಂಬಿಕೊಂಡಿದ್ದು, ಕೆಲವು ಭಾಗಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಎಷ್ಟು ಹಾನಿಯಾಗಿದೆ ಎಂಬ ಅಂದಾಜಿಲ್ಲ
ಕಾಫಿ ತೋಟವನ್ನು ಕಳೆದುಕೊಂಡ ರೈತರು ಕಂಗೆಟ್ಟಿದ್ದಾರೆ. ಎಷ್ಟು ಪ್ರಮಾಣದ ಪರಿಹಾರವನ್ನು ನೀಡಲಾಗುತ್ತದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಜಿಲ್ಲೆಯಲ್ಲಿ ಸುಮಾರು 4 ಸಾವಿರ ಎಕರೆ ಕಾಫಿ ತೋಟ ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವು ವರ್ಷಗಳ ಕಾಲ ಪ್ರದೇಶದಲ್ಲಿ ಬೆಳ ಬೆಳೆಯಲು ಸಾಧ್ಯವಿಲ್ಲದಂತೆ ತೋಟಕ್ಕೆ ಹಾನಿಯಾಗಿದೆ.
ಮಕ್ಕಂದೂರು, ಮುಕ್ಕೋಡ್ಲು, ತಂತಿಪಾಲ, ಕಾಂಡನಕೊಲ್ಲಿ, ಎಮ್ಮೆತಾಳ, ಹಟ್ಟಿಹೊಳೆಯಲ್ಲಿ ಸುಮಾರು 4 ರಿಂದ 5 ಎಕರೆ ಭೂಮಿ ಹೊಂದಿದ್ದ ರೈತರು ಜಮೀನನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.

ಸಂತ್ರಸ್ತರ ಸಂಖ್ಯೆ ಕಡಿಮೆ
ನಿರಾಶ್ರಿತರ ಕೇಂದ್ರದಲ್ಲಿ ಜನರು ಕಡಿಮೆಯಾಗುತ್ತಿದ್ದಾರೆ. ಮನೆ ಕುಸಿದು ಬಿದ್ದ ಪ್ರದೇಶಗಳಿಗೆ ಜನರು ಹೋಗುತ್ತಿದ್ದು, ಉಪಯೋಗಕ್ಕೆ ಬರುವ ಸಾಮಾನುಗಳು ಸಿಗುತ್ತವೆಯೇ? ಎಂದು ಹುಡುಕಾಟ ನಡೆಸುತ್ತಿದ್ದಾರೆ.
ಮನೆಗಳನ್ನು ಕಳೆದುಕೊಂಡವರಿಗೆ ಪುರ್ನವಸತಿ ಕಲ್ಪಿಸಲು 100 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿದೆ. ಗುರುತಿಸಲಾದ ಜಾವನ್ನು ಸಮತಟ್ಟು ಮಾಡಲಾಗಿದೆ. ಇಲ್ಲಿ ಮೂರು ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.












Click it and Unblock the Notifications