ಕತ್ತಲಲ್ಲಿ ಕಂಗೊಳಿಸಿತು ಐ ವೋಟ್ ಎಂಬ ಮೊಬೈಲ್ ಲೈಟ್ ಸಂದೇಶ!
ಮಡಿಕೇರಿ, ಮೇ 03; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರ ಬುಧವಾರ ನಡೆಯಲಿದೆ. ಮತದಾನದ ದಿನ ಎಲ್ಲಾ ಅರ್ಹರು ತಪ್ಪದೇ ಮತದಾನ ಮಾಡುವಂತೆ ಮಾಡಲು ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಕೊಡಗು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದು ಜನರ ಗಮನ ಸೆಳೆಯುತ್ತಿದೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕತ್ತಲಾಗುತ್ತಿದ್ದಂತೆಯೇ ನೂರಾರು ಜನರು ಮೊಬೈಲ್ ಟಾರ್ಚ್ಗಳನ್ನು ಆನ್ಮಾಡಿ ನಾನೂ ಮತ ಹಾಕುವೆ (I Vote) ಎಂಬ ಸಂದೇಶ ಸಾರಿದರು. ತುಂತುರು ಹನಿಯ ಮಳೆಯ ಸಿಂಚನದ ನಡುವೇ ನಡೆದ ಮತದಾನದ ಜಾಗೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಜನರು ಸಾಲಾಗಿ ನಿಗದಿತ ಸ್ಥಳದಲ್ಲಿ ನಿಂತು ಮೊಬೈಲ್ ಟಾರ್ಚ್ ಆನ್ ಮಾಡಿ, ಮತದಾನದ ಸಂದೇಶ ಸಾರಿದರು.

ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್ ಸಹಯೋಗದೊಂದಿಗೆ, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೊಬೈಲ್ ಲೈಟ್ ಬೆಳಗಿಸಿ ನಾನೂ ಮತಹಾಕುವೆ ಎಂಬ ಸಂದೇಶ ಸಾರುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ತಪ್ಪದೇ ಮತದಾನ ಮಾಡಿ; ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ, ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ್, ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಕೋರಿದರು. ಈಗಾಗಲೇ ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ ಕುಶಾಲನಗರದ ಚಿತ್ರಕಲಾ ಶಿಕ್ಷಕ, ಕೊಡಗು ಜಿಲ್ಲಾ ಚುನಾವಣಾ ರಾಯಭಾರಿ ಬಸವರಾಜ ಬಡಿಗೇರ್ ತಂಡದಿಂದ ಹಾಡುಗಾರಿಕೆ ಆಯೋಜಿಸಲಾಗಿತ್ತು. ಬಸವರಾಜ್ ಪುತ್ರಿ ಖಾಸಗಿ ಚಾನೆಲ್ನ ರಿಯಾಲಿಟಿ ಶೋ ವಿಜೇತ ಗಾಯಕಿ ಕುಶಾಲನಗರದ ಪ್ರಗತಿ ಬಡಿಗೇರ್, ಸಹೋದರಿಯರಾದ ಪ್ರತಿಕ್ಷಾ ಬಡಿಗೇರ್ ತ್ರಿವೇಣಿ ಬಡಿಗೇರ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಯುವಬಳಗದ ಶ್ರೀರಕ್ಷಾ ಪ್ರಭಾಕರ್ ಮುಂತಾದವರು ಹಾಡುಗಳನ್ನು ಹಾಡಿದರು.
ವಿಶಿಷ್ಟವಾಗಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ ಜನರ ಗಮನಸೆಳೆಯಿತು. ಐ ವೋಟ್ ಎಂಬ ಲೈಟ್ ಅಭಿಯಾನದಲ್ಲಿ ಪಾಲ್ಗೊಂಡ ಅನೇಕರು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ರೋಟರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದವು.
ನಿಷೇಧಾಜ್ಞೆ ಜಾರಿ; ಮೇ 10ರಂದು ಮತದಾನ ನಡೆಯುವ ಕಾರಣ ಕೊಡಗು ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 126 ರಡಿ ವ್ಯಾಖ್ಯಾನಿಸಿದ ಅಂಶಗಳಂತೆ, ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) 2005 ರ ಸೆಕ್ಷನ್ 144(ಎ)ರಡಿ ದತ್ತವಾದ ಅಧಿಕಾರದಂತೆ ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ. ಸಿ. ಸತೀಶ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿ/ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ರಾಜಕೀಯ ಸಭೆ-ಸಮಾರಂಭ ನಡೆಸುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.












Click it and Unblock the Notifications