ಮಡಿಕೇರಿ: ಅತ್ಯಾಚಾರ ಎಸಗಿ ಅತಿಥಿ ಶಿಕ್ಷಕಿಯ ಕೊಲೆ, ಆರೋಪಿ ಸೆರೆ
ಮಡಿಕೇರಿ ನವೆಂಬರ್ 17: ಶಾಲೆಗೆ ತೆರಳಿದ್ದ ಮಕ್ಕಳನ್ನು ಕರೆದುಕೊಂಡು ಬರಲು ತೆರಳುತ್ತಿದ್ದ ಅತಿಥಿ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನೇ ಕೃತ್ಯ ಎಸಗಿದ್ದೋ ಅಥವಾ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಕ್ಷಿಣಕೊಡಗಿನ ವೆಸ್ಟ್ ನೆಮ್ಮಲೆ ನಿವಾಸಿ ಕುಮಾರ ಎಂಬುವರ ಪುತ್ರಿ ಪ್ರಮೀಳಾ(33) ಎಂಬಾಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಗಂಡನೊಂದಿಗೆ ಸರಿಹೋಗದ ಕಾರಣದಿಂದ ತಂದೆ ಮನೆಯಲ್ಲಿದ್ದುಕೊಂಡು ಸಮೀಪದ ನೆಮ್ಮಲೆ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಮಕ್ಕಳಿಬ್ಬರು ಶೆಟ್ಟಿಗೇರಿ ಶಾಲೆಯಲ್ಲಿ ಓದುತಿದ್ದರಿಂದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಿ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು.
ಜ್ವರವಿದ್ದ ಕಾರಣ ಪ್ರಮೀಳಾ ಪಾಠ ಮಾಡಲು ಶಾಲೆಗೆ ಹೋಗಿರಲಿಲ್ಲ. ಸಂಜೆ ಮಕ್ಕಳು ಬರುವ ಸಮಯಕ್ಕೆ ಸರಿಯಾಗಿ ಹೋಗಿದ್ದಳು. ಆದರೆ ಮಕ್ಕಳನ್ನು ಕರೆದುಕೊಂಡು ಹೋದವಳು ಬಾರದೆಯಿದ್ದಾಗ ತಂದೆ ಕುಮಾರ ತೆರಳಿದ್ದಾರೆ. ಈ ವೇಳೆಗೆ ನರಳಾಟ ಕೇಳಿ ಜನರು ಬಂದಿದ್ದಾರೆ. ಹುಡುಕಾಟವಾಡಿದ್ದಾಗ ಕಾಫಿ ತೋಟದ ಬಳಿಯ ಕಾಡಿನಲ್ಲಿ ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಪ್ರಮೀಳ ಕಾಣಿಸಿದ್ದು ರಕ್ತದ ಮಡುವಿನಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆಯೇ ನಿರೀಕ್ಷಕ ದಿವಾಕರ್, ಸಬ್ಇನ್ಸ್ ಪೆಕ್ಟರ್ ರವಿಕಿರಣ್, ಸ್ಥಳಕ್ಕೆ ಬಂದಿದ್ದಾರೆ. ಮಡಿಕೇರಿಯ ಶ್ವಾನದಳವನ್ನು ಕರೆಯಿಸಲಾಗಿದೆ.[ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ]
ರಾತ್ರಿ 10.15ರ ವೇಳೆಯಲ್ಲಿ ಶ್ವಾನ ದಳದೊಂದಿಗೆ ಕೃತ್ಯ ನಡೆದ ಕಾಡಿನ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಕಾಫಿ ಗಿಡದ ಬುಡದಲ್ಲಿ ಸಿಮ್ ತೆಗೆಯಲಾಗಿದ್ದ ಖಾಲಿ ಮೊಬೈಲ್ ಅಲರಾಂ ಶಬ್ದ ಮಾಡಿದೆ. ಈ ಮೊಬೈಲ್ನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಜೇನುಕುರುಬರ ಹರೀಶ್ನ ಭಾವಚಿತ್ರವನ್ನು ಸ್ಥಳೀಯರು ಗುರುತಿಸಿದ್ದಾರೆ. ಕೂಡಲೇ ಆತನಿದ್ದ ಲೈನ್ ಮನೆಗೆ ದಾಳಿ ಮಾಡಿ ರಾತ್ರಿ 11 ಗಂಟೆಯ ವೇಳೆಯಲ್ಲಿ ಆರೋಪಿ ಹರೀಶನನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಂದರ್ಭ ತಾನು ಈ ಹಿಂದೆ ಕೊಂಡಂಗೇರಿಯಲ್ಲಿ ವಾಸವಿದ್ದು ಕಳೆದ 5 ವರ್ಷಗಳಿಂದ ತಂದೆ ಮುತ್ತ ಹಾಗೂ ತಾಯಿಯೊಂದಿಗೆ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ವಾಸವಿದ್ದು ಪ್ರಮೀಳಾಳ ತಂದೆ ಕುಮಾರ್ ಅವರ ಮನೆಯಲ್ಲಿ ಸಮಯ ಸಿಕ್ಕಿದಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದುದಾಗಿ ಹೇಳಿದ್ದಾನೆ.[ಇಬ್ಬರು ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಂದ ತಂದೆ]
ಮಡಿಕೇರಿಯಲ್ಲಿ ಶವ ಪರೀಕ್ಷೆ ನಡೆಸಿದ್ದು ತಲೆ ಹಾಗೂ ಮುಖದ ಭಾಗಕ್ಕೆ ಮಾರಣಾಂತಿಕ ಹಲ್ಲೆಯಿಂದ ಮರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಶವಸಂಸ್ಕಾರ ಸಂದರ್ಭ ಅತ್ಯಾಚಾರ ನಡೆದ ಬಗ್ಗೆ ಪೂರಕ ಸಾಕ್ಷಿಗಾಗಿ ಕೆಲವು ಅಂಶಗಳನ್ನು ದೃಢಪಡಿಸಲು ಪ್ರಾಥಮಿಕವಾಗಿ ಮೈಸೂರು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಲಿದೆ. ನಂತರ ಬೆಂಗಳೂರು ಪ್ರಯೋಗಾಲಯದಲ್ಲಿ ಡಿಎನ್ಎ ಪರೀಕ್ಷೆ ನಡೆಯಲಿದ್ದು, ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಇದು ಪ್ರಮುಖ ಸಾಕ್ಷಿಯಾಗಲಿದೆ.
ಈ ನಡುವೆ ಒಬ್ಬನೇ ಅತ್ಯಾಚಾರ ಎಸಗಿದ್ದೋ ಅಥವಾ ಇವನೊಂದಿಗೆ ಬೇರೆಯವರು ಇದ್ದಾರೋ ಎಂಬುದು ತಿಳಿದು ಬರಬೇಕಿದೆ. ಕೊಡಗಿನಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಒಂಟಿಮನೆಗಳಿದ್ದರೂ ಇಂತಹ ಘಟನೆಗಳು ನಡೆದಿರಲಿಲ್ಲ. ಇದೀಗ ಪ್ರಮೀಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ.