Cauvery River: ಕೊಡಗಿನಲ್ಲಿ ಅಬ್ಬರಿಸಿದ ಆರಿದ್ರಾ ಮಳೆ: ಕಾವೇರಿ ನದಿ ಮಟ್ಟ ಗರಿಷ್ಠ ಏರಿಕೆ
ಮಡಿಕೇರಿ, ಜೂನ್ 28 : ಕಾವೇರಿಯ ತವರು ಕೊಡಗಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಕಳೆದ ಎರಡು ದಿನಗಳಿಂದ ಆರಿದ್ರಾ ಮಳೆ ಅಬ್ಬರಿಸುತ್ತಿದ್ದು ತಲಕಾವೇರಿ, ಭಾಗಮಂಡಲ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಲಾರಂಭಿಸಿದ್ದು, ಮಳೆ ಹೀಗೆಯೇ ಮುಂದುವರೆದರೆ ಕಾವೇರಿ ನದಿ ಧುಮ್ಮಿಕ್ಕಿ ಹರಿದು ಜಲಾವೃತವಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ಮತ್ತು ಮುಂಗಾರು ಆರಂಭವೂ ಆಶಾದಾಯಕವಾಗಿತ್ತು. ಭಾರೀ ಮಳೆ ಸುರಿಯದಿದ್ದರೂ ಜಿಟಿ ಜಿಟಿ ಮತ್ತು ಆಗೊಮ್ಮೆ ಈಗೊಮ್ಮೆ ಜೋರು ಮಳೆ ಸುರಿದ ಕಾರಣದಿಂದ ನದಿಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುವತ್ತ ಸಾಗಿತ್ತು. ಇದೀಗ ಜೂ.21ರಿಂದ ಆರಂಭವಾದ ಆರಿದ್ರಾ ಮಳೆ ಎರಡು ದಿನಗಳಿಂದ ಅಬ್ಬರಿಸಲಾರಂಭಿಸಿದೆ. ಮಂಗಳವಾರ ರಾತ್ರಿಯೆಲ್ಲ ಬಿಡುವಿಲ್ಲದೆ ಮಳೆ ಸುರಿದಿದ್ದು, ಬುಧವಾರ ಬೆಳಗ್ಗಿನಿಂದಲೇ ಮಳೆ ಸುರಿಯಲಾರಂಭಿಸಿದೆ.

ಬ್ರಹ್ಮಗಿರಿ ಬೆಟ್ಟಶ್ರೇರಣಿಯ ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭಾಗಮಂಡಲದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಾರಿ ನೂತನ ಬೃಹತ್ ಸೇತುವೆ ನಿರ್ಮಾಣವಾಗಿರುವ ಕಾರಣ ಮೊದಲಿನಂತೆ ಭಾಗಮಂಡಲ ಮಡಿಕೇರಿಯೊಂದಿಗೆ ಸಂಪರ್ಕ ಕಳೆದು ಕೊಳ್ಳುವ ಸಂಕಷ್ಟ ತಪ್ಪಿದಂತಾಗಿದೆ. ಈ ನಡುವೆ ಹಳೆಯ ಸೇತುವೆ ಕುಸಿದು ಬಿದ್ದಿದ್ದು, ನೀರಿನ ಮಟ್ಟ ಸಂಗಮದ ಬಸವನ ಕಟ್ಟೆಯನ್ನು ಮುಳುಗಿಸಿದೆ.
ಸೇತುವೆ ನಿರ್ಮಾಣದಿಂದ ತಪ್ಪಿದ ಸಂಕಷ್ಟ
ಮೂರು ನದಿಗಳು ಸಂಗಮವಾಗುವ ಈ ಸ್ಥಳದಲ್ಲಿ ನೀರು ಸಂಗ್ರಹಗೊಂಡು ಬಳಿಕ ಹರಿಯುವ ಕಾರಣ ನೀರಿನ ಪ್ರಮಾಣ ಏರುತ್ತಾ ಹೋದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಲಿದೆ. ಇದರಿಂದ ಭಾಗಮಂಡಲ ಮತ್ತು ನಾಪೋಕ್ಲು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿ ಮೊದಲಿಗೆ ಸಂಪರ್ಕ ಕಡಿದು ಕೊಳ್ಳಲಿದೆ. ಸದ್ಯ ಆ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಒಂದು ವೇಳೆ ಇದೇ ರೀತಿ ಮಳೆ ಬಿಡುವಿಲ್ಲದೆ ಸುರಿದರೆ ಇನ್ನೊಂದು ದಿನದಲ್ಲಿ ಸಂಗಮ ಪ್ರದೇಶ ಜಲಾವೃತವಾಗುವ ಎಲ್ಲ ಸಾಧ್ಯತೆಗಳಿವೆ.
ಮಳೆಗಾಲಕ್ಕೂ ಮುನ್ನವೇ ಭಾಗಮಂಡಲ ಮಡಿಕೇರಿ ರಸ್ತೆ ಮಧ್ಯೆ ನೂತನ ಅತಿದೊಡ್ಡ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾದ ಕಾರಣದಿಂದಾಗಿ ತಲತಲಾಂತರದಿಂದ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯ ಜನ ಅನುಭವಿಸುತ್ತಾ ಬಂದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಮೊದಲೆಲ್ಲ ಮಳೆ ಸುರಿದು ತ್ರಿವೇಣಿ ಸಂಗಮ ಜಲಾವೃತವಾದರೆ, ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ವಾಸಿಸುವ ಗ್ರಾಮಗಳ ಜನರು ಹೊರಗಿನ ಸಂಪರ್ಕದಿಂದ ವಂಚಿತರಾಗಿ ಬಿಡುತ್ತಿದ್ದರು.

