ಕೊಡಗಿನಲ್ಲಿ ಈ ಬಾರಿ ತೀರ್ಥೋದ್ಧವ, ದಸರಾ ಆಚರಣೆ ಹೇಗಿರುತ್ತೆ?
ಮಡಿಕೇರಿ, ಅಕ್ಟೋಬರ್ 3: ಮಡಿಕೇರಿ ಗೋಣಿಕೊಪ್ಪ ದಸರಾ ಮತ್ತು ಕಾವೇರಿ ತೀರ್ಥೋದ್ಭವ ಪೂರ್ವ ಭಾವಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವೈರಾಣುವಿನ ಸಮಸ್ಯೆಯುಂಟಾಗಿದೆ. ಕೊಡಗಿನ ಕಾವೇರಿ ನೀರನ್ನು ಬೆಂಗಳೂರಿನ ಜನ ಕುಡಿಯುತ್ತಾರೆ. ಈ ನಿಟ್ಟಿನಲ್ಲಿ ಯಾವುದೇ ಲೋಪವಿಲ್ಲದಂತೆ ಕಾವೇರಿ ತೀರ್ಥೋದ್ಭವವನ್ನು ನಡೆಸಬೇಕಿದೆ ಎಂದರು.

ತಲಕಾವೇರಿ ಕ್ಷೇತ್ರ ಅಭಿವೃದ್ಧಿಗೆ ಒಂದು ಕೋಟಿ
ಭಾಗಮಂಡಲ ತಲಕಾವೇರಿ ಕ್ಷೇತ್ರ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಂದು ಕೋಟಿ. ರೂ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಬಿಬಿಎಂಪಿ ವತಿಯಿಂದ ನೀಡಲಾದ 1 ಕೋಟಿ ರೂ. ಚೆಕ್ ಅನ್ನು ಜಿಲ್ಲಾಧಿಕಾರಿರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಹಸ್ತಾಂತರಿಸಿದರು. ಕಾವೇರಿ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಈ ಹಣವನ್ನು ವಿನಿಯೋಗಿಸುವಂತೆ ತಿಳಿಸಿದರು.

ಮಡಿಕೇರಿ ದಸರಾಗೆ ಬೋಪಯ್ಯ ಸಲಹೆ
ಶಾಸಕರಾದ ಕೆ.ಜಿ ಬೋಪಯ್ಯ ಅವರು ಮಾತನಾಡಿ, ಮಡಿಕೇರಿ ದಸರಾ, ಮೈಸೂರು ದಸರಾದಂತೆ ವಿಜೃಂಭಣೆಯಿಂದ ನಡೆಯುತ್ತದೆ. ನಾಡಹಬ್ಬವಾಗಿ ಜಿಲ್ಲೆಯಲ್ಲಿ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸುವಂತಾಗಲಿ ಎಂದು ಹೇಳಿದರು. ಕರಗ ಉತ್ಸವಕ್ಕೆ ಧಕ್ಕೆ ಆಗದಂತೆ ಶಾಸ್ತ್ರೋಕ್ತವಾಗಿ ನಡೆಯಲಿ ಸಲಹೆ ಮಾಡಿದರು.

144 ಸೆಕ್ಷನ್ ಜಾರಿಯ ಸಲಹೆ
ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದಸರಾ ಆಚರಣೆಯಲ್ಲಿ ಹೆಚ್ಚು ಜನ ಸೇರುವುದು ಬೇಡ. ಈಗಾಗಲೆ ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರೂ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಆಚರಣೆಗೆ ಮಾತ್ರವೇ ಸೀಮಿತವಾಗಲಿ ಎಂದರು. ಈ ಸಂದರ್ಭ 144 ಸೆಕ್ಷನ್ ಜಾರಿ ಮಾಡಿದರೆ ಒಳಿತು ಎಂದು ಹೇಳಿದರು.
Recommended Video

ಕಾವೇರಿ ತೀರ್ಥೋದ್ಧವವೂ ಸರಳ
ಕಾವೇರಿ ತೀರ್ಥೋದ್ಭವ ಸಂಬಂಧ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ತಮ್ಮಯ್ಯ, ದೇವಾಲಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಈ ಬಾರಿ ಕಾವೇರಿ ತೀರ್ಥೋದ್ಭವವನ್ನು ಆಚರಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು. ಸಂಗಮದಲ್ಲಿ ಪಿಂಡಪ್ರದಾನ ಸಮರ್ಪಣೆ ಸಂಬಂಧಿಸಿದಂತೆ ಕೋವಿಡ್-19 ಮಾರ್ಗಸೂಚಿ ಅನ್ವಯ ಕ್ರಮ ವಹಿಸಲಾಗುವುದು. ತೀರ್ಥೋದ್ಭವದ ನಂತರ ಪುಣ್ಯ ಸ್ನಾನ ಮಾಡುವ ಪದ್ಧತಿ ಇದೆ. ಆದರೆ ಈ ಬಾರಿ ತೀರ್ಥ ಸ್ನಾನದ ಬದಲು ತೀರ್ಥ ಪ್ರೋಕ್ಷಣೆ ಮಾತ್ರವೇ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications