ಕೊಡಗು ಚಿತ್ರಗಳು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ
ಮಡಿಕೇರಿ, ಸೆಪ್ಟೆಂಬರ್ 03 : ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಆಗಸ್ಟ್ನಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದ ಸಂತ್ರಸ್ತರಾದ ಜನರಿಗೆ ತಾತ್ಕಾಲಿಕ ಶೆಡ್ಗನ್ನು ನಿರ್ಮಿಸಲು ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸುತ್ತಿದೆ.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸಂತ್ರಸ್ತರಿಗೆ ಜಂಬೂರು ಗ್ರಾಮದ ಬಳಿ ತಾತ್ಕಾಲಿಕ ಶೆಡ್ ನಿರ್ಮಿಸಲು ಸ್ಥಳಪರಿಶೀಲನೆಯನ್ನು ನಡೆಸಿದರು. ಜಿಲ್ಲಾಡಳಿತ ಹಲವು ಸ್ಥಳಗಳನ್ನು ಗುರುತು ಮಾಡಿದ್ದು, ಎಲ್ಲಿ ಶೆಡ್ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.
ಮಳೆಯಿಂದಾಗಿ ಮಡಿಕೇರಿನಗರದ ವಿವಿಧ ಬಡಾವಣೆಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಲೈನ್ಗೆ ಹಾನಿಯಾಗಿತ್ತು. ಅವುಗಳನ್ನು ಸರಿಪಡಿಸುವ ಕೆಲಸ ನಡೆದಿದೆ. ಮತ್ತೊಂದು ಕಡೆ ಭೂ ಕುಸಿತದಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂತ್ರಸ್ತ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ರಸ್ತೆಗಳನ್ನು ಸರಿಪಡಿಸುವ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯ, ಕೊಡಗಿನ ಪರಿಸ್ಥಿತಿ ಹೇಗಿದೆ? ಚಿತ್ರಗಳಲ್ಲಿ ನೋಡಿ...

1795 ಜನರು ಸಂತ್ರಸ್ತರ ಕೇಂದ್ರದಲ್ಲಿ
ಮಡಿಕೇರಿ ತಾಲೂಕಿನ 12 ಕಾಳಜಿ ಕೇಂದ್ರದಲ್ಲಿ 1,265 ಜನರು, ಸೋಮವಾರಪೇಟೆ ತಾಲೂಕಿನ 3 ಕಾಳಜಿ ಕೇಂದ್ರದಲ್ಲಿ 530 ಜನರು ಸೇರಿ ಒಟ್ಟು 15 ಕಾಳಜಿ ಕೇಂದ್ರದಲ್ಲಿ 1,795 ಜನರು ಆಶ್ರಯ ಪಡೆಯುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಡಾ.ಜಯಮಾಲ ಅವರು ಮಡಿಕೇರಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ
ನಾಪೋಕ್ಲು ಸುತ್ತಮುತ್ತಲು ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈಗ ವಿದ್ಯುತ್ ಪೂರೈಕೆಯ ಮುಖ್ಯ ತಂತಿಯನ್ನು ಸರಿಪಡಿಸಿ ಹಲವು ಗ್ರಾಮಗಳಿಗೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.
ಮತ್ತೊಂದು ಕಡೆ ಮಡಿಕೇರಿ ನಗರದ ವಿವಿಧ ಬಡಾವಣೆಗೆ ನೀರು ಸರಬರಾಜು ಆಗುವ ಪೈಪ್ ಲೈನ್ ಹಾಳಾಗಿತ್ತು. ನಗರಸಭೆ ಸಿಬ್ಬಂದಿ ಪೈಪ್ ಲೈನ್ ದುರಸ್ಥಿಗೊಳಿಸುತ್ತಿದ್ದಾರೆ.

ಆಹಾರ ಕಿಟ್ಗಳ ಪೂರೈಕೆ
ಸಂತ್ರಸ್ತ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ಜನರಿಗೆ ಆಹಾರ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿಯೇ ಜಿಲ್ಲೆಯಲ್ಲಿ ವಿಶೇಷ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.
ಕೊಡಗು ಜಿಲ್ಲೆಯ ಪಾರಣೆ ಮತ್ತು ಕೆ ನಿಡುಗಣೆ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ವಿಶೇಷ ಆಹಾರ ಕಿಟ್ ಗಳನ್ನು ಸಂತ್ರಸ್ತರಿಗೆ ವಿತರಣೆ ಮಾಡಲಾಯಿತು.

ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಸಂತ್ರಸ್ತರಿಗೆ ಜಂಬೂರು ಗ್ರಾಮದ ಬಳಿ ತಾತ್ಕಾಲಿಕ ಶೆಡ್ ನಿರ್ಮಿಸಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಥಳ ಪರಿಶೀಲನೆ ನಡೆಸಿದರು.
ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಎಕರೆ, ಕೆ.ನಿಗುಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಎಕರೆ, ಬಿಳಿಗೇರಿ ಬಳಿ 3.70 ಎಕರೆ ಜಾಗವನ್ನು ಗುರುತಿಸಲಾಗಿದೆ.

ವಿವಿಧ ಸ್ಥಳಗಳಿಗೆ ಭೇಟಿ
ಪ್ರಕೃತಿ ವಿಕೋಪದಿಂದ ಹೆಚ್ಚು ಹಾನಿಗೀಡಾದ ಮುಕ್ಕೋಡ್ಲು ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಹಾನಿಯ ಕುರಿತು ಮಾಹಿತಿ ಪಡೆದರು. ಹಟ್ಟಿಹೊಳೆ-ಮುಕ್ಕೋಡ್ಲು ರಸ್ತೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.












Click it and Unblock the Notifications