ಆಶಾಭಾವನೆ ಮೂಡಿಸಿದ ಮುಂಗಾರು ಮಳೆ
ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತ ನಿಯೋಜಿಸಿದ್ದ ಎನ್ ಡಿಆರ್ ಎಫ್ ತಂಡವು ದೋಣಿಗಳಲ್ಲಿ ದಾಟಬೇಕಾಗಿತ್ತು. ಕೆಲವೊಮ್ಮೆ ಅಗತ್ಯ ವಸ್ತುಗಳು ಸಿಗದೆ ಪರದಾಡಬೇಕಾಗಿತ್ತು. ಆದರೆ ಈ ವರ್ಷ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿಯ ಸಂದರ್ಭವೂ ಸಂಪರ್ಕ ಕಡಿದುಕೊಳ್ಳದೆ ತೆರಳಲು ಇಲ್ಲಿನ ಜನಕ್ಕೆ ಅವಕಾಶ ದೊರೆತಿದೆ. ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಬಿರುಸುಗೊಂಡರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನರು ಪ್ರವಾಹ ಪರಿಸ್ಥಿತಿಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಕಾವೇರಿ ನದಿ ಹರಿಯುವ ಬಹುತೇಕ ಪ್ರದೇಶಗಳನ್ನು ಪ್ರವಾಹ ಪೀಡಿತ ಪ್ರದೇಶವನ್ನಾಗಿ ಗುರುತಿಸಲಾಗಿದೆ.
ಭಾರೀ ಮಳೆ ಸುರಿದು ಪ್ರವಾಹ ಏರ್ಪಡುತ್ತಿದ್ದಂತೆಯಾ ಅಂತಹ ಪ್ರದೇಶಗಳಲ್ಲಿ ವಾಸ ಮಾಡುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಅಥವಾ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು ಮಳೆ ರಭಸ ಹೆಚ್ಚಾಗುತ್ತಿದ್ದಂತೆಯೇ ಹೊಳೆ, ತೋಡುಗಳು ತುಂಬಿ ಹರಿದು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ವ್ಯತ್ಯವಾಗುವುದು, ಬರೆ ಕುಸಿತವೂ ಸಂಭವಿಸಲಿದ್ದು ಜನ ಎಚ್ಚರಿಕೆ ವಹಿಸಬೇಕಾಗಿದೆ. ಒಟ್ಟಾರೆ ಕೊಡಗಿನಲ್ಲಿ ಬಿರುಸುಗೊಂಡಿರುವುದು ನೆಮ್ಮದಿ ತಂದಿದೆ.












Click it and Unblock the Notifications