ಡೆಡ್ ಸ್ಟೋರೇಜ್ ತಲುಪಿದ ಕೊಡಗಿನ ಹಾರಂಗಿ ಜಲಾಶಯ
ಕೊಡಗು, ಜೂನ್ 22: ಕಳೆದ ವರ್ಷದ ಮಳೆಯ ಅವಾಂತರದಿಂದ ಮಳೆ ಅಂದರೆ ಕೊಡಗಿನ ಜನ ಭಯಪಡುತ್ತಿದ್ದರು. ಆದರೆ ಈ ವರ್ಷ ಮಾತ್ರ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಏಕೈಕ ಹಾರಂಗಿ ಜಲಾಶಯ ಬರಿದಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸದ್ಯದ ಚಿತ್ರಣ ಇದು. ಕಳೆದ ಬಾರಿ ರಣಭೀಕರ ಮಳೆಯಿಂದ ಅತಿವೃಷ್ಟಿ ಸೃಷ್ಟಿಯಾಗಿತ್ತು. ಆದರೀಗ ಇಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ.

ಕಳೆದ ವರ್ಷ ಇಂದಿನ ದಿನಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಏನೇನೂ ಮಳೆ ಆಗಿಲ್ಲ. ಇದರ ಪರಿಣಾಮದಿಂದಾಗಿ ಹಾರಂಗಿ ಜಲಾಶಯದಲ್ಲಿ ನೀರು ಸಂಗ್ರಹಣೆಯಾಗಿಲ್ಲ. ಕಳೆದ ಬಾರಿ ಈ ಸಮಯಕ್ಕೆ ಬರೋಬ್ಬರಿ 1000 ಮಿ.ಮಿ. ಮಳೆಯಾಗಿತ್ತು. ಪರಿಣಾಮ ಹಾರಂಗಿ ಜಲಾಶಯಕ್ಕೆ 3.5 ಟಿಎಂಸಿ ನೀರು ಹರಿದು ಬಂದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ 200 ಮಿಮೀ ಮಾತ್ರವೇ ಮಳೆಯಾಗಿದೆ. ಪರಿಣಾಮ ಕೇವಲ 277 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಮ್ ನಲ್ಲಿ ಕೇವಲ 1.5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ 2 ಟಿಎಂಸಿ ನೀರು ಕಡಿಮೆಯಾಗಿದೆ. ಜಲಾಶಯದಲ್ಲಿ ನೀರು ಡೆಡ್ ಸ್ಟೋರೆಜ್ ತಲುಪಿದೆ.
ಹಾರಂಗಿ ಜಲಾಶಯದ ನೀರನ್ನ ಮೈಸೂರು, ಹಾಸನ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ 11 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ರೈತರು ಅವಲಂಬಿಸಿದ್ದಾರೆ. ಜಲಾಶಯದಲ್ಲಿ ನೀರು ಕಡಿಮೆಯಾಗಿರೋದು ವಿದ್ಯುತ್ ಉತ್ಪಾನೆಗೂ ಹಿನ್ನಡೆಯಾಗಿದೆ.
ಹಾರಂಗಿ ಜಲಾಶಯದ ನೀರು ನಂಬಿರೋ ರೈತರು ಆತಂಕದಲ್ಲಿದ್ದಾರೆ. ಕಳೆದ ಬಾರಿಯ ಜಲಪ್ರಳಯದಿಂದ ಜಲಾಶಯ ಬಹುತೇಕ ಹೂಳಿನಿಂದ ತುಂಬಿದೆ. ಹೂಳು ತುಂಬಿರೋ ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾಗುತ್ತದೆ. ಹೀಗಾಗಿಯೇ ಜಲಾಶಯದಲ್ಲಿ ಹೂಳು ತೆಗೆಯಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಅದಕ್ಕೆ ಸರ್ಕಾರ ಕೂಡ ಅಸ್ತು ಎಂದಿತ್ತು. ಹಾರಂಗಿ ಜಲಾಶಯ ಕೊಡಗಿಗಿಂತ ಕೆಆರ್ ಎಸ್ ಅವಲಂಭಿಸಿರೋರಿಗೆ ಹೆಚ್ಚು ಉಪಯೋಗಕರವಾಗಿದ್ದು, ಇಲ್ಲಿ ನೀರು ಸಂಗ್ರಹಣೆ ಕಡಿಮೆಯಾದರೇ ಎಫೆಕ್ಟ್ ಕಾವೇರಿ ನೀರನ್ನು ನಂಬಿರೋ ನದಿಪಾತ್ರದ ಜನರಿಗೂ ತಟ್ಟಲಿದೆ. ಅಷ್ಟೇ ಅಲ್ಲದೆ ಇದೇ ಪರಿಸ್ಥಿತಿ ಮುಂದುವರೆದರೆ ಕುಡಿಯೋ ನೀರಿಗೂ ಸಮಸ್ಯೆಯಾಗುವಲ್ಲಿ ಅನುಮಾನವಿಲ್ಲ.












Click it and Unblock the Notifications